ಜೊಮಾಟೊ ಜಾಹೀರಾತಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರನಿಗೆ ಅವಮಾನ: ಕ್ಷಮೆ ಕೇಳಿದ ಸಂಸ್ಥೆ
ನವದೆಹಲಿ, ಆಗಸ್ಟ್ 21: ಹೃತಿಕ್ ರೋಷನ್ ಅಭಿನಯಯ ಜೊಮಾಟೊ ಜಾಹೀರಾತಿನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾದ ಬಳಿಕ, ಜೊಮಾಟೊ ತಾನು ನೀಡಿದ ಜಾಹೀರಾತಿನ ಕುರಿತು ಸ್ಪಷ್ಟನೆ ನೀಡಿದ್ದು, ಕ್ಷಮೆ ಯಾಚಿಸಿದೆ.
'ಮನ್ ಕಿಯಾ, ಜೊಮಾಟೊ ಕಿಯಾ' ಶೀರ್ಷಿಕೆಯ ಜಾಹೀರಾತಿನಲ್ಲಿ, ಹೃತಿಕ್ ರೋಷನ್ 'ಥಾಲಿ' ಊಟ ಮಾಡಲು ಬಯಸಿದ್ದರು ಎಂದು ಹೇಳುತ್ತಾರೆ. ಉಜ್ಜಯಿನಿಯಲ್ಲಿರುವುದರಿಂದ, ಮಹಾಕಾಲ್ನಿಂದ ಥಾಲಿಯನ್ನು ಆರ್ಡರ್ ಮಾಡಿದ್ದೇನೆ ಎಂದು ಹೇಳುವುದನ್ನು ಜಾಹೀರಾತಿನಲ್ಲಿ ನೋಡಬಹುದು. ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಅಥವಾ ಮಹಾಕಾಲ್ ಶಿವನ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಇಬ್ಬರು ಅರ್ಚಕರು ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ನಂತರ ಜೊಮಾಟೊ ಬಹಿಷ್ಕಾರ ಮಾಡುವ ಅಭಿಯಾನ ಭಾನುವಾರ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಯಿತು.
ಜಾಹೀರಾತಿನಲ್ಲಿ ನಟ ಹೃತಿಕ್ ರೋಷನ್ 'ಮಹಾಕಾಲ್'ನಿಂದ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ತೋರಿಸಲಾಗಿದೆ. ಪ್ರಸಾದವನ್ನು ಭಕ್ತರಿಗೆ ಉಚಿತವಾಗಿ ಪ್ಲೇಟ್ (ಥಾಲಿ) ನಲ್ಲಿ ನೀಡಲಾಗುತ್ತದೆ ಮತ್ತು ಇದು ಆಹಾರ ವಿತರಣಾ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದಾದ ವಿಷಯವಲ್ಲ ಎಂದು ಹೇಳಿದರು.

ಜಾಹೀರಾತು ಹಿಂಪಡೆಯಲು ಹಿಂದೂ ಸಂಘಟನೆ ಆಗ್ರಹ
ಹೃತಿಕ್ ರೋಷನ್ ಜಾಹೀರಾತಿನಲ್ಲಿ ಹಿಂದೂಗಳ ಭಾವನೆಗಳನ್ನು ನೋಯಿಸುವ ಸಂಭಾಷಣೆಯಿದೆ, ಮಹಾಕಾಲ್ ಪ್ರಸಾದ ಜಾಹೀರಾತನ್ನು ಜೊಮಾಟೊ ಹಿಂಪಡೆಯಬೇಕೆಂದು ಉಜ್ಜಯಿನಿ ಪುರೋಹಿತರು ಒತ್ತಾಯಿಸಿದ್ದಾರೆ.
ಜೊಮಾಟೊ ಕೂಡಲೇ ಜಾಹೀರಾತನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ದೇವಸ್ಥಾನದ ಅರ್ಚಕರಾದ ಮಹೇಶ್ ಹೇಳಿದ್ದಾರೆ. ಅವರು ಮಹಾಕಾಲ್ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷರಾಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರನ್ನು ಸಂಪರ್ಕಿಸಿ ಜೊಮ್ಯಾಟೊ ಕಂಪನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಆಶಿಶ್ ಸಿಂಗ್, ದೇವಸ್ಥಾನವು ಉಚಿತ ಊಟವನ್ನು ಪ್ರಸಾದ ಎಂದು ನೀಡುತ್ತದೆ ಮತ್ತು ಅದನ್ನು ಮಾರಾಟ ಮಾಡುತ್ತಿರುವಂತೆ ಜಾಹೀರಾತಿನಲ್ಲಿ ತೋರಿಸಿರುವುದು ತಪ್ಪು ಎಂದರು.

ಹಿಂದೂ ಪರ ಸಂಘಟನೆಗಳ ಆಕ್ರೋಶ
'ಮಹಾಕಾಲ್ ಸೇ ಮಂಗಾ ಲಿಯಾ..', ಹೊಸ ಜೊಮಾಟೊ ಜಾಹೀರಾತು ಮಹಾಕಾಳೇಶ್ವರ ದೇವಸ್ಥಾನವನ್ನು ಆಹಾರ ವಿತರಣೆಗೆ ಜೋಡಿಸುವ ವಿವಾದ ಹುಟ್ಟುಹಾಕಿದೆ, ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಜಾಹೀರಾತನ್ನು ಮಹಾಕಾಲ ದೇವಸ್ಥಾನದ ಪೂಜಾರಿಗಳು ಖಂಡಿಸಿದ್ದಾರೆ. ಜೊಮಾಟೊ ಪದೇ ಪದೇ ಹಿಂದೂಗಳನ್ನು ಅವಮಾನಿಸುತ್ತಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು.
"ಮಹಾಕಲ್ ಆಹಾರ ಬೇಡುವವರಿಗೆ ಆಹಾರ ನೀಡುವ ಸೇವಕನಲ್ಲ, ಅವನು ಪೂಜಿಸುವ ದೇವರು. ಜೊಮಾಟೊ ಅದೇ ಧೈರ್ಯದಿಂದ ಬೇರೆ ಧರ್ಮದ ದೇವರನ್ನು ಅವಮಾನಿಸಬಹುದೇ?" ಸಂಸ್ಥೆ ಟ್ವೀಟ್ ಮಾಡಿದೆ.

ಎಐ ಚಾಲಿತ ಜಾಹೀರಾತು ಎಂದ ಜೊಮಾಟೊ ಸಂಸ್ಥೆ
ಹೃತಿಕ್ ರೋಷನ್ ಅಭಿನಯದ ಜಾಹೀರಾತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಚಾಲಿತ ಜಾಹೀರಾತಾಗಿದ್ದು, ಅದು ವೀಕ್ಷಕರ ಸ್ಥಳಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಹೇಳಿದೆ. ಹೀಗಾಗಿ ಹೃತಿಕ್ ರೋಷನ್ ಮಹಾಕಾಲ್ಗೆ 'ಥಾಲಿ' ಆರ್ಡರ್ ಮಾಡಿರುವ ಜಾಹೀರಾತನ್ನು ಉಜ್ಜಯಿನಿಯ ಜನರು ಮಾತ್ರ ನೋಡಬಹುದು ಎಂದು ಹೇಳಿದೆ.
ಸ್ಥಳ ಬದಲಾದಂತೆ ಆಹಾರವು ಬದಲಾಗುತ್ತದೆ. ಆದ್ದರಿಂದ ಅದೇ ಜಾಹೀರಾತಿನ ಇತರ ಹಲವು ಆವೃತ್ತಿಗಳಲ್ಲಿ, ಹೃತಿಕ್ ರೋಷನ್ ಕೆಲವು ಇತರ ಆಹಾರಗಳನ್ನು, ಹೆಚ್ಚಾಗಿ ಆ ಸ್ಥಳದ ವಿಶೇಷತೆ, ಸ್ಥಳದ ಪ್ರಸಿದ್ಧ ರೆಸ್ಟೋರೆಂಟ್ಗಳಿಂದ ಆರ್ಡರ್ ಮಾಡುವುದನ್ನು ಕಾಣಬಹುದು. ಉಜ್ಜಯಿನಿಯಲ್ಲಿ ಮಹಾಕಾಲ್ ಹೆಸರಿನ ರೆಸ್ಟೋರೆಂಟ್ಗಳಿವೆ ಎಂದು ಹೇಳಿದೆ.

ಯಾರನ್ನೂ ನೋಯಿಸುವ ಉದ್ದೇಶವಿಲ್ಲ
ಮಹಾಕಾಲ್ ರೆಸ್ಟೋರೆಂಟ್ ಉಜ್ಜಯಿನಿಯಲ್ಲಿ ನಮಗೆ ಹೆಚ್ಚಿನ ಆರ್ಡರ್ ನೀಡುವ ರೆಸ್ಟೋರೆಂಟ್ ಪಾಲುದಾರರಲ್ಲಿ ಒಂದಾಗಿದೆ ಮತ್ತು ಥಾಲಿ ಅದರ ಮೆನುವಿನಲ್ಲಿ ಶಿಫಾರಸು ಮಾಡಲಾದ ಆಹಾರ ಎಂದು ಅದು ಹೇಳಿದೆ.
ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ರೆಸ್ಟೋರೆಂಟ್ನ ಹೆಸರೇ ಹೊರತು ದೇವಸ್ಥಾನವಲ್ಲ ಎಂದು ಸ್ಪಷ್ಟಪಡಿಸಿದೆ. "ನಾವು ಉಜ್ಜಯಿನಿಯ ಜನರ ಭಾವನೆಗಳನ್ನು ಗೌರವಿಸುತ್ತೇವೆ ಮತ್ತು ಪ್ರಶ್ನೆಯಲ್ಲಿರುವ ಜಾಹೀರಾತು ಇನ್ನು ಮುಂದೆ ಚಾಲ್ತಿಯಲ್ಲಿಲ್ಲ. ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ, ಏಕೆಂದರೆ ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ಎಂದಿಗೂ ನೋಯಿಸುವ ಉದ್ದೇಶವಿಲ್ಲ" ಎಂದು ಅದು ಹೇಳಿದೆ.












Click it and Unblock the Notifications