ಅರಳದ ಎಸ್ ಪಿ, ಕಾಂಗ್ರೆಸ್ ಮೈತ್ರಿ: ಕರಗಿದ ಆಶಾಕಿರಣ?
ಶನಿವಾರ ದಿನವಿಡೀ ನಡೆದ ಮೈತ್ರಿ ಮಾತುಕತೆಯ ಕಸರತ್ತುಗಳು ಫಲಪ್ರದವಾಗಲಿಲ್ಲ. ಹಾಗಾಗಿ, ಉತ್ತರ ಪ್ರದೇಶದಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಡುವುದು ಬಹುತೇಕ ಅಸಂಭವ ಎನ್ನಲಾಗುತ್ತಿದೆ.
ನವದೆಹಲಿ, ಜನವರಿ 21: ಶೀಘ್ರದಲ್ಲೇ ಎದುರಾಗಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹೊಸತೊಂದು ಮ್ಯಾಜಿಕ್ ಮಾಡಬಹುದೆಂದು ನಿರೀಕ್ಷಿಸಲಾಗಿದ್ದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಅರಳುವ ಮೊದಲೇ ಮುದುಡುವ ಸೂಚನೆ ನೀಡಿದೆ.
ಚುನಾವಣಾ ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಏರ್ಪಡಲಿಲ್ಲವಾದ್ದರಿಂದ ಮೈತ್ರಿ ಏರ್ಪಡುವುದು ಬಹುತೇಕ ಅಸಂಭವ ಎನ್ನಲಾಗುತ್ತಿದೆ.
ಆದರೂ, ಭಾನುವಾರ ಎರಡೂ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಮೈತ್ರಿ ಕಸರತ್ತು ನಡೆಯಲಿದ್ದು, ಈ ಬಾರಿ ಖುದ್ದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೇ ಅಖಾಡಕ್ಕಿಳಿಯುವರೆಂಬ ಮಾತುಗಳೂ ಕೇಳಿಬಂದಿವೆ. ಇದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿವೆ.
ಫಲ ಕಾಣದ ಮಾತುಕತೆ: ಚುನಾವಣೆಗೆ ಇನ್ನು ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನೇತಾರರು ಶನಿವಾರ, ಮೈತ್ರಿ ಕುದುರಿಸುವ ನಿಟ್ಟಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಒಂದರ ಹಿಂದೊಂದರಂತೆ ಸಭೆಗಳನ್ನು ನಡೆಸಿದರು.
ಬೆಳಗ್ಗೆ ನಡೆದ ಮೊದಲ ಸುತ್ತಿನ ಮಾತುಕತೆ ವೇಳೆ, ಸಮಾಜವಾದಿ ಪಕ್ಷವು ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಗೆ 85 ವಿಧಾನಸಭೆ ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಿತ್ತು. ಇದಕ್ಕೆ ಕಾಂಗ್ರೆಸ್ ಒಪ್ಪಲಿಲ್ಲ.
ಇದರಿಂದ ಕೊಂಚ ಭ್ರಮನಿರಸನವಾದರೂ, ಮೈತ್ರಿ ಕಸರತ್ತು ಮುಂದುವರಿಸಿದ ಸಮಾಜವಾದಿ ಪಕ್ಷವು ಆನಂತರದ ಮಾತುಕತೆಗಳಲ್ಲಿ ಕಾಂಗ್ರೆಸ್ ಗೆ ನೀಡಬಹುದಾದ ಸ್ಥಾನಗಳ ಸಂಖ್ಯೆಯನ್ನು ಏರಿಸುತ್ತಲೇ ಬಂತು. ಆದರೂ, ಒಮ್ಮತ ಏರ್ಪಡಲಿಲ್ಲ.
ಅಂತಿಮವಾಗಿ, ಸಂಜೆ ನಡೆದ ಸಭೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, 99 ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಗೆ ಅವಕಾಶ ನೀಡಲು ನಿರ್ಧರಿಸಿದರು. ಆಗಲೂ ಕಾಂಗ್ರೆಸ್ ಪಕ್ಷ ಈ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದರಿಂದ ಮೈತ್ರಿ ಮಾತುಕತೆ ಬಹುತೇಕ ಮುರಿದುಬಿದ್ದಿದೆ ಎನ್ನಲಾಗಿದೆ.
ಅಖಿಲೇಶ್ ಯಾದವ್ ಅವರು, ಈಗಾಗಲೇ ಉತ್ತರ ಪ್ರದೇಶದ ಎಲ್ಲಾ 210 ವಿಧಾನ ಸಭೆ ಕ್ಷೇತ್ರಗಳಿಗೆ ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ 99ಕ್ಕಿಂತ ಹೆಚ್ಚಿನ ಸೀಟುಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಡದಿರುವಂತೆ ಅವರ ಪಕ್ಷದಲ್ಲೇ ಅವರ ಮೇಲೆ ಒತ್ತಡವಿದೆ. ಹಾಗಾಗಿ, ಕಾಂಗ್ರೆಸ್ ನೊಂದಿಗೆ ಮೈತ್ರಿ ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪಾಳಯದಲ್ಲಿನ್ನೂ ಆಶಾವಾದ: ಅತ್ತ, ಕಾಂಗ್ರೆಸ್ ನ ಪಾಳಯದಲ್ಲಿ ಈ ಬಗ್ಗೆ ಇನ್ನೂ ಆಶಾಕಿರಣವಿದೆ. ಆ ಪಕ್ಷದ ಧುರೀಣರು, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಮಾಡಿರುವ ಮನವಿಯನ್ನು ಸೋನಿಯಾ ಅವರೂ ಸ್ವಾಗತಿಸಿದ್ದಾರೆನ್ನಲಾಗಿದೆ.
ಹೀಗಾಗಿ, ಸೋನಿಯಾ ಹಾಗೂ ಅಖಿಲೇಶ್ ನಡುವೆಯೇ ಮಾತುಕತೆ ನಡೆದರೆ ಮೈತ್ರಿ ಅರಳಬಹುದೆಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಭಾನುವಾರ ಈ ಎರಡೂ ಪಕ್ಷಗಳಲ್ಲಿ ನಡೆಯಲಿರುವ ಬೆಳವಣಿಗಗಳು ಕುತೂಹಲ ಕೆರಳಿಸಿವೆ.