ಷರೀಫ್ ತವರಿಗೆ ವಾಪಸಾದ ಬೆನ್ನಲ್ಲೇ ಪಾಕ್ ಹುಚ್ಚಾಟ
ಇಸ್ಲಾಮಬಾದ್, ಮೇ 29: ಶಾಂತಿಯ ಹರಿಕಾರನಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಪ್ರಧಾನಿ ನವಾಜ್ ಷರೀಪ್ ತವರಿಗೆ ಹಿಂದಿರುಗುತ್ತಿದ್ದಂತೆಯೇ ಪಾಕಿಸ್ತಾನ ಉಲ್ಟಾ ಹೊಡೆದಿದೆ.
ಷರೀಫ್ ಸ್ವದೇಶಕ್ಕೆ ಹಿಂದಿರುಗಿದ 24 ಗಂಟೆಯಲ್ಲಿ ಪಂಜಾಬ್ ಅಸೆಂಬ್ಲಿ ಆಫ್ ಪಾಕಿಸ್ತಾನ 'ಮೋದಿ ಹೇಳಿಕೆ ವಿರೋಧಿಸುವ' ವಿಧೇಯಕವನ್ನು ಧ್ವನಿಮತದಿಂದ ಆಂಗೀಕರಿಸಿದೆ. ತೆಹ್ರಿಕ್ - ಇ - ಇನ್ಸಾಫ್ ಮುಖಂಡ ಮಿಲನ್ ಮೆಹಮದೂರು ರಷೀದ್ ಈ ವಿಧೇಯಕವನ್ನು ಮಂಡಿಸಿದ್ದರು. (ಮೋದಿ, ಷರೀಫ್ ಭೇಟಿ ಮತ್ತು ವಿದೇಶಿ ಮಾಧ್ಯಮ)
ಇಬ್ಬರು ನಾಯಕರ ಭೇಟಿಯ ವೇಳೆ, ಮೋದಿ ಗಡಿ ನುಸುಳುವಿಕೆಯ ಬಗ್ಗೆ ಷರೀಫ್ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಸಂಬಂಧ ಭಾರತದ ಕಠಿಣ ನಿಲುವಿನ ಮುನ್ಸೂಚನೆಯನ್ನು ನೀಡಿದ್ದರು.
ಮೋದಿ ಆರೋಪವನ್ನು ನಿರಾಧಾರ, ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ಪಂಜಾಬ್ ಅಸೆಂಬ್ಲಿ ಮೋದಿ ಹೇಳಿಕೆಯನ್ನು ಒಕ್ಕೂರಲಿನಿಂದ ತಿರಸ್ಕರಿಸಿ ವಿಧೇಯಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಪಾಕಿಸ್ತಾನದ ದೈನಿಕ 'ದಿ ನೇಶನ್' ವರದಿ ಮಾಡಿದೆ.

ಉಗ್ರರಿಗೆ ನಮ್ಮ ಬೆಂಬಲವಿಲ್ಲ
ಉಗ್ರರಿಗೆ ನಾವು ಬೆಂಬಲ ನೀಡುತ್ತಿಲ್ಲ. ಬಲೂಚಿಸ್ತಾನದ ಭಾಗದಲ್ಲಿ ಭಾರತ ನಡೆಸುತ್ತಿರುವ ಉಗ್ರ ಚಟುವಟಿಕೆಗಳಿಗೆ ಈಗಿಂದ ಈಗಲೇ ಕಡಿವಾಣ ಬೀಳಬೇಕು. ಕಾಶ್ಮೀರ ಕಣಿವೆ ಭಾಗದಲ್ಲಿ ಭಾರತದ ಅತಿಕ್ರಮ ಪ್ರವೇಶವನ್ನು ನರೇಂದ್ರ ಮೋದಿ ತಡೆ ಹಿಡಿಯಬೇಕೆಂದು ರಷೀದ್ ಮಂಡಿಸಿದ ವಿಧೇಯಕದಲ್ಲಿ ಹೇಳಲಾಗಿದೆ.

ಮೋದಿ ಖಡಕ್ ನಿಲುವು
ಪಾಕಿಸ್ತಾನದ ಜೊತೆ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಭಾರತದಲ್ಲಿನ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು, 26/11 ಮುಂಬೈ ದಾಳಿಯ ಪಾಪಿಗಳ ವಿಚಾರಣೆಯನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಮೋದಿ ತಾಕೀತು ಮಾಡಿದ್ದರು.

ಮೋದಿ ಭೇಟಿ ಫಲಪ್ರದ
ನರೇಂದ್ರ ಮೋದಿ ಜೊತೆಗಿನ ಮಾತುಕತೆ ನಿರೀಕ್ಷೆಗಿಂತ ಹೆಚ್ಚು ಫಲಪ್ರದವಾಗಿ ಮೂಡಿಬಂದಿದೆ. ಎರಡೂ ರಾಷ್ಟ್ರಗಳು ಶಾಂತಿ ಕಾಪಾಡಿಕೊಂಡು ಬರುವಲ್ಲಿ ಮೋದಿ ಜೊತೆಗಿನ ಭೇಟಿ ಉಪಯುಕ್ತವಾಗಲಿದೆ ಎಂದು ಷರೀಫ್ ಅವರ ಭದ್ರತಾ ಕಾರ್ಯದರ್ಶಿ ಸತ್ರಾಜ್ ಅಜೀಜ್ ಮಂಗಳವಾರವಷ್ಟೇ ಲಾಹೋರ್ ನಲ್ಲಿ ಹೇಳಿದ್ದರು.

ಮುಂಬೈ ದಾಳಿಕೋರರು
ಮುಂಬೈ ದಾಳಿಗೆ ಸಂಬಂಧ ಪಟ್ಟವರನ್ನು ಶೀಘ್ರ ಬಂಧಿಸ ಬೇಕೆನ್ನುವ ಭಾರತದ ಬೇಡಿಕೆ ಹೊಸದೇನಲ್ಲ. ಮೋದಿ ಭೇಟಿಯ ಸಂದರ್ಭದಲ್ಲಿ ಮತ್ತೆ ವಿಷಯ ಪ್ರಸ್ತಾವನೆಗೆ ಬಂದಿದೆ. ಪಾಕಿಸ್ತಾನ ಸರಕಾರ ಇದಕ್ಕೆ ಸ್ಪಂಧಿಸಲಿದೆ ಎಂದು ಸತ್ರಾಜ್ ಅಜೀಜ್ ಹೇಳಿದ್ದರು.

ದಾವೂದ್ ಇಬ್ರಾಹಿಂ
ಷರೀಫ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ, ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂನನ್ನು ತನ್ನ ವಶಕ್ಕೆ ಒಪ್ಪಿಸ ಬೇಕೆಂದು ಮೋದಿ ಹೇಳಿದ್ದರು. ಇದಕ್ಕೆ ಪಾಕ್ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಲಿಲ್ಲ.












Click it and Unblock the Notifications