ಮುಂಬೈ ಮಾದರಿ ರಷ್ಯಾದಲ್ಲೂ ಪಾಪಿ ಉಗ್ರರ ಅಟ್ಟಹಾಸ, 115 ಜನರ ಸಾವು!
ರಷ್ಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ದಿಢೀರ್ ನುಗ್ಗಿದ ಆಗಂತುಕರು, ಮನಸ್ಸಿಗೆ ಬಂದಂತೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ರಕ್ತದೋಕುಳಿ ನಡೆದಿದೆ. ಇಡೀ ರಷ್ಯಾ ಉಗ್ರರ ಈ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದೆ. ಮುಂಬೈನ ರೀತಿಯಲ್ಲೇ ರಷ್ಯಾದಲ್ಲಿ ಕೂಡ ಕಿರಾತಕ ಉಗ್ರರು ಭೀಕರ ದಾಳಿ ನಡೆಸಿದ್ದಾರೆ.
ಅಂದಹಾಗೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತದ, 26/11 ಮುಂಬೈ ದಾಳಿಗೆ ಹೋಲಿಕೆ ಮಾಡಲಾಗುತ್ತಿದೆ. ಮಾಸ್ಕೋದ ಒಳಾಂಗಣ ಸಭಾಂಗಣ, ಕ್ರಾಕಸ್ ಸಿಟಿ ಹಾಲ್ಗೆ ನುಗ್ಗಿದ ಶಸ್ತ್ರಸಜ್ಜಿತ ಪಾಪಿ ಉಗ್ರರ ತಂಡ, ಮನಸ್ಸಿಗೆ ಬಂದಂತೆ ಗುಂಡಿನ ದಾಳಿ ನಡೆಸಿದೆ. ಮೇಲ್ನೋಟಕ್ಕೆ ಈ ದಾಳಿಯನ್ನು ಐಎಸ್ಐಎಸ್ ಉಗ್ರರು ನಡೆಸಿದ್ದಾರೆಂಬ ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಹಾಗಾದರೆ ಈವರೆಗೆ ಮೃತಪಟ್ಟಿರುವ ಜನರ ಸಂಖ್ಯೆ ಎಷ್ಟು ಗೊತ್ತಾ? ಘಟನೆ ಬಗ್ಗೆ ಭಾರತ ಏನು ಹೇಳಿದೆ? ರಷ್ಯಾ ಅಧ್ಯಕ್ಷ ಪುಟಿನ್ರ ಆದೇಶ ಏನು? ಮುಂದೆ ಓದಿ.

ಭಾರತದಂತೆ ರಷ್ಯಾದಲ್ಲೂ ಆತಂಕ
ಅದು 2008ರ ನವೆಂಬರ್ 26, ಯಾರೂ ಊಹಿಸದ ಘಟನೆ ನಡೆದು ಹೋಗಿತ್ತು. ಭಾರತದ ವಾಣಿಜ್ಯ ರಾಜಧಾನಿ ಎಂಬ ಬಿರುದು ಪಡೆದಿರುವ ಮುಂಬೈ ಮೇಲೆ ಉಗ್ರರ ದಾಳಿ ನಡೆದಿತ್ತು. ಅದೇ ರೀತಿ ಈಗ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕೂಡ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಾಸ್ಕೋದ ಕ್ರಾಕಸ್ ಸಿಟಿ ಹಾಲ್ನಲ್ಲಿ ಸಂಗೀತ ಕಾರ್ಯಕ್ರಮ ಇತ್ತು. ಹೀಗಾಗಿ ಸಾವಿರಾರು ಜನ ಸೇರಿದ್ದರು. ಆದರೆ ಗನ್ ಹಿಡಿದು ಒಳಗೆ ನುಗ್ಗಿದ ಕಿರಾತಕ ಉಗ್ರರು ಭೀಕರ ದಾಳಿ ಮಾಡಿದರು. ಏಕಾಏಕಿ ಹಾಲ್ ಒಳಗೆ ನುಗ್ಗಿದ ಉಗ್ರರು ಮನಸೋಯಿಚ್ಛೆ ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಈವರೆಗೆ 115 ಜನರು ಮೃತಪಟ್ಟಿದ್ದು, 187 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈವರೆಗೂ ಕೃತ್ಯದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ವಹಿಸಿಕೊಂಡಿಲ್ಲ, ಆದರೂ ಈ ಕೃತ್ಯವನ್ನು ಐಎಸ್ಐಎಸ್ ನಡೆಸಿದೆ ಎನ್ನಲಾಗುತ್ತಿದೆ. ಉಗ್ರರು ಮುಖಕ್ಕೆ ಮಾಸ್ಕ್ ಹಾಕಿ & ಕೈಯಲ್ಲಿ ಆಟೋಮೆಟಿಕ್ ಗನ್ ಹಿಡಿದು ಒಳಗೆ ನುಗ್ಗಿದ್ದಾರೆ. ಆ ವೇಳೆ ಸಂಗೀತ ಕೇಳಲು ಬಂದಿದ್ದ ಜನರ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾರೆ. ಹಾಗೇ ಕೈ ಬಾಂಬ್ನ ಕೂಡ ಎಸೆಯಲಾಗಿದೆ. ಮತ್ತೊಂದು ಕಡೆ ಉಗ್ರರಿಗೆ ಹೆದರಿ ಮಾಲ್ ಬಿಟ್ಟು ಓಡುವಾಗಲೂ ಜನರನ್ನು ಅಟ್ಟಾಡಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಮೃಗರೂಪಿ ಉಗ್ರರು.

ರಷ್ಯಾಗೆ ಧೈರ್ಯ ತುಂಬಿದ ಭಾರತ
ಭಾರತ & ರಷ್ಯಾ ನಡುವೆ ಅತ್ಯುತ್ತಮ ಸಂಬಂಧ ಇದ್ದು, ಎರಡೂ ದೇಶಗಳು ಹೊಂದಾಣಿಕೆ ಆಧಾರದ ಮೇಲೆ ಒಬ್ಬರಿಗೆ ಮತ್ತೊಬ್ಬರು ಸಹಾಯ ಮಾಡುತ್ತಿವೆ. ಹೀಗಿದ್ದಾಗಲೇ ಉಗ್ರರಿಂದ ಭೀಕರ ದಾಳಿ ನಡೆದಿದ್ದು ಪರಿಸ್ಥಿತಿ ಕೈಮೀರಿ ಹೋಗಿದೆ. ಇದೇ ಕಾರಣಕ್ಕೆ ಭಾರತವು ಕೂಡ ಈಗ ರಷ್ಯಾಗೆ ಧೈರ್ಯ ತುಂಬಿದೆ. ಅದ್ರಲ್ಲೂ ಮೊನೆ ಮೊನ್ನೆಯಷ್ಟೇ ರಷ್ಯಾದಲ್ಲಿ ಚುನಾವಣೆ ನಡೆದಿದ್ದು, ವ್ಲಾದಿಮಿರ್ ಪುಟಿನ್ ಅವರು ಮತ್ತೆ ಮುಂದಿನ 6 ವರ್ಷಕ್ಕೆ ಆಯ್ಕೆ ಆಗಿದ್ದಾರೆ.
ವ್ಲಾದಿಮಿರ್ ಪುಟಿನ್ ಖಡಕ್ ಆದೇಶ
ರಷ್ಯಾ ಉಗ್ರರ ದಾಳಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಉಗ್ರರ ದಾಳಿಯನ್ನ ರಷ್ಯಾ ಸರ್ಕಾರ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿದ್ದು, ಈ ಕುರಿತು ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ ರಷ್ಯಾದ ಅಧ್ಯಕ್ಷ ಪುಟಿನ್, ಗಾಯಾಳುಗಳ ರಕ್ಷಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಹಾಗೇ ರಷ್ಯಾದ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುವ ಸಮಯದಲ್ಲೇ ಇಂತಹ ಘಟನೆ ಸಂಭವಿಸಿದೆ.












Click it and Unblock the Notifications