ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಜತೆ ಭಾರತದ ವ್ಯವಹಾರ ಬೇಡ
ನವದೆಹಲಿ, ಸೆಪ್ಟೆಂಬರ್ 8: ನೂತನ ತಾಲಿಬಾನ್ ಸರ್ಕಾರದ ಜತೆ ಭಾರತವು ಯಾವುದೇ ರೀತಿಯ ವ್ಯವಹಾರವನ್ನು ನಡೆಸಲಾರದು ಎಂದು ಮಾಜಿ ವಿದೇಶಾಂಗ ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಲು ಸಾಧ್ಯವಿಲ್ಲ ಮತ್ತು ನಡೆಸಬಾರದು ಎಂದು ತಾಲಿಬಾನ್ ಉಸ್ತುವಾರಿ ಸಚಿವ ಸಂಪುಟ ಘೋಷಿಸಿದ ಬಳಿಕ ಸಿನ್ಹಾ ಒತ್ತಾಯಿಸಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು" ಎಂದು ಯಶವಂತ್ ಸಿನ್ಹಾ ಅವರು ಟ್ವೀಟ್ ಮಾಡಿದ್ದಾರೆ.

ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಇದೀಗ ತಾಲಿಬಾನ್ ವಶವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತಕ್ಕಿದ್ದ ಎಲ್ಲಾ ಆಮದು, ರಫ್ತು ವ್ಯವಹಾರ ಸ್ಥಗಿತಗೊಂಡಿದೆ. ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಇದ್ದ ಸರಕು ಸಾಗಣೆಯ ಮಾರ್ಗವನ್ನು ತಾಲಿಬಾನ್ ನಿಲ್ಲಿಸಿದೆ.
ಭಾರತೀಯ ರಫ್ತು ಸಂಸ್ಥೆ ಒಕ್ಕೂಟ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ. "ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.
ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು. ಇದೀಗ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ.
ಪರಿಣಾಮವಾಗಿ ಭಾರತಕ್ಕೂ ಆಮದಾಗುವುದು ನಿಂತಿದೆ" ಎಂದು ಅಜಯ್ ಸಹಾಯ್ ತಿಳಿಸಿದ್ದಾರೆ. ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲ ವಸ್ತುಗಳ ಬೆಲೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಭಾರತದ ಹೆಚ್ಚಿನ ಡ್ರೈಫ್ರೂಟ್ಗಳು ಆಫ್ಘಾನಿಸ್ತಾನದಿಂದ ಆಮದಾಗಿರುವುದರಿಂದ ಇವುಗಳ ಬೆಲೆ ಭಾರತದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.
ಆಫ್ಘಾನಿಸ್ತಾನದೊಂದಿಗೆ ಭಾರತ ದೀರ್ಘ ಕಾಲದಿಂದ ವ್ಯಾವಹಾರಿಕ ಸಂಬಂಧ ಹೊಂದಿದೆ. ಆಫ್ಘಾನಿಸ್ತಾನದೊಂದಿಗೆ ಅತಿ ಹೆಚ್ಚು ವ್ಯವಹಾರ ಹೊಂದಿರುವ ದೇಶಗಳಲ್ಲಿ ಭಾರತವೂ ಇದೆ. 2021ರಲ್ಲಿ ಆಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ 835 ಮಿಲಿಯನ್ ಡಾಲರ್ (ಸುಮಾರು 6,200 ಕೋಟಿ ರೂಪಾಯಿ) ಇದೆ.
ಇತ್ತೀಚಿಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ನೊಂದಿಗೆ ವ್ಯವಹರಿಸುವ ಬಗ್ಗೆ ಭಾರತ ಮುಕ್ತವಾಗಿರಬೇಕು ಮತ್ತು ಕಾಬೂಲ್ನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರೆಯಬೇಕು. ರಾಯಭಾರಿಯನ್ನು ವಾಪಸ್ ಕಳುಹಿಸಬೇಕು ಎಂದು ಸಿನ್ಹಾ ಅವರು ಹೇಳಿದ್ದರು.
ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಂಗಳವಾರ ತಾಲಿಬಾನ್ ಘೋಷಿಸಿದೆ.
ಅಫ್ಘಾನಿಸ್ತಾನ ಇದೀಗ ಸಂಪೂರ್ಣ ತಾಲಿಬಾನ್ ಕೈವಶವಾಗಿದೆ. ಅಮೆರಿಕ ಮಿಲಿಟರಿ ಸೈನ್ಯ ಕಾಲ್ಕಿತ್ತ ಬೆನ್ನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಕೂಡ ತಾಲಿಬಾನ್ ಹಿಡಿತದಲ್ಲಿದೆ. ಈ ಘಟನೆ ಬೆನ್ನಲ್ಲೇ ತಾಲಿಬಾನ್ ಮನವಿ ಮೇರೆಗೆ ಭಾರತ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರವಾದ, ಭಾರತ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದೆ.
ಭಾರತದ ರಾಯಭಾರಿ ದೀಪಕ್ ಮಿತ್ತಲ್ ಎತ್ತಿದ ಹಲವು ಕಾಳಜಿ ಹಾಗೂ ಸೂಚನೆಗಳನ್ನು ಸೂಕ್ತವಾಗಿ ಪರಿಹರಿಸುವುದಾಗಿ ತಾಲಿಬಾನ್ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಭಾರತದ ಜೊತೆ ಸೌಹಾರ್ಧಯುತ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
ಖತಾರ್ನ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮನವಿ ಮೇರೆಗೆ ಭಾರತದ ಖತಾರ್ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೀಪಕ್ ಮಿತ್ತಲ್ ಹಲವು ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ. ಭಾರತದ ಎಲ್ಲಾ ಕಾಳಜಿಯನ್ನು ಸೂಕ್ತವಾಗಿ ಪರಿಹರಿಸುವ ಭರವಸೆಯನ್ನು ತಾಲಿಬಾನ್ ಪ್ರತಿನಿಧಿಗಳು ನೀಡಿದ್ದಾರೆ.
ತಾಲಿಬಾನ್ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಹಾಗೂ ಭಾರತಕ್ಕೆ ಆಗಮಿಸಲು ಇಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಸ್ಥಳಾಂತರ ಕುರಿತು ದೋಹಾ ಕಚೇರಿಯಲ್ಲಿ ಚರ್ಚಿಸಲಾಯಿತು.
ಈ ಮಾತುಕತೆಯಲ್ಲಿ ಆಫ್ಘಾನಿಸ್ತಾನ ನೆಲವನ್ನು ಯಾವುದೇ ಕಾರಣಕ್ಕೂ ಭಾರತ ವಿರೋಧಿ ಚಟುವಟಿಕೆ, ಭಾರತ ವಿರುದ್ದ ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ದೀಪಕ್ ಮಿತ್ತಲ್ ತಾಲಿಬಾನ್ಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications