ನೇಪಾಳ: ಭಾರತದ ಹಿಂದು ಯಾತ್ರಿಗಳ ದುರ್ಮರಣ
ಕಟ್ಮಂಡು,ಜೂ.3: ನೇಪಾಳದ ಪರ್ವತ ಪ್ರದೇಶದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಬೆಟ್ಟದ ಮೇಲಿಂದ ಉರುಳಿ ನದಿಗೆ ಬಿದ್ದು 17ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ. ಮೃತಪಟ್ಟವರ ಪೈಕಿ ಕನಿಷ್ಠ ನಾಲ್ವರು ಭಾರತೀಯ ಯಾತ್ರಿಗಳು ಇದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಪ್ರವಾಸಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಬೆಟ್ಟದ ಮೇಲಿನಿಂದ ಪಲ್ಟಿ ಹೊಡೆದು ನೂರು ಮೀಟರ್ ಕೆಳಗೆ ನದಿಗೆ ಬಿತ್ತು. ಬಸ್ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಈ ಪ್ರವಾಸಿಗಳು ಕಪಿಲವಸ್ತುವಿನ ಕೃಷ್ಣನಗರಕ್ಕೆ ಭೇಟಿ ನೀಡಿ ಅಲ್ಲಿನ ಸ್ವರ್ಗದ್ವಾರಿ ದೇವಸ್ಥಾನದಲ್ಲಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಮಾದಿ ಖೋಲ ನದಿಗೆ ಬಿದ್ದಿದೆ ಎಂದು ಹೇಳಲಾಗಿದೆ.
ನೇಪಾಳದ ರಾಜಧಾನಿ ಕಟ್ಮಂಡುವಿನಿಂದ ಪೂರ್ವಕ್ಕೆ ಸುಮಾರು 400 ಕಿ.ಮೀ ದೂರದಲ್ಲಿ ಈ ದುರ್ಘಟನೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಸಾವನ್ನಪ್ಪಿರುವವರ ಪೈಕಿ ಹೆಚ್ಚಿನವರು ಭಾರತೀಯ ಯಾತ್ರಿಗಳೇ ಆಗಿದ್ದಾರೆ ಎಂದು ಮುಖ್ಯ ಜಿಲ್ಲಾಧಿಕಾರಿ ರಾಮ್ ಬಹದ್ದೂರು ಕರಂಬಾಗ್ ಹೇಳಿದ್ದಾರೆ.
ಒಟ್ಟಾರೆ ಒಂಭತ್ತು ಮಂದಿ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. 6 ಜನ ಆಸ್ಪತ್ರೆ ಸೇರಿದ ಮೇಲೆ ಚಿಕಿತ್ಸೆ ಫಲಕಾರಿಯಾಗದೆ ಸತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿರುವ ಭಾರತೀಯರನ್ನು ಸತ್ಗುರು ಹರ್ಜನ್, ಸನಾಹಿ ಹರ್ಜನ್, ಫುಲೊ ಹರ್ಜನ್, ದಿಲು ಹರ್ಜನ್ ಎಂದು ಗುರುತಿಸಲಾಗಿದೆ. ಸುಮಾರೂ 40ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ್ತಿದ್ದಾರೆ. (ಪಿಟಿಐ)