ಬಿಜೆಪಿ, ನರೇಂದ್ರ ಮೋದಿ ವಿರುದ್ಧ ಮುನಿಸಿಕೊಂಡ ಶಿವಸೇನೆ?
ಮುಂಬೈ, ಜುಲೈ 23 : ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಬಳಿಕ ಮಿತ್ರಪಕ್ಷಗಳಲ್ಲಿ ಒಡಕಿನ ಸೂಚನೆ ಕಂಡುಬರುತ್ತಿದೆ. ಶಿವಸೇನೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
'ನಾನು ಸಾಮಾನ್ಯ ಜನರ ಕನಸುಗಳಿಗಾಗಿ ಹೋರಾಟ ಮಾಡುತ್ತೇನೆ. ನರೇಂದ್ರ ಮೋದಿ ಅವರ ಕನಸಿಗಾಗಿ ಅಲ್ಲ' ಎಂದು ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರದಲ್ಲಿನ ಪಕ್ಷದ ಕಾರ್ಯಕರ್ತರಿಗೆ '2019ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧವಾಗುವಂತೆ' ಕರೆ ನೀಡಿದ್ದರು. ಅಮಿತ್ ಶಾ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಸಾಮ್ನಾದಲ್ಲಿ ಈ ಹೇಳಿಕೆ ಪ್ರಕಟವಾಗಿದೆ.
'ನಮಗೆ ಕೇವಲ ಒಬ್ಬರು ಸ್ನೇಹಿತರು ಮಾತ್ರವಿಲ್ಲ. ನಾವು ಜನರ ಸ್ನೇಹಿತರು. ನಾವು ಬೇಟೆಯಾಡುತ್ತೇವೆ. ಬೇರೆಯವರ ಹೆಗಲಿನ ಮೇಲಿನ ಗನ್ನಿಂದ ಗುಂಡು ಹೊಡೆಯವು ಅಗತ್ಯವಿಲ್ಲ' ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.

ಬಿಜೆಪಿ, ಶಿವಸೇನೆ ನಡುವೆ ಮುನಿಸು
ಶಿವಸೇನೆ ಮತ್ತು ಬಿಜೆಪಿ ನಡುವಿನ ಮುನಿಸು ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಬಯಲಾಗಿದೆ. ಅವಿಶ್ವಾಸ ನಿರ್ಣಯದ ಹಿಂದಿನ ದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉದ್ಭವ ಠಾಕ್ರೆ ಅವರಿಗೆ ಕರೆ ಮಾಡಿದ್ದರು. ಶಿವಸೇನೆ ಎಲ್ಲಾ ಸಂಸದರು ಲೋಕಸಭೆಯಲ್ಲಿ ಹಾಜರಿರಬೇಕು, ಬಿಜೆಪಿ ಬೆಂಬಲಿಸಬೇಕು ಎಂದು ವಿಪ್ ಜಾರಿ ಮಾಡಿತ್ತು.
ಆದರೆ, ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಕೆಲವೇ ಗಂಟೆಗಳ ಮೊದಲು ಶೀವಸೇನೆ ತಟಸ್ಥವಾಗಿ ಉಳಿಯುವ ಬಗ್ಗೆ ನಿರ್ಧಾರ ಕೈಗೊಂಡಿತು. ಇದರಿಂದಾಗಿ ಬಿಜೆಪಿಗೆ ಇರುಸುಮುರುಸು ಉಂಟಾಯಿತು. ತಡರಾತ್ರಿ ನಡೆದ ಬೆಳವಣಿಗೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶಿವಸೇನೆಯ ನಡೆ ಕುತೂಹಲ
ಅವಿಶ್ವಾಸ ನಿರ್ಣಯದಿಂದ ದೂರ ಉಳಿದ ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದ ಸಂಪಾದಕೀಯದಲ್ಲಿ, 'ದೇಶವನ್ನು ಆಳುವವರು ಕಟುಕರು, ಅವರು ಪ್ರಾಣಿಗಳನ್ನು ಕಾಪಾಡುತ್ತಾರೆ. ಮುನುಷ್ಯರನ್ನು ಕೊಲ್ಲುತ್ತಾರೆ' ಎಂದು ಬರೆದಿತ್ತು.
ಅವಿಶ್ವಾಸ ನಿರ್ಣಯದ ಮಂಡನೆಯಾದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹಲವು ಟೀಕೆಗಳನ್ನು ಮಾಡಿದರು. ಸಾಮ್ನಾ ಪತ್ರಿಕೆಯಲ್ಲಿ ಇವುಗಳನ್ನು ಶ್ಲಾಘಿಸಲಾಯಿತು, ಮೋದಿ ಅವರನ್ನು ರಾಹುಲ್ ಅಪ್ಪಿಕೊಂಡಿದ್ದನ್ನು ಹೊಗಳಿತು.

ಮೈತ್ರಿ ಮುರಿಯಲಿದೆ ಬಿಜೆಪಿ?
ಶಿವಸೇನೆ ಜೊತೆಗಿನ ಸುಮಾರು 3 ದಶಕದ ಮೈತ್ರಿ ಮುರಿಯುವ ಕುರಿತು ಬಿಜೆಪಿ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಅಮಿತ್ ಶಾ ಮುಂದಿನ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ.
ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಶಿವಸೇನೆ ಮತ್ತು ಬಿಜೆಪಿ ಮಹಾರಾಷ್ಟ್ರದಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿವೆ ಎಂಬ ಅನುಮಾನವನ್ನು ಹುಟ್ಟುಹಾಕಿವೆ.

ಬಿಜೆಪಿಗೆ ಶೇ 51ರಷ್ಟು ಮತ
'ನಿಮ್ಮ ಬೂತ್ಗಳಲ್ಲಿ ಈಗಿನಿಂದಲೇ ನೀವು ಕೆಲಸ ಆರಂಭಿಸಿದರೆ ನಿಮ್ಮ ಬೂತ್ನಲ್ಲಿ ಬಿಜೆಪಿಗೆ ಶೇ 51ರಷ್ಟು ಮತ ಬರುತ್ತದೆ' ಎಂದು ಅಮಿತ್ ಶಾ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಮಾಡಿಕೊಂಡಿದ್ದವು. ಆದರೆ, ಕೆಲವು ತಿಂಗಳ ಬಳಿಕ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದವು.












Click it and Unblock the Notifications