ಡ್ಯಾಂ ಬ್ಲಾಸ್ಟ್: 5 ಜನರ ಸಾವು, ಲಕ್ಷಾಂತರ ಜನರು ಬೀದಿಗೆ
ಉಕ್ರೇನ್: ಮೊನ್ನೆ ಮೊನ್ನೆ ತನಕ ಅಲ್ಲಿನ ಜನ ನೆಮ್ಮದಿಯಾಗಿದ್ದರು. ಆದರೆ ದಿಢೀರ್ ರಾತ್ರೋ ರಾತ್ರೋ ಮನೆಗೆ ನೀರು ನುಗ್ಗಿತ್ತು. ಜೀವ ಉಳಿದರೆ ಸಾಕಪ್ಪ ಅಂತಾ ಜನರು ಓಡಿ ಮನೆ ಬಿಟ್ಟು ಬಂದರು. ನೋಡ ನೋಡ್ತಿದ್ದಂತೆ ಅವರ ಮನೆಯ ಜೊತೆಗೆ ಜೀವನವೂ ಮುಳುಗಿ ಹೋಗಿತ್ತು. ಇದು ಸಿನಿಮಾ ಕಥೆಯಲ್ಲ, ಉಕ್ರೇನ್ನಲ್ಲಿ ಡ್ಯಾಂ ಸ್ಫೋಟದ ನಂತರದ ಜನರ ವ್ಯಥೆ.
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಖೆರ್ಸನ್ ಪ್ರಾಂತ್ಯದಲ್ಲಿ ಡ್ಯಾಂ ಸ್ಫೋಟಗೊಂಡ ಬಳಿಕ ಸಾವಿರಾರು ಜನ ಸಾವಿನ ಸುಳಿಗೆ ಸಿಲುಕಿದ್ದಾರೆ. ಕಖೌಕಾ ಡ್ಯಾಂ ನೀರು ನೇರವಾಗಿ ಸಾವಿರಾರು ಕಿಲೋಮೀಟರ್ ಸುತ್ತಮುತ್ತಲ ಪ್ರದೇಶಕ್ಕೆ ನುಗ್ಗಿದೆ. ಹೀಗಾಗಿ ನೂರಾರು ಹಳ್ಳಿಗಳಲ್ಲಿ ವಾಸವಿದ್ದ ಲಕ್ಷಾಂತರ ಜನರನ್ನ ಅಲ್ಲಿಂದ ಖಾಲಿ ಮಾಡಿಸಲಾಗಿದೆ. ಆದರೂ 5 ಜನರ ಪ್ರಾಣಪಕ್ಷಿ ಈ ದುರಂತದಲ್ಲಿ ಹಾರಿ ಹೋಗಿದೆ ಅನ್ನೋ ಆಘಾತಕಾರಿ ಸುದ್ದಿ ತಿಳಿದುಬಂದಿದೆ. ಇಷ್ಟೇ ಅಲ್ಲ ಸಾವಿನ ಸಂಖ್ಯೆ ಡಬಲ್ ಆಗುವ ಭೀತಿ ಎದುರಾಗಿದೆ.
ಯಾರದ್ದೋ ತಪ್ಪು.. ಇನ್ಯಾರಿಗೋ ಶಿಕ್ಷೆ!
ಖೆರ್ಸನ್ ಡ್ಯಾಂ ನಿರ್ಮಾಣವಾಗಿದ್ದು 1956ರಲ್ಲಿ, ಇಂತಹ ಅತ್ಯಂತ ಹಳೆಯ ಜಲಾಶಯಕ್ಕೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲಾಗಿದೆ. ಆದ್ರೆ ಇದನ್ನ ಮಾಡಿದ್ದು ಯಾರು ಅಂತಾ ರಷ್ಯಾ ಕೂಡ ಒಪ್ಪಿಕೊಳ್ಳುತ್ತಿಲ್ಲ ಇತ್ತ ಉಕ್ರೇನ್ ಕೂಡ ಒಪ್ಪಿಕೊಂಡಿಲ್ಲ. ಇಬ್ಬರೂ ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸುತ್ತಿದ್ದಾರೆ. ಆದ್ರೆ ಜನರ ಬದುಕು ಮಾತ್ರ ಬೀದಿಗೆ ಬಿದ್ದುಬಿಟ್ಟಿದೆ. ಘಟನೆ ಬಳಿಕ ಲಕ್ಷಾಂತರ ಜನರ ಜೀವ ಅಪಾಯದಲ್ಲಿ ಸಿಲುಕಿರುವ ಸಂದರ್ಭದಲ್ಲೇ ಮತ್ತೆ ಇನ್ನೊಂದು ಕಂಟಕ ಎದುರಾಗಿಬಿಟ್ಟಿದೆ. ಅದು ಮನುಷ್ಯರಿಗೆ ಮಾತ್ರವಲ್ಲ ಜಲಚರಗಳಿಗೂ ಸಂಕಷ್ಟ ತಂದಿದೆ.
150 ಟನ್ ಇಂಜಿನ್ ಆಯಿಲ್
ಹೌದು, ಈಗ ಡ್ಯಾಂ ಬ್ಲಾಸ್ಟ್ ಆಗಿರುವ ನದಿ ತುಂಬಾ ಉದ್ದ ಹರಿಯುತ್ತದೆ. ಈ ಕಾರಣಕ್ಕೆ ಡ್ಯಾಂನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಏಕಾಏಕಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ, ನದಿಯ ಸುತ್ತಮುತ್ತ ಕೈಗಾರಿಕೆಗಳು ಇಟ್ಟಿದ್ದ ಸುಮಾರು 150 ಟನ್ಗೂ ಹೆಚ್ಚು ಇಂಜಿನ್ ಆಯಿಲ್ ನದಿ ಪಾಲಾಗಿದೆ. ಇದೀಗ ಡ್ನಿಪ್ರೋ ನದಿ ನೀರು ನೇರ ಸಮುದ್ರಕ್ಕೆ ಸೇರುವ ಹಿನ್ನೆಲೆ ಜಲಚರಗಳ ಸ್ಥಿತಿ ಕೂಡ ಕಂಟಕಕ್ಕೆ ಸಿಲುಕಿದೆ. ಈವರೆಗೆ 5 ಜನರ ಸಾವಿನ ಸಂಖ್ಯೆ ತಿಳಿದಿದ್ದು, ಉಕ್ರೇನ್ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದ ಸಾಕಷ್ಟು ವೃದ್ಧರು ಈ ಘಟನೆಗೆ ಬಲಿಯಾಗಿರುವ ಅನುಮಾನ ದಟ್ಟವಾಗಿದೆ.
ರಷ್ಯಾ ಡ್ಯಾಂಗಳ ಮೇಲೆ ಕಣ್ಣು?
ಉಕ್ರೇನ್ ಡ್ಯಾಂ ಬ್ಲಾಸ್ಟ್ ಬಗ್ಗೆ ಯುರೋಪ್ ಒಕ್ಕೂಟ ನಿನ್ನೆ ಅಸಮಾಧಾನ ಹೊರಹಾಕಿದ್ದು, ಆ ಬಳಿಕ ವಿಶ್ವಸಂಸ್ಥೆ ಕೂಡ ವಾರ್ನಿಂಗ್ ನೀಡಿದೆ. ಅಮೆರಿಕ ಈಗಾಗಲೇ ಉಕ್ರೇನ್ಗೆ ಇನ್ನಷ್ಟು ವೆಪನ್ಸ್ ಸಪ್ಲೈ ಮಾಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಇದೇ ಸಂದರ್ಭವನ್ನ ಬಳಸಿಕೊಂಡು ರಷ್ಯಾ ವಿರುದ್ಧ ಶತ್ರುಗಳು ಒಂದಾಗಿದ್ದಾರೆ ಅನ್ನೋದು ರಷ್ಯಾದ ಆರೋಪ. ಮತ್ತೊಂದ್ಕಡೆ ರಷ್ಯಾ ಮೇಲೆ ಪ್ರತಿಕಾರದ ದಾಳಿ ನಡೆಯುವ ಸಾಧ್ಯತೆ ಅಲ್ಲಗಳೆಯುವಂತೆ ಇಲ್ಲ. ಹೀಗಾಗಿ ರಷ್ಯಾ ಸೇನೆ ತನ್ನ ದೇಶದಲ್ಲಿರುವ ಡ್ಯಾಂಗಳು ಮತ್ತು ಸೂಕ್ಷ್ಮ ಸ್ಥಳಗಳ ಮೇಲೆ ಕಣ್ಣಿಟ್ಟು ಕಾಯುತ್ತಿದೆ.
ಖೆರ್ಸನ್ ಡ್ಯಾಂ 240 ಕಿ.ಮೀ. ವಿಸ್ತಾರದವರೆಗೆ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿತ್ತು. ಇಂತಹ ಬೃಹತ್ ಜಲಾಶಯ ಸ್ಫೋಟಗೊಂಡಿರುವ ಪರಿಣಾಮ ಡ್ನಿಪ್ರೊದ ಪಶ್ಚಿಮ ದಂಡೆಯ ಹಳ್ಳಿಗಳಿಗೆ ಅಪಾಯ ಎದುರಾಗಿದೆ. ನದಿ ನೀರಿನ ಜೊತೆ ಹಾವು, ಚೇಳು, ಮೊಸಳೆ, ಮೀನು ಹೀಗೆ ಜೀವ ತೆಗೆಯುವ ಜೀವಿಗಳು ಕೂಡ ಮನೆಗೆ ನುಗ್ಗುತ್ತಿವೆ. ಹೀಗಾಗಿ ಜನ ಮನೆಬಿಟ್ಟು ಓಡಿ ಹೋಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ರಕ್ಷಣಾ ಕಾರ್ಯಾಚರಣೆ ಕೂಡ ಸೂಕ್ತವಾಗಿ ನಡೆಸಲು ಆಗುತ್ತಿಲ್ಲ. ಜನ ತಮ್ಮ ನಿತ್ಯದ ಬದುಕಿಗೆ ಕೂಡಿಟ್ಟಿದ್ದ ಅಕ್ಕಿ, ಗೋದಿ ಹಿಟ್ಟು ಎಲ್ಲವೂ ನೀರಲ್ಲಿ ಮುಳುಗಿ ಹೋಗಿರುವುದು ದುರಂತವೇ ಸರಿ.