ಇಂಡೋನೇಷ್ಯಾ ವಿಮಾನದ 189 ಪ್ರಯಾಣಿಕರೂ ಮೃತಪಟ್ಟಿರುವ ಸಾಧ್ಯತೆ
ಇಂಡೋನೇಷ್ಯಾದ ವಿಮಾನದಲ್ಲಿದ್ದ 189 ಪ್ರಯಾಣಿಕರು ಮೃತಪಟ್ಟಿರಬಹುದು ಎಂಬ ಮಾತನ್ನು ಶೋಧ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹೌದು, ಇದು ಸೋಮವಾರದ ಮುಖ್ಯ ಸುದ್ದಿಯಲ್ಲೊಂದು.
ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ 189 ಮಂದಿಯಿದ್ದ ವಿಮಾನ ಹೊರಟಿತ್ತು. ಅದಾಗಿ ಕೆಲ ಹೊತ್ತಿಗೆ ಸಮುದ್ರದಲ್ಲಿ ಅಪಘಾತವಾಗಿ, ಮುಳುಗಿತ್ತು. ಈ ದೇಶಿ ವಿಮಾಣವು ಟಿನ್-ಮೈನಿಂಗ್ ಪ್ರದೇಶಕ್ಕೆ ತೆರಳುತ್ತಿತ್ತು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಲಯನ್ ಏರ್ ನ JT610 ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಅದು ಹೊಸ ಬೋಯಿಂಗ್ 737 MAX8 ವಿಮಾನವಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಕಡಲ ಪ್ರದೇಶದಿಂದ ಹದಿನೈದು ಕಿ.ಮೀ. ದೂರಕ್ಕೆ ಮಾನವ ಅವಶೇಷಗಳು ದೊರೆತಿವೆ.
ವಿಮಾನ ನೆಲ ಬಿಟ್ಟು ಹೊರಟ ಹದಿಮೂರು ನಿಮಿಷಕ್ಕೆ ಅದರ ಪೈಲಟ್ ವಾಪಸ್ ಬರುವುದಾಗಿ ತಿಳಿಸಿದರು. ಆದರೆ ವಿಮಾನವು ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ಯಾನ ಸೇವೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ
ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿ ವೇಗವಾಗಿ ವಿಮಾನ ಯಾನ ಸೇವೆ ಮಾರುಕಟ್ಟೆ ಬೆಳೆಯುತ್ತಿರುವ ದೇಶ ಇಂಡೋನೇಷ್ಯಾ. ಆದರೆ ಅಲ್ಲಿನ ಸುರಕ್ಷತಾ ಮಟ್ಟ ಅಂಥ ಚೆನ್ನಾಗಿಲ್ಲ. ಒಂದು ವೇಳೆ ಈಗಿನ ವಿಮಾನ ಅಪಘಾತದಲ್ಲಿ ಎಲ್ಲರೂ ಮೃತಪಟ್ಟರೆ, 1997ರ ನಂತರ ದೇಶ ಕಂಡ ಭೀಕರ ವಿಮಾನ ಅಪಘಾತ ಇದಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ ಯಾರಾದರೂ ಬದುಕಿರಬಹುದಾ ಎಂಬುದು ನಮಗೆ ಗೊತ್ತಿಲ್ಲ ಎಂದು ಶೋಧ ಹಾಗೂ ಪರಿಹಾರ ಕಾರ್ಯಾಚರಣೆ ಕೈಗೆತ್ತಿಕೊಂಡ ಸಂಸ್ಥೆಯ ಮುಖ್ಯಸ್ಥರಾದ ಮುಹಮ್ಮದ್ ಸಯೂಗಿ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಮಾನದ ತುರ್ತು ಟ್ರಾನ್ಸ್ ಮೀಟರ್ ನಿಂದ ಯಾವುದೇ ಸಿಗ್ನಲ್ ಬರುತ್ತಿಲ್ಲ. ನಾವು ಭರವಸೆ ಇಡುಬಹುದು, ಪ್ರಾರ್ಥಿಸಬಹುದು, ಆದರೆ ಖಾತ್ರಿಯಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ.

ವಿಮಾನದಲ್ಲಿ ಕೆಲ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿತ್ತು
ವಿಮಾನವು ನೀರಿನೊಳಗೆ 98ರಿಂದ 115 ಅಡಿ ಆಳಕ್ಕೆ ಮುಳುಗಿದೆ. ಹೆಡ್ ಫೋನ್, ಜೀವ ರಕ್ಷಕ ವಸ್ತುಗಳು, ಇದರ ಜತೆಗೆ ಅಂಗಗಳು ದೊರೆತಿವೆ. ಜಕಾರ್ತದ ಪೂರ್ವ ಕಡಲತೀರದ ಕಾರವಾಂಗ್ ನಲ್ಲಿ ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿವೆ. ಮೀನು ಹಿಡಿಯುವ ದೋಣಿಗಳನ್ನು ಸಹಾಯಕ್ಕಾಗಿ ಸಿದ್ಧಪಡಿಸಲಾಗಿದೆ. ವಿಮಾನವು ಬಾಲಿಯಿಂದ ಜಕಾರ್ತಕ್ಕೆ ಬರುವಾಗ ತಾಂತ್ರಿಕ ಸಮಸ್ಯೆಗಳಿದ್ದವು. ಆದರೆ ಅದನ್ನು ನಿವಾರಣೆ ಮಾಡಲಾಗಿತ್ತು ಎಂದು ಲಯನ್ ಏರ್ ಗ್ರೂಪ್ ನ ಮುಖ್ಯ ಅಧಿಕಾರಿ ಎಡ್ವರ್ಡ್ ಸೈರೈಟ್ ಮಾಹಿತಿ ನೀಡಿದ್ದಾರೆ. ಆದರೆ ಅದೇ ಸಮಸ್ಯೆಯು ಉಳಿದ ವಿಮಾನಗಳಲ್ಲಿ ಇಲ್ಲ ಎಂದಿದ್ದು, ಲಯನ್ ವಿಮಾನಯಾನ ಸಂಸ್ಥೆಯು ಹನ್ನೊಂದು 737 ಬೋಯಿಂಗ್ MAX8 ವಿಮಾನವನ್ನು ಹೊಂದಿದೆ. ಉಳಿದದ್ದರ ಚಟುವಟಿಕೆಗಳನ್ನು ನಿಲ್ಲಿಸುವ ಆಲೋಚನೆ ಇಲ್ಲ ಎಂದಿದ್ದಾರೆ.

ಬೆಳಗ್ಗೆ 6.20ರ ಹೊತ್ತಿಗೆ ವಿಮಾನವು ಹೊರಟಿತ್ತು
ಬೆಳಗ್ಗೆ 6.20ರ ಹೊತ್ತಿಗೆ ವಿಮಾನವು ಜಕಾರ್ತದಿಂದ ಹೊರಟಿತ್ತು. ಪಂಗ್ ಕಲ್ ಪಿನಾಂಗ್ ನಲ್ಲಿ ಬೆಳಗ್ಗೆ 7.20ರ ಹೊತ್ತಿಗೆ ಇರಬೇಕಾಗಿತ್ತು. ವಿಮಾದಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಇದೀಗ ಜಕಾರ್ತ ಹಾಗೂ ಪಂಗ್ ಕಲ್ ಪಿನಾಂಗ್ ವಿಮಾನ ನಿಲ್ದಾಣಕ್ಕೆ ಧಾವಿಸಿ ಬರುತ್ತಿದ್ದಾರೆ. "ತಾಳ್ಮೆಯಿಂದ ಇರು. ಅಪ್ಪನ ಒಳಿತಿಗಾಗಿ ಪ್ರಾರ್ಥನೆ ಮಾಡು" ಎಂದು ಮಹಿಳೆಯೊಬ್ಬರು ತಮ್ಮ ಮಗಳನ್ನು ಸಮಾಧಾನ ಮಾಡುತ್ತಿದ್ದದ್ದು ಜಕಾರ್ತ ವಿಮಾನ ನಿಲ್ದಾಣದಲ್ಲಿ ಕಂಡುಬಂತು. ಆದರೆ ಆಕೆ ಮಾಧ್ಯಮಗಳ ಜತೆ ಮಾತನಾಡಲು ನಿರಾಕರಿಸಿದ್ದಾರೆ.

ಬ್ಲ್ಯಾಕ್ ಬಾಕ್ಸ್ ಪರಿಶೀಲನೆ ಮಾಡಬೇಕು
ವಿಮಾನದ ಬ್ಲ್ಯಾಕ್ ಬಾಕ್ಸ್, ಕಾಕ್ ಪಿಟ್ ನೊಳಗಿನ ಧ್ವನಿ ಮುದ್ರಣ ಹಾಗೂ ವಿಮಾನದ ದತ್ತಾಂಶ ದಾಖಲಾತಿ ಸಿಕ್ಕ ನಂತರವೇ ವಿಮಾನ ಅಪಘಾತಕ್ಕೆ ಕಾರಣ ತಿಳಿಸಲು ಸಾಧ್ಯ ಎಂದು ಇಂಡೋನೇಷ್ಯಾದ ಸಂಚಾರ ಸುರಕ್ಷಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ. "ವಿಮಾನವು ಆಧುನಿಕವಾಗಿತ್ತು. ದತ್ತಾಂಶವನ್ನು ವಿಮಾನದಿಂದ ಕಳುಹಿಸುತ್ತಿತ್ತು. ಅದನ್ನು ಕೂಡ ನಾವು ಪರಿಶೀಲನೆ ಮಾಡಬಹುದು. ಮುಖ್ಯವಾಗಿ ಬ್ಲ್ಯಾಕ್ ಬಾಕ್ಸ್ ಪರಿಶೀಲಿಸಬೇಕು" ಎಂದು ಹೇಳಿದ್ದಾರೆ.












Click it and Unblock the Notifications