ಯುಪಿಯಲ್ಲಿ ವಾಹನ ಚಾಲಕರಿಗೆ ಯೋಗಿಯ ಬಂಪರ್ ಆಫರ್- ಐದು ವರ್ಷಗಳ ಟ್ರಾಫಿಕ್ ಚಲನ್ಗಳು ರದ್ದು!
ಲಕ್ನೋ ಜೂನ್ 10: ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮತ್ತಷ್ಟು ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಿಎಂ ಯೋಗಿ ಆದಿತ್ಯನಾಥ್, ಇತ್ತೀಚೆಗಷ್ಟೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಯುಪಿಯಲ್ಲಿ ತಮ್ಮ ಮೊದಲ ಸರ್ಕಾರ ಆಡಳಿತ ನಡೆಸಿದ 2017 ರಿಂದ 2021 ರವರೆಗೆ ರಾಜ್ಯದಲ್ಲಿ ವಾಹನ ಚಾಲಕರಿಗೆ ವಿಧಿಸಲಾದ ಎಲ್ಲಾ ಚಲನ್ಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ಅಧಿಕಾರಿಗಳು ಆ ಐದು ವರ್ಷಗಳಲ್ಲಿ ನೀಡಿದ ಎಲ್ಲ ಚಲನ್ ಗಳನ್ನು ರದ್ದು ಮಾಡುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 2017 ರಿಂದ 2021 ರವರೆಗೆ ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರ ಎಲ್ಲಾ ಬಾಕಿ ಇರುವ ಟ್ರಾಫಿಕ್ ಚಲನ್ಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಘೋಷಿಸಿದೆ. ವಾಹನದ ಪ್ರಕಾರವನ್ನು ಲೆಕ್ಕಿಸದೆ 1 ಜನವರಿ 2017 ಮತ್ತು 31 ಡಿಸೆಂಬರ್ 2021 ರ ನಡುವೆ ನೀಡಲಾದ ಚಲನ್ಗಳಿಗೆ ರದ್ದತಿ ಅನ್ವಯಿಸಲಾಗುತ್ತದೆ. ಇದು ಪ್ರಸ್ತುತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಹ ಒಳಗೊಂಡಿದೆ.

ನ್ಯಾಯಾಲಯದ ಪ್ರಕರಣಗಳ ಪಟ್ಟಿಯನ್ನು ಸ್ವೀಕರಿಸಿದ ನಂತರ ಪೋರ್ಟಲ್ನಿಂದ ಟ್ರಾಫಿಕ್ ಚಲನ್ಗಳನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವು ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ. ಯುಪಿ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ರಾಜ್ಯದ ಹಲವು ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರಿಗೆ ಪರಿಹಾರ ಸಿಗಲಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನು ಲಕ್ಷಾಂತರ ವಾಹನ ಮಾಲೀಕರು ಸ್ವಾಗತಿಸಿದ್ದಾರೆ. ಅದರಲ್ಲೂ ಈ ಹಿಂದೆ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದವರಿಗೆ ಪರಿಹಾರ ಸಿಗುತ್ತಿದೆ.
ಜೂನ್ 2023 ರ ಯುಪಿ ಆರ್ಡಿನೆನ್ಸ್ ನಂ. 2 ರ ಪ್ರಕಾರ ಹಳೆಯ ಬಾಕಿ ಇರುವ ಚಲನ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಸಾರಿಗೆ ಆಯುಕ್ತರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನೋಯ್ಡಾದಲ್ಲಿ ರೈತರು ಹಳೆಯ ಚಲನ್ಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದಾರೆ. ಯುಪಿ ಟ್ರಾಫಿಕ್ ಪೊಲೀಸರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.
ವಾಹನ ಸವಾರರು ಸಾರಿಗೆ ಇಲಾಖೆಯ ವೆಬ್ಸೈಟ್ಗೆ ಹೋಗಿ ತಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ ಚಲನ್ಗಳ ವಿವರಗಳನ್ನು ತಿಳಿದುಕೊಳ್ಳಬಹುದು, ಚಾಲಕರು ತಪ್ಪು ಚಲನ್ ನೀಡಲಾಗಿದೆ ಎಂದು ಭಾವಿಸಿದರೆ, ಅವರು ನೇರವಾಗಿ ವೆಬ್ಸೈಟ್ಗೆ ದೂರು ಸಲ್ಲಿಸಬಹುದು. ವಾಹನದ ಚಲನ್ ತೆಗೆದ ನಂತರ ಸೆಲ್ ಫೋನ್ ಗೆ ಸಂದೇಶವೂ ರವಾನೆಯಾಗುತ್ತದೆ.
ಯುಪಿಯಲ್ಲಿ ಯೋಗಿಯ "ಟಿಫಿನ್ ಪೇ ಚರ್ಚಾ"
ಪ್ರಧಾನಿ ಮೋದಿಯವರ ಚಾಯ್ ಪೇ ಚರ್ಚೆಯ ಮಾದರಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯುಪಿಯಲ್ಲಿ ಟಿಫಿನ್ ಪೇ ಚರ್ಚಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಯುಪಿ ಬಿಜೆಪಿ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಪ್ರಮುಖ ಮಾತುಗಳನ್ನಾಡಿದರು. ಬಿಜೆಪಿ ನಾಯಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಯೋಗಿ ಶ್ಲಾಘಿಸಿದರು. ಮೋದಿಯವರ ಕಾರ್ಯವೈಖರಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚುತ್ತಿದೆ ಎಂದು ಯೋಗಿ ನೆನಪಿಸಿದರು.
ಕೇಂದ್ರದ ಮೋದಿ ಸರಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಮಹಾ ಸಂಪರ್ಕ ಅಭಿಯಾನದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಟಿಫಿನ್ ಪೇ ಚರ್ಚೆ' ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಗೋರಖ್ಪುರದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಭಾರತದ ಕೀರ್ತಿ ಜಾಗತಿಕವಾಗಿ ಹೆಚ್ಚಿದೆ ಎಂದರು.












Click it and Unblock the Notifications