ಕೊರೊನಾ.. ಪ್ರಕೃತಿ ಪಾಲಿಗೆ ವರದಾನ: ನಾವು ಅರಗಿಸಿಕೊಳ್ಳಲೇಬೇಕಾದ ಕಠೋರ ಸತ್ಯ!
ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇಲ್ಲಿಯವರೆಗೂ 14 ಸಾವಿರಕ್ಕೂ ಅಧಿಕ ಮಂದಿಯ ಪ್ರಾಣವನ್ನು ಡೆಡ್ಲಿ ಕೊರೊನಾ ಬಲಿ ಪಡೆದಿದೆ. ಕೊರೊನಾ ಹೊಡೆತದಿಂದಾಗಿ ಎಲ್ಲರಿಗೂ ಸಾವಿನ ಭಯ ಕಾಡುತ್ತಿದೆ. ನೆಮ್ಮದಿಯ ಉಸಿರಾಟವೂ ಇದೀಗ ಅಸಾಧ್ಯವೆನ್ನುವ ಸ್ಥಿತಿ ನಿರ್ಮಾಣವಾಗಿದೆ.
Recommended Video
ಮನುಷ್ಯ ಜಗತ್ತಿಗೆ ಕೊರೊನಾ ಕ್ರೂರಿಯಾಗಿ ಕಂಡರೂ, ಪ್ರಕೃತಿ ಪಾಲಿಗೆ ಅದು ವರವಾಗಿ ಪರಿಣಮಿಸಿದೆ. ಆಧುನಿಕತೆಯ ಭರದಲ್ಲಿ ಪ್ರಕೃತಿಯ ನೈಜ ಲೆಕ್ಕಾಚಾರವನ್ನು ಮೀರಿ ಬೆಳೆದು ನಿಂತಿರುವ ಮನುಷ್ಯನಿಗೆ ಬುದ್ಧಿ ಕಲಿಸಲೆಂದೇ ಕೊರೊನಾ ಬಂದಂತಿದೆ.
ತನ್ನ ಸ್ವಾರ್ಥಕ್ಕಾಗಿ ಜೀವ ಜಗತ್ತಿನ ಅಲಿಖಿತ ನಿಯಮಗಳನ್ನು ಮನುಷ್ಯ ಮೀರಿರುವುದರ ಪರಿಣಾಮ ಮನುಷ್ಯ-ಪ್ರಾಣಿ ಸಂಘರ್ಷ ಸಂಭವಿಸುತ್ತಿವೆ. ಮನುಷ್ಯನ ಅತಿಕ್ರಮಣದಿಂದಾಗಿ ಪ್ರಾಣಿ-ಪಕ್ಷಿಗಳು ತಮ್ಮ ಮೂಲ ನೆಲೆಗಳಿಂದ ದೂರ ಸರಿದು ನಿಂತಿವೆ. ಈ ಎಲ್ಲವಕ್ಕೂ 'ರೀ-ಸೆಟ್ ಬಟನ್' ಒತ್ತಲಿಕ್ಕೆಂದೇ ಕೊರೊನಾ ಎಂಟ್ರಿಕೊಟ್ಟ ಹಾಗಿದೆ.
ಇದರ ಜೊತೆಗೆ ಯಾಂತ್ರಿಕ ಜಗತ್ತಿನಲ್ಲಿ ಮುಳುಗಿರುವ ಮನುಷ್ಯರಿಗೆ ಮಾನವೀಯ ಮೌಲ್ಯ ಮತ್ತು ಸಂಬಂಧದ ಬೆಲೆ ಬಹುತೇಕ ಮರೆತು ಹೋಗುವಂತಾಗಿತ್ತು. ಮೊಬೈಲ್ ನಲ್ಲೇ ಅವಿತು, ಮುಂದಿದ್ದವರನ್ನೂ ಮಾತನಾಡಿಸದ ಹಂತಕ್ಕೆ ಟೆಕ್ನಾಲಜಿ ನಮ್ಮನ್ನೆಲ್ಲ ತಂದು ನಿಲ್ಲಿಸಿತ್ತು. ವಾಸ್ತವದಲ್ಲಿ ಬದುಕುವುದನ್ನೇ ಮರೆತು ನಿಂತಿದ್ದ ಮನುಷ್ಯರಿಗೆ ಕೊರೊನಾ ತಕ್ಕ ಪಾಠ ಕಲಿಸುತ್ತಿದೆ.

ಮನುಷ್ಯರಿಗೆ ಕೇಡುಗಾಲ, ಪ್ರಕೃತಿಗೆ ಆಶಾಕಿರಣ
ಕೊರೊನಾದಿಂದ ಮನುಷ್ಯರಿಗೆ ಕೇಡುಗಾಲ ಶುರುವಾಗಿದ್ದರೂ, ಪ್ರಕೃತಿಗೆ ಮಾತ್ರ ಆಶಾಕಿರಣವಾಗಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಬಹುತೇಕ ರಾಷ್ಟ್ರಗಳು 'ಲಾಕ್ ಡೌನ್' ಮಂತ್ರವನ್ನು ಜಪಿಸುತ್ತಿವೆ. ಇದರ ಪರಿಣಾಮ ಜನನಿಬಿಡ ಪ್ರದೇಶಗಳೆಲ್ಲವೂ ನಿರ್ಜನವಾಗಿದೆ. ಬಹುತೇಕ ಎಲ್ಲರೂ ಮನೆಯಲ್ಲೇ ಇರುವ ಕಾರಣ, ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ವಾತಾವರಣ ತಿಳಿಗೊಂಡಿದೆ.

ಖಾಲಿ.. ಖಾಲಿ.. ಖಾಲಿ
ಕೊರೊನಾ ಕಾಲಿಟ್ಟ ಕೆಲವೇ ಕೆಲವು ತಿಂಗಳಲ್ಲಿ ಹಲವು ಬದಲಾವಣೆಗಳು ಪ್ರಕೃತಿಯಲ್ಲಿ ಕಾಣ ಸಿಕ್ಕಿವೆ. ಮನರಂಜನಾ ತಾಣಗಳು, ಥಿಯೇಟರ್ ಗಳು, ಮಾಲ್ ಗಳು ಖಾಲಿ ಹೊಡೆಯುತ್ತಿವೆ. ಪ್ರವಾಸಿ ತಾಣಗಳು ಭಣಗುಟ್ಟುತ್ತಿವೆ. ಬೀಚ್ ಗಳು ನಿರ್ಜನವಾಗಿದೆ. ಕಲುಷಿತಗೊಂಡಿದ್ದ ನೀರಿನ ಆಸರೆಗಳು ಸ್ವಚ್ಛಗೊಳ್ಳುತ್ತಿವೆ.
|
ಡಾಲ್ಫಿನ್ ಗಳ ನರ್ತನ
ಕೊರೊನಾದಿಂದಾಗಿ ಕಂಗೆಟ್ಟು ನಿಂತಿರುವ ಇಟಲಿಯೊಳಗೆ ಪ್ರಕೃತಿ ನಳನಳಿಸಲು ಆರಂಭಿಸಿದೆ. ಸದಾ ಹಡಗು, ಕ್ರೂಸರ್ ಗಳಿಂದ ತುಂಬಿರುತ್ತಿದ್ದ ಸಾರ್ಡಿನಿಯಾ ಕಾಲುವೆಯಲ್ಲೀಗ ಡಾಲ್ಫಿನ್ ಗಳು ನರ್ತಿಸುತ್ತಿವೆ.
|
ರಾಜಹಂಸಗಳ ಈಜಾಟ
ಪ್ರವಾಸೋದ್ಯಮದ ಹಿನ್ನಲೆಯಲ್ಲಿ ಹೊಲಸಾಗಿದ್ದ ಇಟಲಿಯ ಕಾಲುವೆಗಳೀಗ ಶುಚಿಗೊಳ್ಳುತ್ತಿದ್ದು, ರಾಜಹಂಸಗಳ ಈಜಾಟ ನಿರ್ಬಿಡೆಯಿಂದ ಸಾಗುತ್ತಿದೆ.
|
ನೀರು ನಾಯಿಗಳಿಗೆ ಫ್ರೀಡಂ
ಪ್ರವಾಸಿಗರಿಂದ ಸದಾ ಗಿಜಿಗಿಡುತ್ತಿದ್ದ ಸಿಂಗಾಪುರ್ ನ ಸಮುದ್ರದಂಚಿನ ಬೀದಿಗಳು ಮತ್ತು ಬೀಚ್ ಗಳಲ್ಲಿ ನೀರು ನಾಯಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿವೆ.
|
ಈಜಿಪ್ಟ್ ಬಾತುಗಳು ಪ್ರತ್ಯಕ್ಷ
ತಮ್ಮ ಮೂಲ ಹಾರಾಟ ಕೇಂದ್ರಗಳು ವಿಮಾನ ನಿಲ್ದಾಣಗಳಾಗಿ ಬದಲಾದ ಕಾರಣದಿಂದ ಏರ್ ಪೋರ್ಟ್ ಪ್ರದೇಶಗಳಲ್ಲಿ ಹಾರಾಟವನ್ನು ನಿಲ್ಲಿಸಿದ್ದ ಈಜಿಪ್ಟ್ ನ ಬಾತುಗಳು ಮರಳಿ ಅಲ್ಲೇ ಪ್ರತ್ಯಕ್ಷವಾಗಿವೆ. ವಾರಗಳಿಂದ ವಿಮಾನ ಹಾರಾಟ ಸ್ಥಗಿತಗೊಂಡಿರುವ ಕಾರಣದಿಂದಾಗಿ ರನ್ ವೇ ನಲ್ಲಿ ಈಜಿಪ್ಟ್ ಬಾತುಗಳು ನಿರ್ಭೀತಿಯಿಂದ ಪರಿವಾರ ಸಮೇತವಾಗಿ ಓಡಾಡುವಂತಾಗಿದೆ.
|
ಶಿಕಾಗೋ ಅಕ್ವೇರಿಯಮ್ ನಲ್ಲಿ ಪೆಂಗ್ವಿನ್ ತಿರುಗಾಟ
ಜನಜಂಗುಳಿಯಿಂದ ಸದಾ ತುಂಬಿ ತುಳುಕುತ್ತಿದ್ದ ಜಗತ್ಪ್ರಸಿದ್ಧ ಶಿಕಾಗೋ ಅಕ್ವೇರಿಯಮ್ ನಲ್ಲಿ ಪ್ರಾಣಿ ಪ್ರಪಂಚಕ್ಕೀಗ ಕೊಂಚ ರಿಲೀಫ್ ಸಿಕ್ಕಿದೆ. ಅಕ್ವೇರಿಯಮ್ ಒಳಗಿದ್ದ ಪೆಂಗ್ವಿನ್ ಗಳು ಇದೀಗ ಸ್ವತಂತ್ರವಾಗಿ ಅಂಗಳದಲ್ಲಿ ತಿರುಗಾಡುತ್ತಿವೆ.

ಪ್ರಕೃತಿ, ಪ್ರಾಣಿ ಪ್ರಪಂಚವೀಗ ಕೊಂಚ ನಿರಾಳ
ಒಟ್ನಲ್ಲಿ ಮಾನವನ ಹಸ್ತ ಕ್ಷೇಪದಿಂದ ಇಷ್ಟು ದಿನ ತಮ್ಮ ನಿಜವಾದ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಪ್ರಕೃತಿ ಮತ್ತು ಪ್ರಾಣಿ ಪ್ರಪಂಚವೀಗ ಸ್ವಲ್ಪ ನಿರಾಳವಾಗಿದೆ.

ಕೌಟುಂಬಿಕ ಬಾಂಧವ್ಯ ಗಟ್ಟಿಯಾಗಿದೆ
ಮತ್ತೊಂದು ಕಡೆ ಮನುಷ್ಯರಿಗೆ ಕೊರೊನಾ ಕ್ರೂರಿಯಾಗಿ ಕಾಣಿಸಿಕೊಂಡರೂ, ಅದರ ಕೃಪೆಯಿಂದ ಸಂಬಂಧಗಳ ಮೌಲ್ಯವನ್ನು ಎತ್ತಿಹಿಡಿಯುವಂತೆ ಮಾಡಿದೆ. ದುಡಿಯುವ ಭರದಲ್ಲಿ ಕುಟುಂಬದವರನ್ನು ಬದಿಗಿಟ್ಟು, ಒತ್ತಡದಿಂದಲೇ ದಿನ ದೂಡುತ್ತಿದ್ದ ಜನರೀಗ ಕುಟುಂಬದವರೊಂದಿಗೆ ಕಾಲ ಕಳೆಯುವಂತಾಗಿದೆ. ವರ್ಕ್ ಫ್ರಮ್ ಹೋಮ್ ಅಥವಾ ರಜೆ ನೆಪದಲ್ಲಿ ಮನೆ ಸೇರಿರುವ ಉದ್ಯೋಗಸ್ಥರು, ಫ್ಯಾಮಿಲಿ ಜೊತೆಗೆ ಹೆಚ್ಚು ಕಾಲ ಕಳೆಯುವಂತಾಗಿದೆ. ಕೊರೊನಾದಿಂದಾಗಿ ಕೌಟುಂಬಿಕ ಬಾಂಧವ್ಯ ಗಟ್ಟಿಯಾಗಿದೆ. ಹಾಗೇ, ರೋಗ ನೆಪದಲ್ಲಿ ನೆರೆಹೊರೆಯವರೊಂದಿಗಿನ ಸ್ನೇಹ ವೃದ್ಧಿಸಿವೆ.

ಮನುಷ್ಯ ಇನ್ನಾದರೂ ಪಾಠ ಕಲಿಯಲಿ...
ಕೊರೊನಾ ಜಗತ್ತಿಗೆ ಎಷ್ಟೇ ಕೇಡನ್ನುಂಟು ಮಾಡಿದ್ದರೂ, ಒಂದಷ್ಟು ಒಳೆಯದ್ದನ್ನೂ ಮಾಡಿಕೊಟ್ಟಿದೆ. ಪದೇ ಪದೇ ಪ್ರಕೃತಿ ಕೊಡುವ ಏಟಿನಿಂದ ಮನುಷ್ಯ ಪಾಠ ಕಲಿತುಕೊಂಡು ತನ್ನ ಮಿತಿಯನ್ನರಿತು, ಸಹಬಾಳ್ವೆಯಿಂದ ಬದುಕಲು ಕಲಿತರೆ ಮುಂದಿನ ಸಂಕುಲಕ್ಕೆ ಒಳಿತು.












Click it and Unblock the Notifications