ನಿಮ್ಮ ಮಾಜಿ ಸಿಎಂ ಕಾಂಗ್ರೆಸ್ನ ಹಿರಿಯ ನಾಯಕರ ಚಪ್ಪಲಿ ಎತ್ತುವುದರಲ್ಲಿ ನಿಷ್ಣಾತರು: ಮೋದಿ
ಪುದುಚೆರಿ, ಫೆಬ್ರವರಿ 25: ಇತ್ತೀಚೆಗಷ್ಟೇ ಸರ್ಕಾರ ಪತನಗೊಂಡ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಹಾಗೂ ಹಿಂದಿನ ಪುದುಚೆರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಪುದುಚೆರಿಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಕಾಣಬಹುದು ಎಂದರು. ಮುಖ್ಯಮಂತ್ರಿ ವಿ. ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೋಮವಾರ ಪತನಗೊಂಡಿತ್ತು. ಪುದುಚೆರಿಯ ಜನತೆ ಕಾಂಗ್ರೆಸ್ನ ದುರಾಡಳಿತದಿಂದ ದೊರೆತ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ನಾಯಕನ ಮಾತು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು; ಮೋದಿ
ನಾರಾಯಣ ಸಾಮಿ ನೇತೃತ್ವದ ಸರ್ಕಾರವು ಸಾರ್ವಜನಿಕ ಕಲ್ಯಾಣಕ್ಕಿಂತಲೂ ಬೇರೆ ಆದ್ಯತೆಗಳನ್ನು ಹೊಂದಿತ್ತು. ಪುದುಚೆರಿಗೆ 2016ರಲ್ಲಿ ಸರ್ಕಾರ ಸಿಕ್ಕಿತು. ಆದರೆ ಅದು ಕಾಂಗ್ರೆಸ್ ಹೈಕಮಾಂಡ್ಗೆ ಸೇವೆ ಸಲ್ಲಿಸುವುದರಲ್ಲಿ ಬಿಜಿಯಾಗಿತ್ತು. ಅದರ ಆದ್ಯತೆಗಳು ಬೇರೆಯದೇ ಆಗಿದ್ದವು ಎಂದು ಟೀಕಿಸಿದರು.
ಚಪ್ಪಲಿ ಎತ್ತುವುದರಲ್ಲಿ ಪರಿಣತರು
ಮಾಜಿ ಸಿಎಂ ನಾರಾಯಣಸಾಮಿ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಪ್ರಧಾನಿ, 'ನಿಮ್ಮ ಮಾಜಿ ಮುಖ್ಯಮಂತ್ರಿಯು ಅವರ ಪಕ್ಷದ ಹಿರಿಯ ನಾಯಕರ ಚಪ್ಪಲಿಗಳನ್ನು ಎತ್ತುವುದರಲ್ಲಿ ಪರಿಣತರು. ಆದರೆ ಪುದುಚೆರಿಯ ಜನತೆಯನ್ನು ಬಡತನದಿಂದ ಮೇಲೆತ್ತುವಲ್ಲಿ ಆಸಕ್ತಿ ಹೊಂದಿರಲಿಲ್ಲ' ಎಂದು ಕಟುವಾಗಿ ಟೀಕಿಸಿದರು.
ಜನರನ್ನೇ ಹೈಕಮಾಂಡ್ ಮಾಡುತ್ತದೆ
ಪುದುಚೆರಿಯ ಜನರಿಗೆ ಕೆಲವು ಕಾಂಗ್ರೆಸ್ ನಾಯಕರಿಗೆ ಸೇವೆ ಸಲ್ಲಿಸುವಂತಹ 'ಹೈಕಮಾಂಡ್' ಸರ್ಕಾರ ಅಗತ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಮತಹಾಕಿದರೆ ಎನ್ಡಿಎ ಸರ್ಕಾರವು ಜನರನ್ನೇ ತನ್ನ ಹೈಕಮಾಂಡ್ ಎಂಬಂತೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.
ಪುದುಚೇರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ "BEST" ಐಡಿಯಾ!
|
ದೇಶಕ್ಕೇ ಸುಳ್ಳು ಹೇಳಿದ ನಾರಾಯಣಸ್ವಾಮಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಎದುರು ಮೀನುಗಾರ ಮಹಿಳೆಯೊಬ್ಬರು ಮಾಡಿದ ಆರೋಪವನ್ನು ತಪ್ಪಾಗಿ ಇಂಗ್ಲಿಷ್ಗೆ ಅನುವಾದ ಮಾಡಿದ ನಾರಾಯಣಸಾಮಿ ಅವರ ವಿಡಿಯೋ ವೈರಲ್ ಆಗಿತ್ತು. ಅದನ್ನು ಉಲ್ಲೇಖಿಸಿದ ಮೋದಿ, 'ಕೆಲವು ದಿನಗಳ ಹಿಂದೆ ಇಡೀ ದೇಶ ಒಂದು ವಿಡಿಯೋವನ್ನು ನೋಡಿತ್ತು. ಚಂಡಮಾರುತ ಮತ್ತು ಪ್ರವಾಹದ ಸಂದರ್ಭದಲ್ಲಿ ಪುದುಚೆರಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ನಿರ್ಲಕ್ಷ್ಯದ ಬಗ್ಗೆ ಅಸಹಾಯಕ ಮಹಿಳೆಯೊಬ್ಬರು ದೂರು ನೀಡಿದ್ದರು. ಆಕೆಯ ಕಣ್ಣುಗಳಲ್ಲಿ ನೋವು ಕಾಣಿಸುತ್ತಿತ್ತು. ಆಕೆಯ ಧ್ವನಿಯಲ್ಲಿಯೇ ನೋವನ್ನು ಗ್ರಹಿಸಬಹುದಾಗಿತ್ತು. ಆದರೆ ದೇಶದಕ್ಕೆ ಸತ್ಯ ಹೇಳುವ ಬದಲು ಪುದುಚೆರಿಯ ಮಾಜಿ ಸಿಎಂ ಮಹಿಳೆಯ ಮಾತುಗಳನ್ನು ತಪ್ಪು ಪದಗಳಲ್ಲಿ ಅನುವಾದಿಸಿದ್ದರು' ಎಂದು ಹೇಳಿದರು.
ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ರೂಪಿಸುವ ಕುರಿತು ಕಾಂಗ್ರೆಸ್ ನಾಯಕರು ಮಾತನಾಡಿರುವುದು ನನಗೆ ನಿಜಕ್ಕೂ ಆಶ್ಚರ್ಯ ತಂದಿದೆ. ನಿಜ ಏನೆಂದರೆ, ಈಗಾಗಲೇ ಮೀನುಗಾರಿಕೆಗೆ ಸಚಿವಾಲಯ ಇದೆ. 2019ರಲ್ಲಿಯೇ ಎನ್ಡಿಎ ಸರ್ಕಾರ ಮೀನುಗಾರಿಕೆಗೆ ಸಚಿವಾಲಯ ರಚನೆ ಮಾಡಿತ್ತು. ಪಕ್ಷದ ಮುಖ್ಯಸ್ಥನಾದವರಿಗೇ ಈ ವಿಷಯ ತಿಳಿದಿಲ್ಲ ಎನ್ನುವುದು ಅಚ್ಚರಿ ಮೂಡಿಸುತ್ತದೆ ಎಂದು ರಾಹುಲ್ ಗಾಂಧಿ ವಿರುದ್ಧ ಮೋದಿ ವ್ಯಂಗ್ಯವಾಡಿದರು. ರೈತರಿಗೆ ಪ್ರತ್ಯೇಕ ಸಚಿವಾಲಯ ಇದೆ, ಆದರೆ ಮೀನುಗಾರರ ಸಮಸ್ಯೆ ಪರಿಹರಿಸಲು ಸಚಿವಾಲಯ ಇಲ್ಲ ಎಂದು ರಾಹುಲ್ ಗಾಂಧಿ ಕೇರಳದಲ್ಲಿ ಹೇಳಿದ್ದರು.