ಭಾರತಕ್ಕೆ ಶೀಘ್ರದಲ್ಲೇ ವಿಮಾನಯಾನ ಪುನರಾರಂಭ : ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ
ಕೊಲಂಬೊ, ಜೂನ್ 14: ಶ್ರೀಲಂಕಾ ಶೀಘ್ರದಲ್ಲೇ ಜಾಫ್ನಾದಿಂದ ಭಾರತಕ್ಕೆ ವಿಮಾನಯಾನವನ್ನು ಪುನರಾರಂಭಿಸಲಿದೆ ಎಂದು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ, ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆಗಳನ್ನು ರೂಪಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವು ಈ ವರ್ಷದ ಅಂತ್ಯದ ವೇಳೆಗೆ 800,000 ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದೆ. ಪ್ರಯಾಣಕ್ಕೆ ಅನುಕೂಲವಾಗುವಂತೆ ಜಾಫ್ನಾ ಪಲಾಲಿ ವಿಮಾನ ನಿಲ್ದಾಣದಿಂದ ಭಾರತದ ಸ್ಥಳಗಳಿಗೆ ವಿಮಾನಗಳನ್ನು ಪುನರಾರಂಭಿಸಲು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಆದೇಶಿಸಿದ್ದಾರೆ.
ಉದ್ಯಮದ ಪಾಲುದಾರರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಮೇ ತಿಂಗಳಲ್ಲಿ ಭಾರತದ 5,562 ಪ್ರವಾಸಿಗ ಭೇಟಯೊಂದಿದೆ ಶ್ರೀಲಂಕಾದ ಅತಿ ದೊಡ್ಡ ಪ್ರವಾಸಿ ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ. ಇದೇ ವೇಳೆ ಇಂಗ್ಲೆಂಡ್ನಿಂದ 3,723ಕ್ಕೂ ಹೆಚ್ಚು ಪ್ರವಾಸಿಗರು ಶ್ರೀಲಂಕಾಗೆ ಭೇಟಿ ನೀಡಿದ್ದಾರೆ.
ಇದೆಲ್ಲದರ ನಡುವೆಯೂ, ಮೇ ತಿಂಗಳಲ್ಲಿ ಶ್ರೀಲಂಕಾಕ್ಕೆ ಆಗಮಿಸಿದ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯು ಸುಮಾರು 52 ಪ್ರತಿಶತದಷ್ಟು ಕುಸಿದಿದೆ, ಏಪ್ರಿಲ್ಗೆ ಮತ್ತು ಮಾರ್ಚ್ಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಶೇಕಡಾ 72 ರಷ್ಟು ಕುಸಿದಿದೆ.

ಪ್ರವಾಸೋದ್ಯಮದ ಮೇಲೆ ಹೊಡೆತ
ದೇಶದಲ್ಲಿ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯ ಪರಿಣಾಮಗಳಿಂದ ಪ್ರಮುಖ ಮಾರುಕಟ್ಟೆ ದೇಶಗಳು ಪ್ರಯಾಣಿಕರಿಗೆ ಶ್ರೀಲಂಕಾ ಪ್ರವಾಸದ ಬಗ್ಗೆ ಸಲಹೆ ನೀಡದೇ ಇರುವುದೇ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ.
COVID-19 ಸಾಂಕ್ರಾಮಿಕ ರೋಗದಿಂದಾಗಿ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣ ರವಾನೆ ಕಡಿಮೆಯಾಗಿದ್ದು ಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಪ್ರವಾಸೋದ್ಯಮದ ಮೇಲೆ ಶ್ರೀಲಂಕಾ ಆರ್ಥಿಕತೆ ಅತಿ ಹೆಚ್ಚು ಅವಲಂಬನೆಯಾಗಿತ್ತು.

ಹದಗೆಟ್ಟಿರುವ ಶ್ರೀಲಂಕಾ ಆರ್ಥಿಕತೆ
2.2 ಕೋಟಿ ಜನಸಂಖ್ಯೆ ಹೊಂದಿರುವ ದ್ವೀಪರಾಷ್ಟ್ರ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿಹೋಗಿದೆ. 1948 ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಪ್ರಸ್ತುತ ತುಂಬಾ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ಆಹಾರ, ಔಷಧಿ, ಅಡುಗೆ ಅನಿಲ ಮತ್ತು ಇತರ ಇಂಧನ, ಟಾಯ್ಲೆಟ್ ಪೇಪರ್ ಮತ್ತು ಬೆಂಕಿಕಡ್ಡಿಗಳಂತಹ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಿದೆ.
ಇಂಧನ ಮತ್ತು ಅಡುಗೆ ಅನಿಲವನ್ನು ಖರೀದಿಸಲು ಶ್ರೀಲಂಕಾದವರು ಅಂಗಡಿಗಳ ಹೊರಗೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಆಂತರಿಕ ದಂಗೆ, ಜಗಳ ಕೂಡ ದ್ವೀಪ ರಾಷ್ಟ್ರದ ಪ್ರವಾಸೋದ್ಯಮದ ಮೇಲೆ ಪೆಟ್ಟು ನೀಡಿದೆ.

ದಾಖಲೆ ಪ್ರಮಾಣದಲ್ಲಿ ಹೆಚ್ಚಾದ ಹಣದುಬ್ಬರ
ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದ್ವೀಪ ರಾಷ್ಟ್ರದಲ್ಲಿ ವಾರ್ಷಿಕ ಹಣದುಬ್ಬರವು ಏಪ್ರಿಲ್ನಲ್ಲಿ ದಾಖಲೆಯ ಶೇಕಡಾ 33.8 ಕ್ಕೆ ಹೆಚ್ಚಳವಾಗಿದೆ, ಆಹಾರ ಹಣದುಬ್ಬರವು ಇನ್ನೂ ಹೆಚ್ಚಾಗಿದ್ದು ಶೇಕಡಾ 45.1ರಷ್ಟಾಗಿದೆ.
ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯಿಂದ ಆಕ್ರೋಶಗೊಂಡಿರುವ ನಾಗರಿಕರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಡಾಲರ್ ವಿರುದ್ಧ ಶ್ರೀಲಂಕಾ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ.

ದ್ವೀಪ ರಾಷ್ಟ್ರಕ್ಕೆ ಭಾರತದ ಆಸರೆ
ನೂತನ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ನೇಮಕಗೊಂಡ ನಂತರ ದೇಶದ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅದರಲ್ಲೂ ಭಾರತ ಶ್ರೀಲಂಕಾಗೆ ಅಗತ್ಯವಿರುವ ಇಂಧನ ತೈಲವನ್ನು ಪೂರೈಸುತ್ತಿದೆ. ಶ್ರೀಲಂಕಾದ ಆರ್ಥಿಕತೆ ಚೇತರಿಸಿಕೊಳ್ಳಲು ಭಾರತ ಅಗತ್ಯ ಬೆಂಬಲ ನೀಡುತ್ತಿದೆ ಎಂದು ಶ್ರೀಲಂಕಾ ಪ್ರಧಾನಿಯೇ ಹೇಳಿಕೊಂಡಿದ್ದರು.












Click it and Unblock the Notifications