ಮೃತ ಯೋಧನ ಪತ್ನಿಗೆ 58 ವರ್ಷಗಳ ನಂತರ ಬಂತು ಪಿಂಚಣಿ!!!
1945ರ ವಿಶ್ವ ಎರಡನೇ ಮಹಾಯುದ್ಧದ ವೇಳೆ ಆಫ್ರಿಕಾ ರಣಭೂಮಿಯಲ್ಲಿ ಜೀವ ತೆತ್ತಿದ್ದ ಭಾರತೀಯ ಯೋಧ, ಮಹಾರಾಷ್ಟ್ರದ ಲ್ಯಾ್ಸ್ ನಾಯಕ್ ಜೋತಿ ಧೋಂಡಿ.
ಖಾವಾಸ್ ಪುರ (ಸೋಲಾಪುರ್), ಫೆಬ್ರವರಿ 4: ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಪರವಾಗಿ ರಣಾಂಗಣದಲ್ಲಿ ಹೋರಾಟಿ ಜೀವ ತೆತ್ತಿದ್ದ ಮಹಾರಾಷ್ಟ್ರ ಯೋಧನೊಬ್ಬನ ಪತ್ನಿಗೆ ಬರೋಬ್ಬರಿ 58 ವರ್ಷಗಳ ನಂತರ ಆಕೆಗೆ ಸಿಗಬೇಕಿದ್ದ ಪಿಂಚಣಿ ಸಿಕ್ಕಿದೆ.
1945ರ ಜನವರಿ 6ರಂದು ಭಾರತ ಸೇನೆಯು ಆಫ್ರಿಕಾದಲ್ಲಿ ನಡೆದಿದ್ದ ಯುದ್ಧವೊಂದರಲ್ಲಿ ಭಾಗವಹಿಸಿತ್ತು. ಆ ವೇಳೆ, 3/5 ಮರಾಠಾ ಲೈಟ್ ಇನ್ ಫ್ಯಾಂಟ್ರಿ (ಎಂಎಲ್ಐ) ಯೋಧ ಲ್ಯಾನ್ಸ್ ನಾಯಕ್ ಧೋಂಡಿ ಯಾದವ್ ಅವರು ಮೃತಪಟ್ಟಿದ್ದರು. ಆಗ ಅವರಿಗೆ ಕೇವಲ 23 ವರ್ಷ.
ಹಾಗಾಗಿ, ಅವರ ಪತ್ನಿ ಕಾಶೀಬಾಯಿ ಧೋಂಡಿ ಯಾದವ್ ಅವರು ಯುದ್ಧದಲ್ಲಿ ಮಡಿದ ಸೇನಾ ಪತ್ನಿಯರಿಗೆ ನೀಡಲಾಗುವ ಪಿಂಚಣಿ ಹಣಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ತಕ್ಷಣಕ್ಕೆ ಅವರಿಗೆ ಪಿಂಚಣಿ ಸಿಗಲಿಲ್ಲ. ಅಲ್ಲಿಂದ, ಸುಮಾರು 13 ವರ್ಷಗಳ ನಂತರ, ಅವರಿಗೆ ಮಾಸಿಕವಾಗಿ 8 ರು. ಪಿಂಚಣಿ ನೀಡಲು ಸರ್ಕಾರ ಸಮ್ಮತಿಸಿತ್ತು. ಆದರೆ, ಅದು ಮಡಿದ ಸೈನಿಕರಿಗೆ ನೀಡಲಾಗುವ ಪಿಂಚಣಿ ಆಗಿರಲಿಲ್ಲ. ಬದಲಿಗೆ, ಅದು ಕೇವಲ ವಿಧವಾ ಪಿಂಚಣಿಯಷ್ಟೇ ಆಗಿತ್ತು.
ಹಾಗಾಗಿ, ತಮಗೆ ಯೋಧರ ವಿಧವಾ ಪಿಂಚಣಿಯನ್ನೇ ನೀಡಬೇಕೆಂದು ಅಂದಿನಿಂದಲೂ ಕಾಶೀಬಾಯಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದರು. ಈಗ, ಕಾಶೀಬಾಯಿಗೆ ಭರ್ತಿ 85 ವರ್ಷ. ಈಗ, ಆಕೆ ನಡೆಯಲೂ ಆಗದ ಪರಿಸ್ಥಿತಿಯಲ್ಲಿದ್ದಾರೆ. ಈಗ ಅವರಿಗೆ ವಿಶೇಷ ಪಿಂಚಣಿಯನ್ನು ನೀಡಲು ಸರ್ಕಾರ ಆದೇಶಿಸಿದೆ. ಆದರೆ, ಇದೂ ಕೂಡ ಯೋಧರ ವಿಧವಾ ಪಿಂಚಣಿಯಲ್ಲ. ಆದರೆ, ಅದಕ್ಕೆ ತತ್ಸಮಾನವಾದ ವಿಶೇಷ ಕುಟುಂಬ ಪಿಂಚಣಿ.
ಮೊದಲು ನೀಡಲಾಗುತ್ತಿದ್ದ ಮಾಸಿಕ 8 ರು. ಪಿಂಚಣಿಗೂ ಕಾಲಕಾಲಕ್ಕೆ ಏರಿಕೆ ಕಂಡು ಈಗ ಮಾಸಿಕ 8,000 ರು. ಆಗಿದ್ದು, ಇದೀಗ ವಿಶೇಷ ಕುಟುಂಬ ಪಿಂಚಣಿಯೂ ಸೇರಿ ಅಜ್ಜಿಯ ಮಾಸಿಕ ಆದಾಯ 24,000 ರು.ಗೆ ಬಂದಿದೆ.
ಆದರೆ, ಇದಕ್ಕಾಗಿ ಆಕೆ ಸವೆಸಿದ ಹಾದಿ ಐದು ದಶಕ ! ಅಂತೂ ಇಂತೂ ಅಜ್ಜಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಈ ಬಗ್ಗೆ ಅಜ್ಜಿ ಸಂಭ್ರಮಪಡುತ್ತಾರಾದರೂ, ವಯಸ್ಸಿನಲ್ಲಿದ್ದಾಗ ಮಕ್ಕಳು ಮರಿ ಸಾಕಲು, ತನಗೊಂದು ಸೂರು ಕಟ್ಟಿಕೊಳ್ಳವ ಅಗತ್ಯತೆ ವೇಳೆ ಕೊಂಚ ಆರ್ಥಿಕ ಬಲ ಸಿಕ್ಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬ ಸಣ್ಣ ಬೇಸರವನ್ನೂ ಅಜ್ಜಿ ವ್ಯಕ್ತಪಡಿಸುತ್ತಾರೆ.