Bangladesh Crisis: ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್ಎಫ್ ಕಟ್ಟೆಚ್ಚರ
ನವದೆಹಲಿ, ಆಗಸ್ಟ್ 05: ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದೆ. ಪ್ರಧಾನಿ ಶೇಖ್ ಹಸೀನಾ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶವನ್ನು ಬಿಟ್ಟು ಪರಾರಿಯಾಗಿ, ಭಾರತದಲ್ಲಿ ಬಂದು ಆಶ್ರಯ ಪಡೆದಿದ್ದಾರೆ. ದೇಶದ ಆಡಳಿತವನ್ನು ಸೇನೆ ತನ್ನ ವಶಕ್ಕೆ ಪಡೆದಿದ್ದು, ಮಧ್ಯಂತರ ಸರ್ಕಾರ ರಚನೆ ಕಸರತ್ತು ಆರಂಭವಾಗಿದೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ರಾಜಧಾನಿ ಢಾಕಾ ಬಿಟ್ಟು ಪರಾರಿಯಾದ ಬಳಿಕ ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಟ್ಟೆಚ್ಚರನ್ನು ಘೋಷಣೆ ಮಾಡಿದೆ. ಅದರಲ್ಲೂ ಬಾಂಗ್ಲಾದಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರು ಭಾರತಕ್ಕೆ ಒಳನುಸುಳಬಹುದು ಎಂಬ ವರದಿಗಳ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಸಲಾಗಿದೆ.

ಸೋಮವಾರ ಢಾಕಾದಿಂದ ಪರಾರಿಯಾದ 74 ವರ್ಷದ ಶೇಖ್ ಹಸೀನಾ ಭಾರತದ ತ್ರಿಪುರಾದಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಅವರು ಬಿಎಸ್ಎಫ್ ಸಿಬ್ಬಂದಿ ಕಣ್ಗಾವಲಿನಲ್ಲಿ ರಹಸ್ಯ ಸ್ಥಳದಲ್ಲಿದ್ದು, ಅಲ್ಲಿಂದ ದೆಹಲಿ ಸಮೀಪದ ಹಿಂಡನ್ ಏರ್ಬೇಸ್ಗೆ ಬಂದು ತಲುಪಿದ್ದಾರೆ. ಅವರ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಭಾರತ ಬಾಂಗ್ಲಾಕ್ಕೆ ಸಂಚಾರ ನಡೆಸುವ ಎಲ್ಲಾ ರೈಲುಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಯುತ್ತಿದೆ, ಸಚಿವರ ನಿವಾಸಗಳನ್ನು ಲೂಟಿ ಮಾಡಲಾಗುತ್ತಿದೆ.
ದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬಳಿಕ ಸೇನೆ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಮಧ್ಯಂತರ ಸರ್ಕಾರ ರಚನೆ ಮಾಡಲು ವಿರೋಧ ಪಕ್ಷದ ನಾಯಕರು, ರಾಷ್ಟ್ರದ ಅಧ್ಯಕ್ಷರ ಜೊತೆ ಸೇನಾ ಪಡೆಯ ಮುಖ್ಯಸ್ಥರು ಸಭೆಗಳನ್ನು ನಡೆಸುತ್ತಿದ್ದಾರೆ. ಈ ಕುರಿತು ಸೇನಾ ಮುಖ್ಯಸ್ಥ ವಾಕರ್-ಉಜ್ -ಜಮಾನ್ ಈಗಾಗಲೇ ದೇಶವನ್ನು ಉದ್ದೇಶಿಸಿ ಮಾತನಾಡಿ, ಮಾಹಿತಿ ನೀಡಿದ್ದಾರೆ.
ಭಾರತದ ಸ್ನೇಹಿ ರಾಷ್ಟ್ರ: ಈ ವರ್ಷದ ಆರಂಭದಲ್ಲಿ 5ನೇ ಬಾರಿಗೆ, ಸತತ 4ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ಅಧಿಕಾರವಹಿಸಿಕೊಂಡರು. ಸರ್ಕಾರ 1971ರಲ್ಲಿ ಬಾಂಗ್ಲಾ ಸ್ವಾತಂತ್ರ ಚಳವಳಿಯಲ್ಲಿ ಹೋರಾಡಿದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ರೂಪಿಸಲು ಮುಂದಾಗಿದೆ. ಈ ಮೀಸಲಾತಿ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಭಾರತದ ಸ್ನೇಹಿ ರಾಷ್ಟ್ರವಾದ ಬಾಂಗ್ಲಾದೇಶದ ಆರ್ಥಿಕ ಪರಿಸ್ಥಿತಿ ಕೋವಿಡ್ ಬಳಿಕ ಈಗ ಸುಧಾರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಿದೆ. ಸೋಮವಾರ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ಬಳಿಕ ಭಾರತದ ಗಡಿಯಲ್ಲಿಯೂ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಭಾರತ ಪ್ರಧಾನಿಯಾಗಿದ್ದ ಶೇಖ್ ಹಸೀನಾಗೆ ಬೆಂಬಲ ನೀಡಿತ್ತು. ಢಾಕಾದ ಹಲವಾರು ಯೋಜನೆಗಳಿಗೆ ಭಾರತ ಸಹಕಾರ ನೀಡಿತ್ತು. ಬಾಂಗ್ಲಾದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ದೇಶದ ಆಂತರಿಕ ವಿಚಾರ ಎಂದು ಭಾರತ ಹೇಳಿದರೂ ಸಹ ಮೌನವಾಗಿಯೇ ಶೇಖ್ ಹಸೀನಾ ಬೆಂಬಲಿಸಿತು.
ಈ ವರ್ಷದ ಆರಂಭದಲ್ಲಿ ಚುನಾವಣಾ ಸಮಯದಲ್ಲಿ ಪ್ರತಿಪಕ್ಷಗಳ ಸದಸ್ಯರನ್ನು ಜೈಲಿಗೆ ಕಳಿಸುವುದು, ಮಾಧ್ಯಮಗಳನ್ನು ಬೆದರಿಸುವುದು ಸೇರಿ ಶೇಖ್ ಹಸೀನಾ ಕೈಗೊಂಡ ಹಲವು ಪ್ರಜಾಪ್ರಭುತ್ವ ವಿರೋಧಿ ನಿಲುವಿನ ಸಂದರ್ಭದಲ್ಲಿಯೂ ಭಾರತ ಮೌನವಾಗಿತ್ತು. ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶೇಖ್ ಹಸೀನಾ ನವದೆಹಲಿಗೆ ಆಗಮಿಸಿದ್ದರು.












Click it and Unblock the Notifications