ಕಾಂಗ್ರೆಸ್ ಅಧ್ಯಕ್ಷ ರಾಹುಲ್, ರೋಡ್ ಶೋಗೆ ಜನಸಾಗರ: ಮೋದಿ ವಿರುದ್ದ ವಾಗ್ದಾಳಿ
ಜಬಲ್ಪುರ (ಮ.ಪ್ರ), ಅ 8: ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಚುನಾವಣಾ ಕಾವು ದಿನದಿಂದ ಏರಕ್ಕೇರ ತೊಡಗಿದೆ. ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಕ್ಕೆ ಬಂದ ಆರಂಭದಲ್ಲಿ, ಬೇಟಿ ಪಡಾವೋ, ಬೇಟಿ ಬಚಾವೋ ಎನ್ನುವುದು ಪ್ರಧಾನಿ ಮೋದಿಯವರ ಧ್ಯೇಯವಾಕ್ಯವಾಗಿತ್ತು, ಇತ್ತೀಚಿನ ದಿನಗಳಲ್ಲಿ ಅದು ಬದಲಾಗಿ, ' ಬೇಟಿ ಪಡಾವೋ, ಬಿಜೆಪಿ ಎಂಎಲ್ಎ ಸೆ ಬೇಟಿ ಬಚಾವೋ' ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಎಂಟು ಕಿಲೋಮೀಟರ್ ರೋಡ್ ಶೋ ನಡೆಸಿ ಮಾತನಾಡುತ್ತಿದ್ದ ರಾಹುಲ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಮೊರೆ ಹೋಗುತ್ತಿರುವ ರಾಹುಲ್, ರೋಡ್ ಶೋಗೆ ಮುನ್ನ ನರ್ಮದಾ ನದಿಗೆ ಪೂಜೆ ಸಲ್ಲಿಸಿ ಬಂದರು.
ಒಂದು ದಿನದ ಹಿಂದೆ ಹೊರಬಿದ್ದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಫಲಿತಾಂಶ ಹೊರಬಿದ್ದಿರುವುದು ಒಂದೆಡೆಯಾದರೆ, ರಾಜ್ಯದ ಚುನಾವಣಾ ಪ್ರಚಾರದ ವೇಳೆ, ರಾಹುಲ್ ಗಾಂಧಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ.
ಜೈ ನರ್ಮದೆ, ನರ್ಮದ ಭಕ್ತ್ ರಾಹುಲ್ ಎನ್ನುವ ಜನರ ಘೋಷಣೆಯ ನಡುವೆ, ರಾಹುಲ್ ಗಾಂಧಿಯನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ಮಧ್ಯಪ್ರದೇಶದ ರೇವಾ ಮತ್ತು ಸಾತ್ನಾ ಜಿಲ್ಲೆಯಲ್ಲಿನ ದೇವಾಲಯಗಳನ್ನು ಭೇಟಿಯಾದ ನಂತರ, ರಾಹುಲ್ ಗಾಂಧಿಯನ್ನು ರಾಮಭಕ್ತ ಎಂದು ಅದಕ್ಕೂ ಮುನ್ನ, ಕೈಲಾಶ ಮಾನಸ ಭೇಟಿಯ ವೇಳೆ ಶಿವಭಕ್ತ ಎಂದು ರಾಹುಲ್ ಗಾಂಧಿಯನ್ನು ಕರೆಯಲಾಗುತ್ತಿತ್ತು. ಮೋದಿ, ಚೌಹಾಣ್ ವಿರುದ್ದ ರಾಹುಲ್ ವಾಗ್ದಾಳಿಯ ಹೈಲೆಟ್ಸ್..

ಮಹಿಳೆಯ ಸುರಕ್ಷಿತೆ ಬಿಜೆಪಿಗೆ ಬೇಕಿಲ್ಲ
ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿದೆ, ಅದೇ ಪಕ್ಷದ ಶಾಸಕರೊಬ್ಬರು ಬಲಾತ್ಕಾರ ಮಾಡುತ್ತಾರೆ, ಆ ವಿಚಾರ ರುಜುವಾತು ಆದಮೇಲೂ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತನ್ನ ಶಾಸಕನ ವಿರುದ್ದ ಕಾನೂನು ಕ್ರಮ ನಡೆಯದಂತೆ ನೋಡಿಕೊಳ್ಳುತ್ತಾರೆ. ಇವರಿಗೆಲ್ಲಾ, ನೈತಿಕತೆ ಅನ್ನೋದು ಇದೆಯಾ, ಇವರ ಘೋಷಣೆ ಜನರನ್ನು ಮಂಕುಬೂದಿ ಎರಚಲು ಹೊರತು ವಾಸ್ತವಾಗಿ ಅವರಿಗೆ ಮಹಿಳೆಯ ಸುರಕ್ಷಿತೆ ಬೇಕಿಲ್ಲ - ರಾಹುಲ್ ಗಾಂಧಿ.

ಮಧ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಜನರು ಆಶೀರ್ವದಿಸಲಿದ್ದಾರೆ
ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಒಂದು ಅಕ್ಷರವನ್ನೂ ಪ್ರಧಾನಿಗಳು ಹೇಳುವುದಿಲ್ಲ. ಮನ್ ಕೀ ಬಾತ್ ನಲ್ಲಿ ಮಹಿಳೆಯರ ಬಗ್ಗೆ ಉದ್ದುದ್ದ ಮಾತನಾಡುವ ಮೋದಿಜಿ ಸರಕಾರದ ನಿಜವಾದ ಘೋಷಣೆ ಏನಂದರೆ, ಬೇಟಿ ಪಡಾವೋ, ಬಿಜಿಪಿ ಎಂಎಲ್ಎ ಸೆ ಬೇಟಿ ಬಚಾವೋ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಜನರು ಆಶೀರ್ವದಿಸಲಿದ್ದಾರೆ ಎನ್ನುವ ಸಂಪೂರ್ಣ ಭರವಸೆ ನನಗಿದೆ ಎಂದು ರಾಹುಲ್ ಹೇಳಿದ್ದಾರೆ.

ಉದ್ಯಮಿಗಳನ್ನು ದೇಶ ಲೂಟಿ ಮಾಡಲು ಮೋದಿ ಅನುವು
ನರೇಂದ್ರ ಮೋದಿ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಲಕ್ಷ ಕೋಟಿ ರೂಪಾಯಿಯ ಹಗರಣವನ್ನು ನಡೆಸಿದೆ. ಭಾರತದ ಶ್ರೀಮಂತ ಉದ್ಯಮಿಗಳನ್ನು ದೇಶ ಲೂಟಿ ಮಾಡಲು ಮೋದಿ ಅನುವು ಮಾಡಿಕೊಟ್ಟಿದ್ದಾರೆ. ನಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ, ಮೊದಲು ಮಾಡುವ ಕೆಲಸ, ಮೋದಿ ಸರಕಾರದ ಭ್ರಷ್ಟಾಚಾರದ ಇಂಚಿಂಚು ಮಾಹಿತಿಯನ್ನು ಜನರ ಮುಂದಿಡಲಿದ್ದೇವೆ - ರಾಹುಲ್ ಗಾಂಧಿ.

ಕಮಲ್ ನಾಥ್ ಇದ್ದಾರೆ, ಸಿಂಧ್ಯಾ ಇದ್ದಾರೆ
ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಇದ್ದಾರೆ, ಸಿಂಧ್ಯಾ ಇದ್ದಾರೆ. ಮಧ್ಯಪ್ರದೇಶದ ಮೊದಲ ಆದ್ಯತೆ ರೈತರ ಸಮಸ್ಯೆಗೆ ಪರಿಹಾರ ಮತ್ತು ನಿರುದ್ಯೋಗ ನಿವಾರಣೆ. ನಮ್ಮ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದರೆ, ಈ ಎರಡು ವಿಚಾರಗಳನ್ನು ಮೊದಲ ಅದ್ಯತೆಯಿಂದ ತೆಗೆದುಕೊಳ್ಳುತ್ತೇವೆ. ಯುವಕರು ಹಾಕುವ ಟಿಶರ್ಟ್, ಚಪ್ಪಲಿಗಳನ್ನು ನೋಡಿ. ಎಲ್ಲದರಲ್ಲೂ ಮೇಡ್ ಇನ್ ಚೀನಾ ಎಂದಿರುತ್ತದೆ. ನಾವು ಅದನ್ನು ಮೇಡ್ ಇನ್ ಇಂಡಿಯಾ ಎಂದು ಮಾಡುತ್ತೇವೆ - ರಾಹುಲ್ ಗಾಂಧಿ.

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ
ಚೀನಾದಲ್ಲಿ ತಯಾರಾಗಿ ಭಾರತಕ್ಕೆ ಬರುವ ವಸ್ತುಗಳನ್ನು ನಮ್ಮ ಸರಕಾರ ಮಧ್ಯಪ್ರದೇಶದಲ್ಲಿ ಘಟಕ ಸ್ಥಾಪಿಸಿ ಇಲ್ಲೇ ಉತ್ಪಾದಿಸುತ್ತೇವೆ. ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಅಧಿಕಾರಕ್ಕೆ ಬಂದ, ನರೇಂದ್ರ ಮೋದಿ ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು ಲೂಟಿ ಹೊಡೆದಿದ್ದಾರೆಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications