ನಾನು ಸಾಯಲಿ ಬದುಕಲಿ ಮೋದಿಯನ್ನು ಕಿತ್ತೊಗೆಯಿರಿ: ಮಮತಾ
ನೋಟು ನಿಷೇಧದ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ವಿರುದ್ದ ಅಕ್ಷರಸಃ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ನಿಮ್ಮಂತ ಸರ್ವಾಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂದು ಅಬ್ಬರಿಸಿದ್ದಾರೆ.
ಕೊಲ್ಕತ್ತಾ, ನ 28: ನೋಟು ನಿಷೇಧದ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ವಿರುದ್ದ ಅಕ್ಷರಸಃ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ನಿಮ್ಮಂತ ಸರ್ವಾಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂದು ಅಬ್ಬರಿಸಿದ್ದಾರೆ.
ನಗರದಲ್ಲಿ ಸೋಮವಾರ (ನ 28) ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಮತಾ, ನಾನು ಸಾಯಲಿ ಅಥವಾ ಬದುಕಲಿ ಮೋದಿಯನ್ನು ಮಾತ್ರ ಭಾರತದ ರಾಜಕೀಯದಿಂದ ಕಿತ್ತೊಗೆಯಬೇಕು ಎಂದಿದ್ದಾರೆ. (ಕಪ್ಪುಹಣ ಹೆಚ್ಚಾಗಲು ಮಹಿಳೆಯರೇ ಕಾರಣ)
ನೋಟು ನಿಷೇಧದ ನಂತರ ನಿರಂತರ ಪ್ರತಿಭಟನೆ ನಡೆಸುತ್ತಿರುವ ಮಮತಾ, ಸೋಮವಾರದ ಸಭೆಯಲ್ಲಿ ತೀಕ್ಷ್ಣ ಪದ ಪ್ರಯೋಗಿಸಿ ಮೋದಿ ವಿರುದ್ದ ಹರಿಹಾಯ್ದಿದ್ದು, 'ಬನ್ನಿ ಮೋದಿಯನ್ನು ರಾಜಕೀಯದಿಂದ ಕಿತ್ತೊಗೆಯುವ ಪ್ರಮಾಣ ಮಾಡೋಣ' ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ 'ಆಕ್ರೋಶ್ ದಿವಸ್'ಸಭೆಯಲ್ಲಿ, ಕೇಂದ್ರ ಸರಕಾರದ ನೋಟು ಹಿಂಪಡೆತ ನಿರ್ಧಾರ ವಿರೋಧಿಸಿ ಮೋದಿ ಅವರ ನಿವಾಸದ ಮುಂದೆ ಪ್ರತಿಭಟಿಸುವ ಬೆದರಿಕೆಯನ್ನು ಮಮತಾ ಬ್ಯಾನರ್ಜಿ ಒಡ್ಡಿದ್ದಾರೆ.
ಸೋಮವಾರ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಪ್ರತಿಭಟನೆಯ ಸ್ಥಳವಾಗಿ ಮಾರ್ಪಟ್ಟಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಮಮತಾ ಭಾಷಣದ ಸ್ಯಾಂಪಲ್, ಮುಂದೆ ಓದಿ..
|
ಮಮತಾ ಬ್ಯಾನರ್ಜಿ
ಇಂದು ನಾವೆಲ್ಲಾ ಪ್ರಮಾಣ ಮಾಡೋಣ. ಮೋದಿಯಂತಹ ಸರ್ವಾಧಿಕಾರಿಯನ್ನು ಭಾರತದ ರಾಜಕೀಯ ವ್ಯವಸ್ಥೆಯಿಂದ ಕಿತ್ತೊಗೆಯೋಣ. ನಾನು ಸಾಯಲಿ ಅಥವಾ ಬದುಕಿರಲಿ ನಾವೆಲ್ಲಾ ಒಟ್ಟಾಗಿ ಈ ಕೆಲಸ ಮಾಡೋಣ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ - ಮಮತಾ ಬ್ಯಾನರ್ಜಿ.
ಆಕ್ರೋಶ್ ದಿವಸ್
ವಿಪಕ್ಷಗಳು ಕರೆನೀಡಿದ್ದ ಭಾರತ್ ಬಂದ್/ಆಕ್ರೋಶ ದಿವಸಕ್ಕೆ, ಬಂದ್/ ಹರತಾಳಕ್ಕೆ ಪ್ರಸಿದ್ದಿಯಾಗಿರುವ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹನ್ನೆರಡು ಗಂಟೆ ಬಂದ್ ವೇಳೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.
ತ್ರಿಪುರಾ, ಒರಿಸ್ಸಾ, ಮುಂಬೈ, ತ.ನಾಡು
ತ್ರಿಪುರಾದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಒರಿಸ್ಸಾದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಮುಂಜಾಗೃತ ಕ್ರಮವಾಗಿ ಮುಚ್ಚಲಾಗಿತ್ತು. ಮುಂಬೈನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಚೆನ್ನೈನಲ್ಲಿ ಡಿಎಂಕೆ ಮುಖಂಡ ಸ್ಟಾಲಿನ್ ನೇತೃತ್ವದಲ್ಲಿ ಕಾರ್ಯಕರ್ತರು ಮೋದಿ ವಿರುದ್ದ ಘೋಷಣೆ ಕೂಗಿದರು. ಮುಂಜಾಗೃತ ಕ್ರಮವಾಗಿ ಡಿಎಂಕೆ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಲಾಗಿತ್ತು.
ಪ.ಬಂಗಾಳ ಸಿಎಂ ಅಲ್ಟಿಮೇಟಂ
ಪ್ರಧಾನಿ ಮೋದಿ ಈ ಕೂಡಲೇ ಐನೂರು, ಸಾವಿರ ರೂಪಾಯಿ ನೋಟು ನಿಷೇಧವನ್ನು ಹಿಂದಕ್ಕೆ ಪಡೆಯಬೇಕು. ಬ್ಯಾಂಕ್ ನಲ್ಲಿ ದುಡ್ಡಿಲ್ಲ, ಜನರ ಜೇಬಿನಲ್ಲಿ ದುಡ್ಡಿಲ್ಲ, ಕಾರ್ಮಿಕರಿಗೆ ಊಟ ಸಿಗುತ್ತಿಲ್ಲ -ಮಮತಾ ಬ್ಯಾನರ್ಜಿ.
ನಾವು ಸುಮ್ಮನಿರುವುದಿಲ್ಲ
ಮೋದಿಯನ್ನು ಮೊಹಮ್ಮದ್ ಬಿನ್ ತುಘಲಕ್ ಗೆ ಹೋಲಿಸಿದ ಮಮತಾ, ಹಿಟ್ಲರ್ ಕೂಡಾ ಇಷ್ಟು ಸರ್ವಾಧಿಕಾರಿಯಾಗಿಲ್ಲ. ನಾನು ಮೋದಿಯವರ ಜಾಗದಲ್ಲಿದ್ದಿದ್ದರೆ ಇಂತಹ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ. ತಪ್ಪು ಮಾಡಿದ್ದರೆ, ಹಿಂದಕ್ಕೆ ಪಡೆಯುತ್ತಿದ್ದೆ - ಮಮತಾ ಬ್ಯಾನರ್ಜಿ.