ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!
ಸುಟ್ಟು ಕರಕಲಾಗಿರುವ ಮನೆಗಳು, ಬೂದಿ ಮುಚ್ಚಿದ ಆಕಾಶ, ಉಸಿರಾಡಲು ಕೂಡ ಸಂಕಷ್ಟ. 75 ವರ್ಷಗಳ ಹಿಂದೆ ನ್ಯೂಕ್ಲಿಯರ್ ಬಾಂಬ್ ದಾಳಿಗೆ ತುತ್ತಾಗಿದ್ದ ಜಪಾನ್ನ ಹಿರೋಶಿಮಾ, ನಾಗಸಾಕಿಯಲ್ಲಿ ಇಂತಹದ್ದೇ ದೃಶ್ಯಗಳು ಕಂಡಿದ್ದವು. ಆದರೆ 75 ವರ್ಷಗಳ ನಂತರ ನ್ಯೂಕ್ಲಿಯರ್ ಬಾಂಬ್ ದಾಳಿ ನಡೆಸಿದ್ದ ದೇಶಕ್ಕೇ ಇಂತಹ ಭೀಕರ ಸ್ಥಿತಿ ಎದುರಾಗಿದೆ.
ಹೌದು ಭೀಕರ ಕಾಡ್ಗಿಚ್ಚಿಗೆ ಸಿಲುಕಿ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯ ತತ್ತರಿಸಿ ಹೋಗಿದೆ. ಒಂದಲ್ಲ, ಎರಡಲ್ಲ ಲಕ್ಷಾಂತರ ಎಕರೆ ಕಾಡು ಭಸ್ಮವಾಗಿ ಹೋಗಿದೆ. 4 ಸಾವಿರಕ್ಕೂ ಹೆಚ್ಚು ಮನೆಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದ್ದರೆ, ಇನ್ನೂ ಹಲವು ಮನೆಗಳು ಭಸ್ಮವಾಗುವ ಸ್ಥಿತಿಯಲ್ಲಿವೆ.
ಲಕ್ಷಾಂತರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೂ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ಕೆನ್ನಾಲಿಗೆ ಕ್ಯಾಲಿಫೋರ್ನಿಯಾದ ಅರಣ್ಯದಲ್ಲಿ ವೇಗವಾಗಿ ಹಬ್ಬುತ್ತಿದೆ. 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹೊತ್ತಿದ್ದು, ಈ ಪೈಕಿ 28 ಭಾಗಗಳಲ್ಲಿ ಬೆಂಕಿ ಹಿಡಿತಕ್ಕೆ ಸಿಗುತ್ತಿಲ್ಲ. ಹೀಗಾಗಿ ಕ್ಯಾಲಿಫೋರ್ನಿಯ ಅಕ್ಷರಶಃ ನರಕವಾಗಿ ಬದಲಾಗಿದೆ.

ಸಾವಿರ ಕೋಟಿ ಒಡೆಯ ಬೀದಿಪಾಲು..!
ಕೆಲವೇ ದಿನಗಳ ಹಿಂದಷ್ಟೇ ಕೋಟಿಗೆ ಬಾಳುತ್ತಿದ್ದವರೆಲ್ಲಾ ಸದ್ಯಕ್ಕೆ ಬೀದಿಪಾಲಾಗಿದ್ದಾರೆ. ದಿಢೀರ್ ಆವರಿಸಿದ ಬೆಂಕಿಯ ಕೆನ್ನಾಲಿಗೆ ಶ್ರೀಮಂತ, ಬಡವ ಎಂಬ ಬೇಧ ತೋರದೆ ಸಿಕ್ಕ ಸಿಕ್ಕ ಮೆನಗಳನ್ನು ಭಸ್ಮಮಾಡಿದೆ. ಹೀಗೆ ಸಾವಿರ ಕೋಟಿಗೆ ಬಾಳುತ್ತಿದ್ದ ವ್ಯಕ್ತಿ ಕೂಡ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಟ್ಟು ಕರಕಲಾದ ಮನೆಗಳನ್ನು ನೋಡಿ ಜನರು ಕಣ್ಣೀರಿಡುವ ದೃಶ್ಯ ಮನಕಲಕುವಂತಿದೆ. ಕಾಡ್ಗಿಚ್ಚಿನ ಭಯಕ್ಕೆ ಮನೆ ತೊರೆದು ಹೋದವರು ಮರಳಿ ಬಂದು ನೋಡಿದರೆ, ತಮ್ಮ ಮನೆ ಇದ್ದ ಜಾಗದಲ್ಲಿ ಬರೀ ಬೂದಿ ಕಾಣುತ್ತಿದೆ.

ಇತಿಹಾಸದಲ್ಲೇ ಭೀಕರ ಕಾಡ್ಗಿಚ್ಚು
ಈಗ ಹಬ್ಬಿರುವ ಬೆಂಕಿ ಕ್ಯಾಲಿಫೋರ್ನಿಯದ ಇತಿಹಾಸದಲ್ಲೇ ಅತ್ಯಂತ ಭೀಕರ ಕಾಡ್ಗಿಚ್ಚು ಎನ್ನಲಾಗಿದೆ. ಇಲ್ಲಿ ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಎದುರಾಗುವುದು ಮಾಮೂಲಿ. ಆದರೆ ಈ ಬಾರಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಿ ಹೋಗಬೇಕು ಎಂಬುದೇ ತೋಚುತ್ತಿಲ್ಲ. ನೂರಾರು ಕಿಲೋಮೀಟರ್ ಪ್ರದೇಶದಲ್ಲಿ ಬೆಂಕಿ ಹಬ್ಬಿದೆ. ಮತ್ತೊಂದ್ಕಡೆ ಕಾಡ್ಗಿಚ್ಚು ನಂದಿಸಲು ಸುಮಾರು 15 ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದಾರೆ. ಜನರ ಜೊತೆಗೆ ಸಾವಿರಾರು ಪ್ರಾಣಿಗಳು ಕೂಡ ಬೆಂಕಿಯಲ್ಲಿ ಬೆಂದು ಹೋಗುತ್ತಿವೆ.

ಪ್ರತಿದಿನ 25 ಮೈಲು ಕಾಡು ಭಸ್ಮ
ಕ್ಯಾಲಿಫೋರ್ನಿಯದಲ್ಲಿ ನಿತ್ಯ 25 ಮೈಲಿಗಳಷ್ಟು ಕಾಡು ಭಸ್ಮವಾಗುತ್ತಿದ್ದು, ಕೆನ್ನಾಲಿಗೆಗೆ ಸಿಲುಕಿ ಹತ್ತಾರು ಮಂದಿ ಅಸುನೀಗಿದ್ದಾರೆ. ಕಾಡು ಭಸ್ಮವಾಗುತ್ತಿರುವ ಹಿನ್ನೆಲೆ ಸ್ಯಾನ್ ಫ್ರಾನ್ಸಿಸ್ಕೊ ಸೇರಿದಂತೆ ಅಮೆರಿಕದ ಪಶ್ಚಿಮ ತೀರದ ನಗರಗಳಲ್ಲಿ ಗಾಳಿ ವಿಷವಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಸಿಗದಷ್ಟು ಕೆಟ್ಟಗಾಳಿ ಇಲ್ಲಿ ಹಬ್ಬಿದೆ. ದಟ್ಟವಾದ ಹೊಗೆ ಹಾಗೂ ಮಂಜು ಸೇರಿ 'ಫಾಗ್' ನಿರ್ಮಾಣವಾಗಿದ್ದು, ಇಲ್ಲಿ ಸೂರ್ಯನ ಬೆಳಕು ಕೂಡ ಭೂಮಿಗೆ ತಗುಲುತ್ತಿಲ್ಲ. ಹೀಗಾಗಿ ಕ್ಯಾಲಿಫೋರ್ನಿಯ ಮತ್ತು ಅಕ್ಕಪಕ್ಕದ ರಾಜ್ಯಗಳ ಕೆಲ ನಗರಗಳಲ್ಲಿ ಹಗಲು ಕೂಡ ಕತ್ತಲಿನ ರೀತಿ ಭಾಸವಾಗುತ್ತಿದೆ. ಸವಾರರು ಹಗಲಿನಲ್ಲೂ ಹೆಡ್ಲೈಟ್ ಹಾಕಿ ವಾಹನ ಓಡಿಸುವಂತಾಗಿದೆ.

ಮಾಜಿ ಅಧ್ಯಕ್ಷ ಒಬಾಮಾಗೆ ಆತಂಕ
ಕ್ಯಾಲಿಫೋರ್ನಿಯಗೆ ಎದುರಾಗಿರುವ ಭೀಕರ ಸ್ಥಿತಿ ಬಗ್ಗೆ ಇಡೀ ಜಗತ್ತೇ ಮರುಗುತ್ತಿದೆ. ಅದರಲ್ಲೂ ಅಮೆರಿಕದ ರಾಜಕಾರಣಿಗಳು ಟ್ರಂಪ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹೀಗೆ ಒಬಾಮಾ ಕೂಡ ಕಾಡ್ಗಿಚ್ಚಿನ ಕುರಿತು ಟ್ವೀಟ್ ಮಾಡಿದ್ದು, ಇದು ಹವಾಮಾನ ಬದಲಾವಣೆಯ ಭೀಕರ ಮುನ್ಸೂಚನೆ ಎಂದಿದ್ದಾರೆ. ಅಲ್ಲದೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ಒಬಾಮಾ ನೀಡಿದ್ದಾರೆ.
Recommended Video

ಆಸ್ಟ್ರೇಲಿಯಾಗಿಂತ ಭೀಕರ ಪರಿಸ್ಥಿತಿ..?
ಕಳೆದವರ್ಷ ಆಸ್ಟ್ರೇಲಿಯಾದಲ್ಲಿ ಹೊತ್ತಿದ್ದ ಕಾಡ್ಗಿಚ್ಚು ಹಲವು ತಿಂಗಳುಗಳ ಕಾಲ ಉರಿದಿತ್ತು. ಹತ್ತಾರು ಲಕ್ಷ ಎಕರೆ ಕಾಡು ಭಸ್ಮವಾಗಿ, ಕಾಂಗರೂ ನಾಡಲ್ಲಿ ಲೆಕ್ಕವಿಲ್ಲದಷ್ಟು ಜೀವ ಸಂಕುಲವೂ ನಾಶವಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಆಸ್ಟ್ರೇಲಿಯಾಗಿಂತಲೂ ಭೀಕರ ಸ್ಥಿತಿ ಎದುರಾಗುವ ಸಂಭವವಿದೆ. ಹವಾಮಾನ ವರದಿ ಪ್ರಕಾರ ಸದ್ಯದಲ್ಲಿ ಮಳೆಯಾಗುವ ಮುನ್ಸೂಚನೆಯೂ ಇಲ್ಲ. ಗಾಳಿಯ ವೇಗ ಬೇರೆ ಹೆಚ್ಚುತ್ತಿರುವುದು ಕಾಡ್ಗಿಚ್ಚು ಮತ್ತಷ್ಟು ಹರಡಿಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ನಮಗೆ ಸಹಾಯ ಮಾಡಿ ಅಂತಾ ಅಮೆರಿಕ ಸರ್ಕಾರ ಆಸ್ಟ್ರೇಲಿಯಾದ ಅಗ್ನಿಶಾಮಕ ಇಲಾಖೆ ಮೊರೆ ಹೋಗಿದೆ. ಅದೆಷ್ಟೇ ಪ್ರಯತ್ನಪಟ್ಟರೂ ಪ್ರಕೃತಿಯ ಎದುರು ಮನುಷ್ಯನ ಆಟ ನಡೆಯುವುದಿಲ್ಲ ಎಂಬುದಕ್ಕೆ ಕ್ಯಾಲಿಫೋರ್ನಿಯದ ಕಾಡ್ಗಿಚ್ಚು ತಾಜಾ ಉದಾಹರಣೆಯಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications