ನಮ್ಮದು ಬಡವರ ರಾಷ್ಟ್ರ ಎಂದಿದ್ದೇಕೆ ಪಾಕಿಸ್ತಾನ ಪ್ರಧಾನಮಂತ್ರಿ?
ಇಸ್ಲಮಾಬಾದ್, ಮಾರ್ಚ್.23: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿರುವ ವಿಶ್ವದ ಹಲವು ರಾಷ್ಟ್ರಗಳು ದೇಶದಲ್ಲಿ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲದಕ್ಕೂ ಗುಡ್ ಬೈ ಹೇಳಿ ಲಾಕ್ ಡೌನ್ ಮಾಡಿವೆ.
ಭಾನುವಾರ ಭಾರತದಲ್ಲೂ ಕೂಡಾ 14 ಗಂಟೆಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದು ಆಯ್ತು ಅದು ಯಶಸ್ವಿಯಾಗಿದ್ದು ಆಯಿತು. ಇದರ ಮಧ್ಯೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಮಾತ್ರ ಲಾಕ್ ಡೌನ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಜನಸಂಖ್ಯೆಯ ನಾಲ್ಕರ ಒಂದು ಭಾಗದಷ್ಟು ಜನರು ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ದಿನಗೂಲಿ ಕಾರ್ಮಿಕರು ದಿನ ದುಡಿಮೆಯನ್ನು ನೆಚ್ಚಿಕೊಂಡು ಇಂದಿಗೂ ಬದುಕು ಸಾಗಿಸುತ್ತಿದ್ದಾರೆ. ಈ ವಾಸ್ತವ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಸಾಮಾಜಿಕ ಅಂತರದ ಬಗ್ಗೆ ಪ್ರಜೆಗಳಿಗೆ ಪಾಠ:
ಮಾರಕ ಕೊರೊನಾ ವೈರಸ್ ನಿಂದ ಪಾರಾಗಲು ಪಾಕಿಸ್ತಾನ ಪ್ರಜೆಗಳಿಗೆ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ವಚ್ಛತೆಯ ಪಾಠ ಮಾಡಿದ್ದಾರೆ. ನಾವು ಮತ್ತು ನಮ್ಮ ಸುತ್ತಮುತ್ತಲಿನ ಜನರು ಆರೋಗ್ಯವಾಗಿ ಇರಬೇಕಾದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ವಯಂಪ್ರೇರಿತವಾಗಿ ಸೋಂಕಿತರು ಗೃಹ ದಿಗ್ಬಂಧನದಲ್ಲಿ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಪಾಕಿಸ್ತಾನದಲ್ಲಿ ಭಾನುವಾರದ ಅಂಕಿ-ಅಂಶಗಳ ಪ್ರಕಾರ ನಾಲ್ವರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದರೆ, ಒಂದೇ ದಿನ 131 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆಯು 776ಕ್ಕೆ ಏರಿಕೆಯಾಗಿದೆ.












Click it and Unblock the Notifications