'ಉತ್ತರ ಕೊಡಿ ಶಾ' ಬಿಜೆಪಿ ವಿರುದ್ದ ಮುಗಿಬಿದ್ದ ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 13: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ಪ್ರವಾಸಕ್ಕೆ ರಾಜ್ಯಕ್ಕೆ ಆಗಮಿಸಿರುವ ಬೆನ್ನಲ್ಲೆ ಶಾ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ.
ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಹರಿಹಾಯ್ದರು. ಮಾತ್ರವಲ್ಲದೆ ಶಾ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಕ್ಯಾಂಪೇನ್ ಕೂಡಾ ನಡೆಸುತ್ತಿದೆ.
"ಶಾ ರಾಜ್ಯಕ್ಕೆ ಬಂದಿರುವುದು ಕರ್ನಾಟಕಕ್ಕೆ ಉಪಕಾರ ಮಾಡಲು ಅಲ್ಲ. ಆಪರೇಷನ್ ಕಮಲದಂಥ ಕೀಳು ರಾಜಕೀಯ ಮಾಡಲು ಬಂದಿದ್ದಾರೆ," ಎಂದು ಗುಂಡೂರಾವ್ ಕಿಡಿಕಾರಿದ್ದಾರೆ.

ಬ್ಯಾಂಕ್ ಗಳ ಸಾಲ ಮನ್ನಾಕ್ಕೆ ಒತ್ತಾಯಿಸ್ತೀರೋ?
"ನರೇಂದ್ರ ಮೋದಿ ರೈತರಿಗೆ ನೀಡಿದ್ದ ಭರವಸೆ ಏನಾಯ್ತು? ಅದರ ಬಗ್ಗೆ ನೀವು ಮಾತಾಡುತ್ತೀರೋ? ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿದಂತೆ ಪ್ರಧಾನಿಗಳ ಬಳಿ ರಾಷ್ಟ್ರೀಯ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವಂತೆ ಅಮಿತ್ ಶಾ ಕೇಳುತ್ತಾರಾ?," ಎಂದು ದಿನೇಶ್ ಗುಂಡೂರಾವ್ ನೇರ ಪ್ರಶ್ನೆ ಎಸೆದಿದ್ದಾರೆ.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
|
8,000 ಕನ್ನಡಿಗರ ಕೆಲಸಕ್ಕೆ ಕುತ್ತು
"ಮೋದಿ ಸರಕಾರ ಬ್ಯಾಂಕ್ ಪರೀಕ್ಷೆಯ ನಿಯಮಗಳನ್ನು ಬದಲಾಯಿಸಿದೆ. ಇದರಿಂದ 8,000 ಕನ್ನಡಿಗರ ಕೆಲಸಕ್ಕೆ ಕುತ್ತು ಬರಲಿದೆ. ಇದಕ್ಕೆ ಉತ್ತರಿಸುತ್ತೀರಾ ಅಮಿತ್ ಶಾ? ಪೋರ್ಚುಗಲ್ ನಲ್ಲಿ ದುರಂತ ನಡೆದರೆ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ ಗೋರಖಪುರ ದುರಂತದ ಬಗ್ಗೆ ಯಾಕೆ ಟ್ವೀಟೂ ಮಾಡುತ್ತಿಲ್ಲ, ಮಾತೂ ಯಾಕೆ ಆಡುತ್ತಿಲ್ಲ?," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಮೋದಿ ನಡೆಯನ್ನು ಟೀಕಿಸಿದ್ದಾರೆ.
|
ಬರ ಪರಿಹಾರದಲ್ಲಿ ಯಾಕೆ ಅನ್ಯಾಯ
"ಬರ ಪರಿಹಾರವಾಗಿ ಮಹಾರಾಷ್ಟ್ರಕ್ಕೆ 8,195 ಕೋಟಿ, ಗುಜರಾತ್ ಗೆ 3,894 ಕೋಟಿ ನೀಡಿದ್ದೀರಿ, ಆದರೆ ಕರ್ನಾಟಕಕ್ಕೆ 1527 ಕೋಟಿ ನೀಡಿದ್ದು ಅನ್ಯಾಯವಲ್ವಾ ಅಮಿತ್ ಶಾ? ಮಹಾದಾಯಿ ವಿವಾದ ಬಗೆಹರಿಸಲು ಬಿಜೆಪಿ ಯಾಕೆ ಪ್ರಯತ್ನಿಸಬಾರದು? ಇದರ ಬಗ್ಗೆ ನೀವು ಮೋದಿಗೆ ಹೇಳುತ್ತೀರೋ? ಇದಕ್ಕೆ ನೀವು ಉತ್ತರಿಸುತ್ತೀರೋ?" ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

ವ್ಯವಸ್ಥಿತ ಸುಳ್ಳು ಪ್ರಚಾರ
"ಗಣೇಶ ಚತುರ್ಥಿ ಸುತ್ತೋಲೆ ಹೆಸರಿನಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸುಳ್ಳುಗಳನ್ನು ವ್ಯವಸ್ಥಿತವಾಗಿ ಹರಡುವ ಮೂಲಕ ಕೋಮು ಸೌಹಾರ್ಧಕ್ಕೆ ಧಕ್ಕೆ ತರುತ್ತಿದ್ದಾರೆ," ಎಂದೂ ಗುಂಡೂರಾವ್ ಇದೇ ವೇಳೆ ಆಕ್ಷೇಪಿಸಿದರು.
"ಕರ್ನಾಟಕದಲ್ಲಿ ವಿಸ್ತಾರಕ ಪ್ರಚಾರ ನಡೆಸುತ್ತಿರುವ ಬಿಜೆಪಿಗರು ಮೋದಿ ಸರಕಾರದ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ಹರಡುತ್ತಿದ್ದಾರೆ. ನೀವು ಇದನ್ನು ಸರಿಪಡಿಸುತ್ತಿರಾ ಅಮಿತ್ ಶಾ?" ಎಂದು ದಿನೇಶ್ ಗುಂಡೂರಾವ್ ಕಾಲೆಳೆದಿದ್ದಾರೆ.

ರೈತರ ಬಗ್ಗೆ ಉತ್ತರ ಕೊಡಿ
ಕೌಶಲ್ಯ ಭಾರತವನ್ನು ಭಾರೀ ಉತ್ಸಾಹದಲ್ಲಿ ಪ್ರಾರಂಭಿಸಲಾಯಿತು. ಆದರೆ 12 ಸಾವಿರ ಕೋಟಿ ಸುರಿದೂ ನಿಮ್ಮಿಂದ ಉದ್ಯೋಗ ನೀಡಲು ಸಾಧ್ಯವಾಗಿದ್ದು 2014 ನೀವು ಭರವಸೆ ನೀಡಿದ 1 ಕೋಟಿ ಉದ್ಯೋಗದಲ್ಲಿ ಶೇ. 3.4 ಮಾತ್ರ. ಇದೇನು ಪಿಆರ್ ಚಟುವಟಿಕೆಯೇ? ಫಸಲ್ ಭಿಮಾ ಯೋಜನೆಯನ್ನು ರೈತರ ಬದಲು ಇನ್ಶೂರೆನ್ಸ್ ಕಂಪೆನಿಗಳಿಗೆ ಲಾಭವಾಗುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ರೈತರು ಕಟ್ಟಿದ ಹಣ ಎಲ್ಲಿ ಹೋಯಿತು ಎಂದು ಅಮಿತ್ ಶಾ ಉತ್ತರಿಸುತ್ತಾರಾ? ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.












Click it and Unblock the Notifications