ಇದು ಮನುಷ್ಯರು ಓದಲೇಬೇಕಾದ ಕಥೆ: 29,000 ಜನರನ್ನು ಕೊಂದು ಹಾಕಿತಾ ಇಸ್ರೇಲ್ ಸೇನೆ?
ಹಮಾಸ್ ಉಗ್ರರು & ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇಂದಿಗೂ ರಕ್ತದ ದಾಹ ನಿಲ್ಲಿಸಿಲ್ಲ. ಹೀಗೆ ಇಬ್ಬರ ನಡುವೆ ಶುರುವಾದ ತಿಕ್ಕಾಟಕ್ಕೆ ಅಮಾಯಕ ಜನರು ಈಗ ಜೀವ ಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್ ಸೇನೆ ಈವರೆಗು ಬರೋಬ್ಬರಿ 29 ಸಾವಿರ ಜನರನ್ನು ಕೊಂದು ಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಇಸ್ರೇಲ್ & ಹಮಾಸ್ ಯುದ್ಧ ಇನ್ನು ನಿಂತೇ ಹೋಯಿತು ಅಂತ ಅಂದುಕೊಳ್ಳುವುದರ ಒಳಗಾಗಿ ಮತ್ತೆ ಯುದ್ಧ ಕಿಚ್ಚು ಧಗಧಗಿಸುತ್ತಿದೆ. ಇದರ ಪರಿಣಾಮ ಅಮಾಯಕ ಜನ ಹೆಣವಾಗುತ್ತಿದ್ದಾರೆ. ಯುದ್ಧವು ಶುರುವಾಗಿ ಸುಮಾರು 5 ತಿಂಗಳಿಂದ ಇಲ್ಲಿವರೆಗು ಎಷ್ಟು ಜನ ಗಾಜಾಪಟ್ಟಿ ಭಾಗದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಅಂಕಿ-ಅಂಶ ಈಗ ಹೊರಬಿದ್ದಿದೆ. ಜಗತ್ತಿನಾದ್ಯಂತ ಈ ವಿಚಾರ ಈಗ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಹಾಗೇ ಕಳೆದ 24 ಗಂಟೆ ಅವಧಿಯಲ್ಲಿ ಬರೋಬ್ಬರಿ 107 ಜನರ ಜೀವ ತೆಗೆದಿದೆಯಂತೆ ಇಸ್ರೇಲ್ ಸೇನೆ. ಈ ಮೂಲಕ ಯುದ್ಧದ ಜ್ವಾಲೆಯು ಈಗ ಮತ್ತಷ್ಟು ಜೋರಾಗುತ್ತಿದೆ.

ಎಲ್ಲಿ ನೋಡಿದರೂ ಶವಗಳ ರಾಶಿ
ಇನ್ನು ಇಸ್ರೇಲ್ ಪಡೆಗಳು ಗಾಜಾ ಪಟ್ಟಿಯ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 29,092 ಪ್ಯಾಲೆಸ್ಟೀನಿಯನ್ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗಾಜಾದ ಆರೋಗ್ಯ ಸಚಿವಾಲಯ ಆರೋಪ ನೀಡಿದೆ. ಇಸ್ರೇಲ್ ಕಳೆದ 24 ಗಂಟೆಗಳಲ್ಲಿ ನಡೆಸಿದ ದಾಳಿಯಲ್ಲಿ 107 ಜನರು ಮೃತಪಟ್ಟು, 145 ಜನ ಗಾಯಗೊಂಡಿದ್ದಾರೆ ಅಂತಲೂ ಆರೋಪ ಮಾಡಲಾಗಿದ್ದು. ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.
ಯುದ್ಧ ಶುರುವಾಗಿದ್ದು ಹೇಗೆ ಗೊತ್ತಾ?
ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 4 ತಿಂಗಳು ಕಳೆದಿದೆ. ಹೀಗೆ 4 ತಿಂಗಳ ಅವಧಿಯಲ್ಲಿ, ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿದ್ದು ಸಾವಿರಾರು ಟನ್ ಬಾಂಬ್. ಈಗಲೂ ತನ್ನ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಭಯಾನಕ ಯುದ್ಧ ನಡೆಸುತ್ತಿದೆ.

ವಿಶ್ವಸಂಸ್ಥೆ ಹೇಳುತ್ತಿರುವುದು ಏನು?
ಇನ್ನು ಇತ್ತೀಚೆಗಷ್ಟೇ 'ಗಾಜಾ ಸ್ಮಶಾನ ಭೂಮಿ ಆಗುತ್ತಿದೆ' ಅಂತಲೂ ಕಳವಳ ವ್ಯಕ್ತಪಡಿಸಿತ್ತು ವಿಶ್ವಸಂಸ್ಥೆ. ಈ ನಡುವೆ ಜಗತ್ತಿನ ವಿವಿಧ ರಾಷ್ಟ್ರಗಳು 'ಮಾನವೀಯ ಆಧಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು' ಅಂತಾ ಒತ್ತಾಯ ಮಾಡುತ್ತಲೇ ಇವೆ. ಇಷ್ಟಾದ್ರೂ ಇಸ್ರೇಲ್ ಮಾತ್ರ ಯಾವುದಕ್ಕೂ ಕೇರ್ ಮಾಡುತ್ತಿಲ್ಲ, ತನ್ನ ಶತ್ರು ನಾಶಕ್ಕೆ ಭರ್ಜರಿಯಾಗೇ ಕಾರ್ಯಾಚರಣೆ ನಡೆಸುತ್ತಿದೆ ಇಸ್ರೇಲ್.
ಅಯ್ಯಯ್ಯೋ.. ಸಾಮಾನ್ಯ ಜನರ ಪಾಡು ಏನು?
ಯಾರೋ ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ ಯಾಕೆ? ಎಂಬ ಪ್ರಶ್ನೆಯನ್ನ ಕೇಳಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಹಮಾಸ್ & ಇಸ್ರೇಲ್ ಸೇನೆ ನಡುವೆ ಮಾತುಕತೆ ನಡೆಯಬೇಕಿತ್ತು. ಆದರೂ ಒಪ್ಪಂದ ವರ್ಕೌಟ್ ಆಗುತ್ತಿಲ್ಲ. ಕೆಲವು ದಿನಗಳ ಕಾಲ ಯುದ್ಧ ನಿಲ್ಲಿಸಬೇಕು, ಸಾಮಾನ್ಯರ ಜೀವ ಉಳಿಸಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಆದರೆ ಒಂದು ಕಡೆ ಹಮಾಸ್ ಉಗ್ರರು ತಗ್ಗಿಬಗ್ಗಿ ನಡೆಯಲು ರೆಡಿ ಇಲ್ಲ, ಇನ್ನೊಂದು ಕಡೆ ಇಸ್ರೇಲ್ ಕೂಡ ಮಾನವೀಯ ನೆಲೆಯಲ್ಲಿ ಭೀಕರ ಯುದ್ಧವನ್ನು ನಿಲ್ಲಿಸಲು ರೆಡಿ ಇಲ್ಲ. ಹೀಗಾಗಿ ಗಾಜಾಪಟ್ಟಿ ಹೆಣಗಳಿಂದ ತುಂಬಿದ್ದು ಜನರು ನಲುಗಿ ಹೋಗಿದ್ದಾರೆ.












Click it and Unblock the Notifications