ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರು
ಸಂಸತ್ತು ಎನ್ನುವುದು ಜನರ ಆಶೋತ್ತರಗಳಿಗೆ ದನಿಯಾಗಲೆಂದು ಜನರೇ ಕಳಿಸಿರುವ ಜನಪ್ರತಿನಿಧಿಗಳ ಕಾರ್ಯಸ್ಥಾನ. ಜನರು ಇಟ್ಟಿರುವ ನಂಬಿಕೆಗೆ ಬದ್ಧವಾಗಿ, ಆರಿಸಿಬಂದ ಕ್ಷೇತ್ರ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿಯಬೇಕು. ಅಷ್ಟೇ ಅವರ ಕೆಲಸ. ಚರ್ಚೆಯಾಗಬೇಕಿರುವುದು ಈ ಬಗ್ಗೆಯೇ ಹೊರತು, ಅವರು ಎಂಥ ಉಡುಪಿ ಧರಿಸಿ ಬಂದಿದ್ದಾರೆ ಎಂಬ ಬಗ್ಗೆ ಅಲ್ಲ. ಅವರು ಸಂಸತ್ತಿಗೆ ಯಾವ ದಿರಿಸು ಬಂದರೇನು, ಅಲ್ವೆ?
ಹೆಚ್ಚಿನ ಸಂಸದರು ಗರಿಗರಿ ಖಾದಿ ದಿರಿಸಿನಲ್ಲಿ, ಕೆಲವರು ಸೂಟುಬೂಟಿನಲ್ಲಿ, ಇನ್ನೊಂದಿಷ್ಟು ಸಂಸದರು ತಮಗಿಷ್ಟವಾದ ಉಡುಪಿನಲ್ಲಿ ಬರಲು ಇಷ್ಟಪಟ್ಟರೆ, ಮಹಿಳಾಮಣಿಗಳಲ್ಲನೇಕರು ತಮಗೊಪ್ಪುವ ರೀತಿಯಲ್ಲಿ ಖಾದಿ, ರೇಷ್ಮೆ ಸೀರೆಗಳಲ್ಲಿ ಅಥವಾ ಸೆಲ್ವಾರ್ ಕಮೀಜ್ ಧರಿಸಿ ಮಿಂಚಲು ಇಷ್ಟಪಡುತ್ತಾರೆ.
ಮತೋತ್ಸವದಲ್ಲಿ ಗಮನ ಸೆಳೆದ ಈ ಇಬ್ಬರು ಸುಂದರಿಯರದ್ದೇ ಎಲ್ಲೆಡೆ ಚರ್ಚೆ
ಆದರೆ, ಈ ಬಾರಿ ಸಂಸತ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ, ಸಂಸದರ ಹೃದಯದ ಬಡಿತವನ್ನೇ ತಪ್ಪಿಸುವ ಪಶ್ಚಿಮ ಬಂಗಾಳದ ಇಬ್ಬರು ಸೌಂದರ್ಯವತಿಯರು ಟ್ರೆಂಡಿ ದಿರಿಸು ತೊಟ್ಟು ಬಂದಿದ್ದು ಕೆಲವರ ಕಣ್ಣು ಕಿಸುರಾಗುವಂತೆ ಮಾಡಿದೆ. ಇಷ್ಟು ಮಾತ್ರವಲ್ಲದೆ, ಸಂಸತ್ತಿನ ಮುಂದೆ ನಿಂತು ಸಾಕಷ್ಟು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಅವರು ತೃಣಮೂಲ ಕಾಂಗ್ರೆಸ್ ನಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್. ಇವರಿಬ್ಬರು ಬಂಗಾಳಿ ಚಿತ್ರರಂಗದಲ್ಲಿ, ಕಿರುಚಿತ್ರದಲ್ಲಿ ನಟಿಸಿ ಭಾರೀ ಹೆಸರು ಮಾಡಿದವರು. ಇವರಿಬ್ಬರ ಜೊತೆ ಮಹಾರಾಷ್ಟ್ರದಿಂದ ಕೂಡ ನವನೀತ್ ಕೌರ್ ಕೂಡ ಆಯ್ಕೆಯಾಗಿದ್ದಾರೆ. ಇವರು ಕನ್ನಡದ ದರ್ಶನ್ ಸಿನೆಮಾದಲ್ಲಿ ನಟಿಸಿ ಹೆಸರು ಗಳಿಸಿದವರು.
ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್
ಇದನ್ನೇನು ಪಾರ್ಲಿಮೆಂಟ್ ಅಂದುಕೊಂಡಿದ್ದೀರಾ ಅಥವಾ ಶೂಟಿಂಗ್ ಗೆ ಬಂದಿದ್ದೇವೆ ಎಂದುಕೊಂಡಿದ್ದೀರಾ ಎಂದು ಕೆಲ ಟ್ವಿಟ್ಟಿಗರು ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಇವರಿಬ್ಬರು ಟ್ರೋಲ್ ಆಗುತ್ತಿರುವುದು ಇದು ಮೊದಲೇನಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಿಂದ 17 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು, ಅವರಲ್ಲಿ ಗೆದ್ದಿರುವ ಇವರಿಬ್ಬರು. ಟಿಕೆಟ್ ಸಿಕ್ಕಾಗಿನಿಂದ ಪ್ರಚಾರ ನಡೆಸುವಾಗ, ನಂತರ ಗೆದ್ದ ಮೇಲೆ ಕೂಡ ಮಿಮಿ ಮತ್ತು ನುಸ್ರತ್ ಮೇಲೆ ಸಾಕಷ್ಟು ಮಾತಿನ ಪ್ರಹಾರ ಮಾಡಲಾಗಿದೆ. ಅವರಿಬ್ಬರ ಬಗ್ಗೆ ಅಸಹ್ಯಕರವಾಗಿ ಟ್ವೀಟ್ ಕೂಡ ಮಾಡಲಾಗಿತ್ತು. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಇವರು, ಜನಾಶೀರ್ವಾದದಿಂದ ಜಯಿಸಿ ಬಂದಿದ್ದಾರೆ.
ಜಾದವಪುರ ಕ್ಷೇತ್ರದಿಂದ ಮಿಮಿ ಚಕ್ರಬೋರ್ತಿ
ಕೇವಲ 30 ವರ್ಷದ ಮಿಮಿ ಚಕ್ರಬೋರ್ತಿ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲ. ನಟನೆಗೆ ಧುಮುಕುವ ಮೊದಲು ರೂಪದರ್ಶಿಯಾಗಿದ್ದವರು. ಪಶ್ಚಿಮ ಬಂಗಾಳದ ಜಾದವಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಅನುಪಮ್ ಹಜ್ರಾ ಅವರನ್ನು 295,239 ಮತಗಳ ಭಾರೀ ಅಂತರದಿಂದ ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಆರಂಭಿಕ ವಿದ್ಯಾಭ್ಯಾಸ ಮುಗಿಸಿದರೂ, ನಂತರ ನೆಲೆ ಕಂಡುಕೊಂಡಿದ್ದು ಪಶ್ಚಿಮ ಬಂಗಾಳದಲ್ಲಿ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಬಸಿರ್ಹಾತ್ ಕ್ಷೇತ್ರದಿಂದ ನುಸ್ರತ್ ಜಹಾನ್
ಮಿಮಿ ಚಕ್ರಬೋರ್ತಿಗಿಂದ ಒಂದು ವರ್ಷ ಕಿರಿಯರಾದ ನುಸ್ರತ್ ಜಹಾನ್ ರೂಹಿ ಅವರು ತೃಣಮೂಲ ಕಾಂಗ್ರೆಸ್ ಸೇರಿದ್ದೇ 2019ರಲ್ಲಿ. ಖೋಕಾ 420, ಖಿಲಾಡಿ, ಪವರ್ ಮುಂತಾದ ಸಿನೆಮಾಗಳಲ್ಲಿ ನಟಿಸಿ ಜನಪ್ರಿಯತೆ ಉತ್ತುಂಗಕ್ಕೇರಿದ್ದರು. ಅವರಿಗೆ ತೃಣಮೂಲ ಕಾಂಗ್ರೆಸ್ ನಿಂದ ಟಿಕೆಟ್ ಸಿಗುತ್ತಿದ್ದಂತೆ ಭಾರೀ ಪ್ರತಿಭಟನೆಗಳೂ ಆಗಿದ್ದವು. ಪಶ್ಚಿಮ ಬಂಗಾಳದ ಬಸಿರ್ಹಾತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್ ಅವರಿಗೆ ಅಸಲಿಗೆ ಸ್ಪರ್ಧೆಯೇ ಇರಲಿಲ್ಲ. ಇವರು 782,078 ಮತಗಳನ್ನು ಗಳಿಸಿದರೆ, ನಿಕಟ ಸ್ಪರ್ಧಿ ಬಿಜೆಪಿಯ ಸಯಂತನ್ ಬಸು ಪಡೆದಿದ್ದು 431,709 ಮತಗಳು. ನುಸ್ರತ್ ಅವರು 350,369 ಭಾರೀ ಮತಗಳ ಅಂತರದಿಂದ ಜಯಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ.
ಅಶ್ಲೀಲ ಭಾಷೆಯಲ್ಲಿ ಟ್ರೋಲ್
ಇವರಿಬ್ಬರೂ ಕಳೆದ ಚುನಾವಣೆಗಿಂತ ಹೆಚ್ಚಿನ ಅಂತರದಿಂದ ಇಬ್ಬರೂ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ 42 ಸಂಸದರಲ್ಲಿ ನುಸ್ರತ್ ಜಹಾನ್ ಎರಡನೇ ಅತೀಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರೆ, ಮಿಮಿ ಚಕ್ರಬೋರ್ತಿ ಅವರು ಮತಗಳ ಅಂತರದ ದೃಷ್ಟಿಯಿಂದ ಐದನೇ ಸ್ಥಾನದಲ್ಲಿದ್ದಾರೆ. ಅವರಿಬ್ಬರ ಮೇಲೆ ಅಶ್ಲೀಲ ಭಾಷೆಯನ್ನು ಬಳಸಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಯಿತು. ತ್ರಿವಳಿ ತಲಾಖ್ ಬಗ್ಗೆ ನುಸ್ರತ್ ಜಹಾನ್ ಅವರು ಆಡಿದ ಮಾತು ವಿವಾದ ಸೃಷ್ಟಿಸಿತ್ತು. ನಂತರ ಮಮತಾ ಬ್ಯಾನರ್ಜಿ ಅವರೇ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿ ಮಾಡಬೇಕಾಯಿತು.
ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕನ್ನಡದಲ್ಲಿ ನಟಿಸಿದ್ದ ನವನೀತ್ ಕೌರ್
ಈ ಇಬ್ಬರು ಚೆಲುವೆಯರು ವಿವಾದದಿಂದಾಗಿ ಗಮನ ಸೆಳೆದಿದ್ದರೆ, ಮಹಾರಾಷ್ಟ್ರದ ಅಮರಾವತಿಯಿಂದ ಸ್ಪರ್ಧಿಸಿ ಗೆದ್ದಿರುವ ಸ್ವತಂತ್ರ ಅಭ್ಯರ್ಥಿ ನವನೀತ್ ಕೌರ್ ರಾಣಾ ಅವರು ಕೂಡ ಸಿನೆಮಾ ನಟಿಯಾಗಿದ್ದು, ತಮ್ಮ ಸೌಂದರ್ಯದಿಂದಲೇ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ನಟ ದರ್ಶನ್ ಜೊತೆ 'ದರ್ಶನ್' ಚಿತ್ರದಲ್ಲಿ ನಟಿಸಿದ್ದಲ್ಲದೆ, ಹಿಂದಿ ಚಿತ್ರರಂಗದಲ್ಲಿಯೂ ಮಿಂಚಿದ್ದಾರೆ. ಅವರು ಶಿವಸೇನೆಯ ಅದ್ಸುಲ್ ಆನಂದರಾವ್ ವಿಠೋಬಾ (473,996) ಅವರನ್ನು ಕಡಿಮೆ ಮತಗಳ ಅಂತರದಿಂದ ಸೋಲಿಸಿದ್ದಾರೆ. ನವೀನತ್ ಅವರು ಪಡೆದಿದ್ದು 510,947 ಮತಗಳು.
ನವನವೋನ್ಮೇಷಶಾಲಿನಿಯರು
ಕೆಲ ದಿನಗಳ ಹಿಂದೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಮಹಿಳೆಯೊಬ್ಬರು ತಾವು ಉಟ್ಟಿದ್ದ ಹಳದಿ ಸೀರೆ ಮತ್ತು ಸೌಂದರ್ಯದಿಂದ ಭಾರೀ ಕೋಲಾಹಲವೆಬ್ಬಿಸಿದ್ದರು. ಎಲ್ಲೆಲ್ಲೂ ಅವರ ಬಗ್ಗೆಯೇ ಮಾತು. ಇದೀಗ ಸಂಸತ್ತು ಪ್ರವೇಶಿಸಿರುವ ಈ ನವನವೋನ್ಮೇಷಶಾಲಿನಿಯರ ಬಗ್ಗೆ ಭರ್ತಿ ಚರ್ಚೆ ನಡೆಯುತ್ತಿದೆ. ಕನಿಷ್ಠ ಪಕ್ಷ ಈ ಮೂವರಿಂದಾಗಿಯಾದರೂ ಪುರುಷ ಸಂಸದರು ತಪ್ಪದೆ ಪಾರ್ಲಿಮೆಂಟಿಗೆ ಬಂದು ಚರ್ಚೆಗಳಲ್ಲಿ ಪಾಲ್ಗೊಳ್ಳಲಿ ಎಂದು ಹಲವರ ಕೀಟಲೆಯ ಸದಾಶಯ.