ಖಾನ್ ಸರ್ ಹಾಗೂ ರೈಲ್ವೆ ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ಪಡೆಯಿರಿ
ಪಾಟ್ನಾ, ಜನವರಿ 28: ಭಾರತೀಯ ರೈಲ್ವೆ ನೇಮಕಾತಿ ಪ್ರಕ್ರಿಯೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗುವಂತೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಹಾರದ ಖಾನ್ ಸರ್ ಮತ್ತು ಇತರರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಒತ್ತಾಯಿಸಿದ್ದಾರೆ.
"ಬಿಹಾರದ ಪಾಟ್ನಾ ಸೇರಿದಂತೆ ಹಲವೆಡೆ ಇಡೀ ದೇಶದ ಬಡ ಮತ್ತು ಪ್ರತಿಭಾವಂತ ಯುವಕರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಖಾನ್ ಕೋಚಿಂಗ್ ಸೆಂಟರ್ ಮತ್ತು ಇತರೆ ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ರೈಲ್ವೆ ಪೊಲೀಸರು ಖಾನ್ ಸರ್ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣಗಳನ್ನು ವಿಳಂಬ ಮಾಡದೆ ಹಿಂಪಡೆಯಬೇಕು. ರೈಲ್ವೆ ಮಂಡಳಿ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ," ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪಾಟ್ನಾದ ಜನಪ್ರಿಯ ಶಿಕ್ಷಕ ಎನಿಸಿಕೊಂಡಿರುವ ಖಾನ್ ಸರ್, ತಮ್ಮ ನಿಜವಾದ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಖಾನ್ ಜಿಎಸ್ ಸಂಶೋಧನಾ ಸಂಸ್ಥೆಯನ್ನು ನಡೆಸುತ್ತಿರುವ ಅವರು, ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಬೋಧನಾ ಶೈಲಿಯಿಂದ ಜನಪ್ರಿಯರಾಗಿದ್ದಾರೆ. ಆನ್ಲೈನ್ನಲ್ಲಿ ಉಪನ್ಯಾಸಗಳನ್ನು ನೀಡುವ ಖಾನ್ ಸರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಪಾರ ವಿದ್ಯಾರ್ಥಿಗಳ ಬಳಗವನ್ನು ಹೊಂದಿದ್ದಾರೆ.

ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಎಫ್ಐಆರ್:
ಕಳೆದ ಸೋಮವಾರ ಮತ್ತು ಮಂಗಳವಾರ ಪಾಟ್ನಾದಲ್ಲಿ ಬಂಧಿತರಾದ ಪ್ರತಿಭಟನಾನಿರತ ವಿದ್ಯಾರ್ಥಿಗಳು ನೀಡಿದ ಹೇಳಿಕೆಗಳ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರ್ಆರ್ಬಿ ಎನ್ಟಿಪಿಸಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳನ್ನು ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಖಾನ್ ಸರ್ ಪ್ರೇರೇಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ತದನಂತರ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಲು ಪ್ರೇರೇಪಿಸಿದಂತೆ ಆಯಿತು ಎಂದು ವಿದ್ಯಾರ್ಥಿಗಳು ಪೊಲೀಸರಲ್ಲಿ ಹೇಳಿಕೆ ನೀಡಿದ್ದರು.
ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಶೀಘ್ರ ನ್ಯಾಯ:
ರೈಲ್ವೇ ಪರೀಕ್ಷೆಯ ಪ್ರಕ್ರಿಯೆ ಮತ್ತು ಫಲಿತಾಂಶಗಳಲ್ಲಿನ ದೋಷವು ಬಿಹಾರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳನ್ನು ಕೆರಳಿಸಿದೆ. "ರೈಲ್ವೆ ನೇಮಕಾತಿ ಮಂಡಳಿಯ ತಪ್ಪುಗಳನ್ನು ಪರಿಶೀಲಿಸಲು ಸಮಿತಿ ರಚಿಸಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಶೀಘ್ರ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.

ಉದ್ಯೋಗ ಆಕಾಂಕ್ಷಿಗಳಿಂದ ದೂರು ಸ್ವೀಕರಿಸಲು ಸೂಚನೆ:
ರೈಲ್ವೆ ನೇಮಕಾತಿ ಮಂಡಳಿಯ ಎಲ್ಲಾ ಅಧ್ಯಕ್ಷರು ಅಭ್ಯರ್ಥಿಗಳಿಂದ ಕುಂದುಕೊರತೆಗಳನ್ನು ಸ್ವೀಕರಿಸಬೇಕು. ಈ ಕುಂದುಕೊರತೆಗಳನ್ನು ಸಂಗ್ರಹಿಸಿ, ಅದನ್ನು ಸಮಿತಿಗೆ ಕಳುಹಿಸಿ ಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಫೆಬ್ರವರಿ 16ರವರೆಗೆ ಅಂದರೆ ಮುಂದಿನ ಮೂರು ವಾರಗಳ ತನಕ ಅಭ್ಯರ್ಥಿಗಳು ತಮ್ಮ ದೂರುಗಳನ್ನು ಮತ್ತು ಸಲಹೆಗಳನ್ನು ಸಮಿತಿಗೆ ಸಲ್ಲಿಸುವಂತೆ ಅವಕಾಶ ನೀಡಲಾಗಿದೆ. ಅಂತಿಮವಾಗಿ ಸಮಿತಿಯು ಮಾರ್ಚ್ 4ರೊಳಗೆ ತನ್ನ ಶಿಫಾರಸ್ಸುಗಳನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ.
ಸಮಿತಿ ಸದಸ್ಯರ ವಿವರ ಹೀಗಿದೆ:
ಸಮಿತಿಯ ಸದಸ್ಯರು ದೀಪಕ್ ಪೀಟರ್, ಅಧ್ಯಕ್ಷರು, ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ (ಕೈಗಾರಿಕಾ ಸಂಬಂಧ),
ರೈಲ್ವೆ ಮಂಡಳಿಯ ರಾಜೀವ್ ಗಾಂಧಿ, ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಾಹಕ ನಿರ್ದೇಶಕ ಎಸ್ಟಾಬ್ಲಿಷ್ಮೆಂಟ್ (RRB),
ರೈಲ್ವೆ ಮಂಡಳಿಯ ಆದಿತ್ಯ ಕುಮಾರ್, ಸದಸ್ಯರು, ಮುಖ್ಯ ಸಿಬ್ಬಂದಿ ಅಧಿಕಾರಿ (ಆಡಳಿತ),
ಪಶ್ಚಿಮ ರೈಲ್ವೆಯ ಜಗದೀಶ್ ಅಲಗರ್, ಸದಸ್ಯ ಅಧ್ಯಕ್ಷ ಆರ್ಆರ್ಬಿ/ಚೆನ್ನೈ
ಮುಖೇಶ್ ಗುಪ್ತಾ, ಸದಸ್ಯ ಅಧ್ಯಕ್ಷ ಆರ್ಆರ್ಬಿ, ಭೋಪಾಲ್
ರೈಲ್ವೆ ಪರೀಕ್ಷೆ ಪ್ರಕ್ರಿಯೆ ದೋಷದ ಹಿನ್ನೆಲೆ:
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (RRB-NTPC) ಪರೀಕ್ಷೆ 2021 ಅನ್ನು ಎರಡು ಹಂತಗಳಲ್ಲಿ ನಡೆಸುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಕೆಂಡಾಮಂಡಲರಾಗಿದ್ದಾರೆ. ಎರಡನೇ ಹಂತದ ಪರೀಕ್ಷೆಯಿಂದ ಮೊದಲ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಅನ್ಯಾಯವಾಗುತ್ತದೆ ಎಂಬುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಾದವಾಗಿದೆ. ಒಟ್ಟು 1.25 ಕೋಟಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಜನವರಿ 15ರಂದು ಮೊದಲ ಹಂತದ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿತ್ತು.












Click it and Unblock the Notifications