ಅಫ್ಘಾನಿಸ್ತಾನದಲ್ಲಿ ಮಹಿಳಾ ಪರ ವರದಿ ಪ್ರಸಾರಕ್ಕೆ ಇದೆಂಥಾ ಶಿಕ್ಷೆ!?
ಕಾಬೂಲ್, ಸಪ್ಟೆಂಬರ್ 9: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಕಠಿಣ ಇಸ್ಲಾಮಿಕ್ ನಿಯಮಗಳು ಅಥವಾ ಷರಿಯಾ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಹೊಸ ಸರ್ಕಾರ ಪಾಲನೆ ಮಾಡಲು ಹೊರಟಿರುವ ಕಾನೂನುಗಳು ಎಷ್ಟು ಕ್ರೂರವಾಗಿವೆ ಎಂಬುದಕ್ಕೆ ಇತ್ತೀಚಿಗೆ ನಡೆದಿರುವ ಒಂದೇ ಒಂದು ಘಟನೆ ಸಾಕ್ಷಿಯಾಗಿದೆ.
ತಾಲಿಬಾನ್ ಸರ್ಕಾರದ ವಿರುದ್ಧವಾಗಿ ಮಹಿಳೆಯರು ನಡೆಸಿದ ಪ್ರತಿಭಟನೆಯ ಸುದ್ದಿಯನ್ನು ಪ್ರಸಾರ ಮಾಡಿದ ಪತ್ರಕರ್ತರ ಬೆನ್ನಿಗೆ ಬಾಸುಂಡೆ ಬರುವ ರೀತಿಯಲ್ಲಿ ಹೊಡೆಯಲಾಗಿದೆ. ರಕ್ತ ಹೆಪ್ಪುಗಟ್ಟುವ ರೀತಿಯಲ್ಲಿ ಗಾಯಗೊಂಡಿರುವ ಪತ್ರಕರ್ತರು ಬೆನ್ನು ತೋರಿಸಿಕೊಂಡು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಾರ್ಕಸ್ ಯಾಮ್ ಒಂದು ಪೋಸ್ಟ್ (ಲಾಸ್ ಏಂಜಲೀಸ್ ಟೈಮ್ಸ್ ನ ವಿದೇಶಿ ವರದಿಗಾರ) ಮತ್ತು ಇನ್ನೊಂದರಲ್ಲಿ ಎಟಿಲಾಟ್ರೋಜ್ (ಅಫ್ಘಾನ್ ಸುದ್ದಿ ಸಂಸ್ಥೆ ಪ್ರಕಟಣೆ) ಈ ಫೋಟೋಗಳನ್ನು ಟ್ವೀಟ್ ಮಾಡಿವೆ.
ವಿದೇಶಿ ವರದಿಗಾರ ಯಮ್ ಟ್ವೀಟ್ ಮಾಡಿರುವ ಚಿತ್ರಗಳಲ್ಲಿ ಇಬ್ಬರು ಪುರುಷರು ತಮ್ಮ ಒಳಉಡುಪುಗಳಲ್ಲಿ ಕ್ಯಾಮರಾಕ್ಕೆ ಬೆನ್ನು ತೋರಿಸಿಕೊಂಡು ನಿಂತಿದ್ದಾರೆ. ಅವರ ಬೆನ್ನು ಮತ್ತು ಕಾಲುಗಳಲ್ಲಿ ಕೆಂಪು ಕಲೆಗಳು ಮತ್ತು ಮೂಗೇಟುಗಳು ಬಿದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅಫ್ಘಾನಿಸ್ತಾನದಲ್ಲಿ ಕಠಿಣ ಇಸ್ಲಾಮಿಕ್ ನಿಯಮಗಳು ಮತ್ತು ಷರಿಯಾ ಕಾನೂನುಗಳನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗುತ್ತಿದೆ ಎಂಬುದನ್ನು ತಾಲಿಬಾನ್ ಎತ್ತಿ ತೋರಿಸುತ್ತಿದೆ. ಜನರಲ್ಲಿ ಈ ಕಾನೂನುಗಳ ಬಗ್ಗೆ ಭಯ ಹುಟ್ಟಲು ಕಾರಣವೇನು ಎಂಬುದನ್ನು ಇದೊಂದು ಘಟನೆ ಉತ್ತರ ನೀಡಲಿದೆ. ದೇಶದ ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿದ ತಾಲಿಬಾನ್ ಮತ್ತದೇ ಹಳೆಚಾಳಿಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ತಾಲಿಬಾನ್ ಕ್ರೌರ್ಯಕ್ಕೆ ಸಾಕ್ಷಿ
ಟಾಕಿ ದರ್ಯಾಬಿ ಮತ್ತು ನೇಮತುಲ್ಲಾ ನಖ್ದಿ ಎಂಬ ಇಬ್ಬರು ಪತ್ರಕರ್ತರು ತಮ್ಮದೇ ಸಂಸ್ಥೆಯ ಉದ್ಯೋಗಿಗಳು ಎಂದು ಗುರುತಿಸಿರುವ ಎಟಿಲಾಟ್ರೋಜ್ ತಮ್ಮ ಟ್ವೀಟ್ ಸಂದೇಶದಲ್ಲಿ ಇಬ್ಬರಿಗೂ ಆಗಿರುವ ಗಾಯವನ್ನು ತೋರಿಸಿದ್ದಾರೆ. ಎಟಿಲಾಟ್ರೋಜ್ ಪ್ರಕಾರ, ದರ್ಯಾಬಿ ಮತ್ತು ನಖ್ದಿ - ವೀಡಿಯೋ ಸಂಪಾದಕರು ಮತ್ತು ವರದಿಗಾರರಾಗಿದ್ದಾರೆ. ನಿನ್ನೆ ಪಶ್ಚಿಮ ಕಾಬೂಲ್ನ ಕಾರ್ಟ್ -ಇ -ಚಾರ್ ಪ್ರದೇಶದಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಈ ಇಬ್ಬರನ್ನು ತಾಲಿಬಾನಿಗಳು ಅಪಹರಿಸಿದರು. ತದನಂತರ ಅವರನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

"ನಾವು ಪತ್ರಕರ್ತರು ಎಂದು ಕೂಗಿದರೆ ಅಪಹಾಸ"
ತಾಲಿಬಾನಿಗಳು ನಮ್ಮನ್ನು ಅಪಹರಿಸಿದ ಸಂದರ್ಭದಲ್ಲಿ ನಾವು ಪತ್ರಕರ್ತರು ಎಂದು ಕೂಗುತ್ತಿದ್ದೆವು. ಆದರೆ ಅವರು ಅದ್ಯಾವುದಕ್ಕೂ ಹೆದರಲಿಲ್ಲ. ಅವರು ನನ್ನನ್ನು ಕೊಲ್ಲುತ್ತಾರೆ ಎಂದು ನಾನು ಭಾವಿಸಿದ್ದೆವು, ಆದರೆ ಅವರು ನಮ್ಮ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರು ಎಂದು ನಖ್ದಿ ಹೇಳಿರುವ ಬಗ್ಗೆ ಲಾ ಟೈಮ್ಸ್ ಉಲ್ಲೇಖಿಸಿದೆ. ಈ ಇಬ್ಬರ ಜೊತೆಗೆ ಇತರೆ ಮೂವರು ಪತ್ರಕರ್ತರನ್ನು ಅಪಹರಿಸಲಾಗಿದೆ ಎಂದು ಲಾ ಟೈಮ್ಸ್ ವರದಿಯಲ್ಲಿ ಹೇಳಿದೆ. ಫ್ರಾನ್ಸ್ ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಯುರೋ ನ್ಯೂಸ್ ಸುದ್ದಿ ಸಂಸ್ಥೆಯ ಪತ್ರಕರ್ತರನ್ನು ತಾಲಿಬಾನ್ ಅಪಹರಿಸಿದ್ದು, ಯಾವುದೇ ರೀತಿ ಹಲ್ಲೆ ನಡೆಸದೇ ನಂತರ ಬಿಡುಗಡೆ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಿದೆ.
ಟೋಲೋ ನ್ಯೂಸ್ ಕ್ಯಾಮರಾ ಪರ್ಸನ್ ಆಗಿರುವ ವಹೀದ್ ಅಹ್ಮದ್ ಮತ್ತು ಎರಿಯಾನ ನ್ಯೂಸ್ ವರದಿಗಾರ ಶಮಿ ಜಾಹೇಶ್ ಜೊತೆಗೆ ಮಹಿಳೆಯರ ಪ್ರತಿಭಟನೆಯನ್ನು ಚಿತ್ರೀಕರಿಸಿದ ಕ್ಯಾಮರಾಮೆನ್ ಸಮಿಮ್ ಅನ್ನು ತಾಲಿಬಾನಿಗಳು ಬಂಧಿಸಿದ್ದರು. ಪತ್ರಿಕೋದ್ಯಮವನ್ನು ರಕ್ಷಿಸುವ ಸಮಿತಿಯು (ಸಿಪಿಜೆ) ಹೆಚ್ಚಿನ ದಾಳಿಯ ಕುರಿತು ವಿಸ್ತೃತ ವರದಿ ಬಗ್ಗೆ ವಿವರಿಸಿದೆ.
ಕಳೆದ ತಿಂಗಳು ಮತ್ತೊಬ್ಬ ಟೋಲೋ ನ್ಯೂಸ್ ವರದಿಗಾರ - ಜಿಯಾರ್ ಯಾದ್ ಖಾನ್ - ತಾಲಿಬಾನ್ ನಿಂದ ಹತ್ಯೆಗೀಡಾದನೆಂದು ನಂಬಲಾಗಿತ್ತು, ಮೊದಲು ಅವರು ಆತನನ್ನು ಗನ್ ಪಾಯಿಂಟ್ ನಲ್ಲಿ ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ದೃಢಪಡಿಸಲಾಯಿತು. ಇದಕ್ಕೂ ಮೊದಲು ಡಾಯ್ಟ್ ವೆಲ್ಲೆ ಹುಡುಕುವ ಸಂದರ್ಭದಲ್ಲಿ ಪತ್ರಕರ್ತನ ಸಂಬಂಧಿಯನ್ನು ಹತ್ಯೆ ಮಾಡಲಾಗಿತ್ತು.
|
ತಾಲಿಬಾನ್ ಹೇಳಿದಂತೆ ಪತ್ರಿಕಾ ಸ್ವಾತಂತ್ರ್ಯದ ರಕ್ಷಿಸುತ್ತಿಲ್ಲ
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವುದಕ್ಕೂ ಮೊದಲೇ ಮಾತನಾಡಿದ ಸಂಘಟನೆಯ ವಕ್ತಾರರು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಿನ್ನೆ ನಡೆದ ಘಟನೆ ಮತ್ತು ಕಳೆದೊಂದು ವಾರದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳು ತಾಲಿಬಾನ್ ನೀಡಿದ ಮಾತಿಗೆ ವಿರುದ್ಧವಾಗಿವೆ. ರಸ್ತೆಗಿಳಿದು ಪ್ರತಿಭಟನೆ ನಡೆಸದಂತೆ ತಾಲಿಬಾನ್ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇನ್ನು ಈ ಪ್ರತಿಭಟನೆಗಳ ಬಗ್ಗೆ ಯಾವುದೇ ಕಾರಣಕ್ಕೂ ವರದಿ ಮಾಡುವಂತಿಲ್ಲ ಎಂದು ಪತ್ರಕರ್ತರಿಗೆ ನಿರ್ಬಂಧವನ್ನು ವಿಧಿಸಲಾಗಿದೆ. ಕಾಬೂಲ್ ನಗರದಲ್ಲಿ 700ಕ್ಕಿಂತ ಹೆಚ್ಚಾಗಿದ್ದ ಸಕ್ರಿಯ ಪತ್ರಕರ್ತರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಹೋರಾಟ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮಹಿಳೆಯರ ಗುಂಪೊಂದು ಸೋಮವಾರ ಬಲ್ಖ್ ಪ್ರಾಂತ್ಯದಲ್ಲಿ ಕಳೆದ 20 ವರ್ಷಗಳ ಸಾಧನೆಗಳನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು. ಬುಧವಾರ ಪಶ್ಚಿಮ ಕಾಬೂಲ್ನ ಕಾರ್ಟ್ -ಇ -ಚಾರ್ ಪ್ರದೇಶದಲ್ಲಿ ಮಹಿಳೆಯರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಅಫ್ಘಾನಿಸ್ತಾನದ ಸರ್ಕಾರದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು. ಮಹಿಳೆಯರಿಲ್ಲದ ಹೊಸ ಸರ್ಕಾರ ಅರ್ಥಹೀನವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ
ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ಜನರಲ್ಲಿ ಭಯ ಹುಟ್ಟಿಸಿರುವ ಷರಿಯಾ ಕಾನೂನು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿರುತ್ತದೆ. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆ ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತದೆ. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತದೆ.

ಅಸಲಿಗೆ ಷರಿಯಾ ಕಾನೂನು ಎಂದರೇನು?
ಷರಿಯಾ ಕಾನೂನು ಎಂಬುದರ ಅರ್ಥ? ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ. ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

ಷರಿಯಾ ಕಾನೂನನ್ನು ತಾಲಿಬಾನ್ ಏಕೆ ಪಾಲನೆ ಮಾಡುತ್ತೆ?
ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ತಾಲಿಬಾನಿಗಳು ಪಶ್ತೂನ್ ಜನಾಂಗಕ್ಕೆ ಸೇರಿದ್ದು, ಇಸ್ಲಾಂನ ಸುನ್ನಿ ಅನುಯಾಯಿಗಳಾಗಿದ್ದಾರೆ. ತಾಲಿಬಾನ್ ಸಂಘಟನೆಯ ಬಹುಪಾಲು ಉನ್ನತ ಸ್ಥಾನಗಳಲ್ಲಿ ಇದೇ ಸುನ್ನಿ ಜನಾಂಗದ ನಾಯಕರಿದ್ದಾರೆ. ಇದರ ಮಧ್ಯೆ ಅಫ್ಘಾನಿಸ್ತಾನದಲ್ಲಿ ಜಾರಿಗೊಳಿಸಲು ಹೊರಟಿರುವ ಷರಿಯಾ ಕಾನೂನುಗಳಿಂದ ಹಜಾರಸ್ ಮತ್ತು ಶಿಯಾಗಳಂತಹ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಅಲ್ಲದೆ, ಇಸ್ಲಾಮಿಕ್ ಪಾದ್ರಿಗಳ ಮಟ್ಟದಲ್ಲಿ ಮಹಿಳೆಯರು ಇಲ್ಲದೇ ಕಾನೂನು ಮತ್ತು ರಾಜಕೀಯ ಕ್ರಮದಲ್ಲಿ ಹಿತಾಸಕ್ತಿಗಳಿಗೆ ಸ್ಥಾನ ಸಿಗುವುದಿಲ್ಲ ಎಂಬ ಭಯವನ್ನು ಸೃಷ್ಟಿಸುತ್ತದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್
ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದಾರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ. ಈ 33 ಸಚಿವರಲ್ಲಿ 17 ಮಂದಿ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications