ಯುವ ನಾಯಕರಿಗೆ ಮಣೆ ಹಾಕಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರಾ ರಾಹುಲ್?
ನವದೆಹಲಿ, ಡಿಸೆಂಬರ್ 13 : ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಯಾವ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಬೇಕೆಂದು ಕಾಂಗ್ರೆಸ್ ಕಚೇರಿಯಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಯಾರಾಗಬೇಕು ಎನ್ನುವುದಕ್ಕಿಂತ, ಯಾರಾದರೆ ರಾಜ್ಯಕ್ಕೆ ಹಿತ ಎನ್ನುವುದು ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿದೆ.
ರಾಜಕೀಯ ಲೆಕ್ಕಾಚಾರಗಳೇನು ಇರುತ್ತವೋ ಬಲ್ಲವರಾರು? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನದಲ್ಲೇನಿದೆ ಹೇಳುವವರು ಯಾರು? ಅಪಾರ ಅನುಭವವುಳ್ಳ ಮುತ್ಸದ್ದಿ ರಾಜಕಾರಣಿಯನ್ನು ಮುಖ್ಯಮಂತ್ರಿ ಗಾದಿಯ ಮೇಲೆ ಕೂಡಿಸಬೇಕೋ, ಜನಪ್ರಿಯತೆ ಆಧಾರದ ಮೇಲೆ ಯುವ ನಾಯಕರನ್ನು ಕೂಡಿಸಬೇಕೋ ಎಂಬ ದ್ವಂದ್ವದಲ್ಲಿ ರಾಹುಲ್ ಇದ್ದಂತೆ ಕಾಣಿಸುತ್ತಿದೆ.
3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
ಆದರೆ, ಒಂದು ಮಾತಂತೂ ಸತ್ಯ. ಪ್ರಜಾತಾಂತ್ರಿಕ ರೀತಿಯಲ್ಲಿ ಮುಖ್ಯಮಂತ್ರಿಯನ್ನು ಆರಿಸಲು ಹೊರಟಿರುವ ರಾಹುಲ್ ಗಾಂಧಿ ಅವರಿಗೆ, ತಮ್ಮ ಸುತ್ತ ಒಂದು ಒಂದು ಉತ್ತಮ ಯುವಪಡೆಯನ್ನೇ ಕಟ್ಟಿಕೊಂಡಿರುವ ರಾಹುಲ್ ಅವರಿಗೆ, ಇಡೀ ದೇಶಕ್ಕೇ ಉತ್ತಮ ಸಂದೇಶ ಸಾರುವ ಅತ್ಯುತ್ತಮ ಅವಕಾಶವಂತೂ ಕೂಡಿಬಂದಿದೆ.
ಕಮಲ್ ನಾಥ್ ವರ್ಸಸ್ ಜ್ಯೋತಿರಾಧಿತ್ಯ
ರಾಜಸ್ಥಾನದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಗದ್ದುಗೆಯ ರುಚಿ ಕಂಡಿರುವ ಅಶೋಕ್ ಗೆಹ್ಲೋಟ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ವಿಧಾನಸಭೆ ಚುನಾವಣೆಯಲ್ಲಿ ಮಿಂಚಿರುವ ಮತ್ತು ಗೆಲುವಿನ ನಿಜವಾದ ರೂವಾರಿಯಾಗಿರುವ 41 ವರ್ಷದ ಸಚಿನ್ ಪೈಲಟ್ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. ಹಾಗೆಯೆ, ಮಧ್ಯ ಪ್ರದೇಶದಲ್ಲಿ 71 ವರ್ಷದ ಕಮಲ್ ನಾಥ್ ಮತ್ತು ರಾಜವಂಶಸ್ಥ ಮತ್ತು ರಾಹುಲ್ ಯುವ ತಂಡದಲ್ಲಿ ಪ್ರಮುಖ ನಾಯಕರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಕಣದಲ್ಲಿದ್ದಾರೆ.
ಸಿಎಂ ಆಗಲು ಹೊರಟಿರುವ ಕಮಲ್ ನಾಥ್ ಮೇಲೆ ಏನಿದು ಗುರುತರ ಆರೋಪ?
ಜ್ಯೋತಿರಾಧಿತ್ಯರಿಗಾಗಿ ಹೋಮ ಹವನ
ಕಳೆದ ಚುನಾವಣೆಯಲ್ಲಿ ಪ್ರಚಾರಕ್ಕೆ ಬರದಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಈ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿದ್ದಾರೆ. ರಾಹುಲ್ ಗಾಂಧಿ ಅವರ ಜೊತೆಜೊತೆಯಾಗಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಜನರನ್ನು ಸೆಳೆದಿದ್ದಾರೆ. ಈಗ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳು ಭೋಪಾಲ್ ನಲ್ಲಿ ಹೋಮ ಹವನಗಳನ್ನು ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಟೀಕೆಯ ಸುರಿಮಳೆಯಾಗುತ್ತಿದೆ. ಹೋಮ ಹವನ ಮಾಡುವ ಬದಲು ರಾಹುಲ್ ಕಾಲು ಹಿಡಿದುಕೊಳ್ಳುವುದು ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಬೇರೆ ನಾಯಕರನ್ನು ಬೆಳೆಯಲು ಬಿಡುತ್ತಾರಾ?
ಜ್ಯೋತಿರಾಧಿತ್ಯ ಸಿಂಧಿಯಾ ಅವರ ವಿರುದ್ಧ ಯಾವುದೇ ಅಪರಾಧಗಳಲ್ಲಿ ಭಾಗಿಯಾದ ಆರೋಪಗಳಿಲ್ಲ. ಕಮಲ್ ನಾಥ್ ಅವರಿಗಿಂತ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಖಂಡಿತ ಉತ್ತಮ ಆಯ್ಕೆ ಆಗಿದ್ದಾರೆ. ಆದರೆ, ನೆಹರೂ ಮನೆತನ ಬೇರೆ ನಾಯಕರನ್ನು ಬೆಳೆಯಲು ಬಿಡುತ್ತದೆಯೆ? ರಾಹುಲ್ ಗಾಂಧಿಯವರೇ ಪಕ್ಷದಲ್ಲಿ ಅಸುರಕ್ಷಿತವಾಗಿದ್ದಾರೆ. ಒಬ್ಬ ರಾಜಮನೆತನದವರು ಒಬ್ಬರ ಆಳಿನಂತೆ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಭಿಮಾನಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳೊಂದಿಗೆ ರಾಹುಲ್ ಮಹತ್ವದ ಸಭೆ
ಈ ಅಭಿಮಾನಿಗಳು ಎಂಥ ಹುಚ್ಚರಿದ್ದಾರೆ?
ಈ ಅಭಿಮಾನಿಗಳು ಎಂಥ ಹುಚ್ಚರಿದ್ದಾರೆ? ಇವರಿಗೆ ಹುಚ್ಚು ನಾಯಿಯೇನಾದರೂ ಕಚ್ಚಿದೆಯಾ? ಇಂಥ ಹೋಮ ಹವನಗಳನ್ನು ಮಾಡುವ ಬದಲು ರಾಹುಲ್ ಗಾಂಧಿ ಅವರ ಕಾಲು ಹಿಡಿದುಕೊಂಡರೆ ಈ ಅಭಿಮಾನಿಗಳಿಗೆ ಸ್ವಲ್ಪ ಲಾಭವಾದರೂ ಆಗಬಹುದು. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ, ಈ ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಕೇಳುವುದೆಲ್ಲ ಬರೀ ನಾಟಕ. ಅಲ್ಲಿ ರಾಹುಲ್ ಗಾಂಧಿ ಏನು ನಿರ್ಧರಿಸುತ್ತಾರೋ ಅದರಂತೆಯೇ ಆಗುತ್ತದೆ. ಈ ಹೋಮ ಹವನಗಳಿಂದ ಏನೂ ಪ್ರಯೋಜನವಿಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ರಾಜಸ್ಥಾನ ಸಿಎಂ ಗೆಹ್ಲೋಟ್: ಅಧಿಕೃತ ಘೋಷಣೆಯೊಂದೇ ಬಾಕಿ?
ಯುವಜನತೆಗೆ ಕೆಲಸ ಸಿಗುತ್ತಿಲ್ಲ ಎನ್ನುವ ರಾಹುಲ್
ದೇಶದಲ್ಲಿ ಯುವ ಜನತೆಗೆ ಕೆಲಸ ಸಿಗುತ್ತಿಲ್ಲ ಎಂದು ನರೇಂದ್ರ ಮೋದಿ ಸರಕಾರದ ವಿರುದ್ಧ ಗುಲ್ಲೆಬ್ಬಿಸಿದ್ದ ರಾಹುಲ್ ಗಾಂಧಿ ಅವರು ಇಬ್ಬರು ಯುವ ನಾಯಕರಿಗೆ ರಾಜ್ಯವಾಳುವ ಕೆಲಸ ಕೊಡಬಹುದಲ್ವಾ? ಇಂಥದೊಂದು ರಿಸ್ಕ್ ತೆಗೆದುಕೊಳ್ಳಲು ರಾಹುಲ್ ಗಾಂಧಿ ಸಿದ್ಧರಿದ್ದಾರಾ? ಯುವ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿ ಮಾದರಿ ನಾಯಕರಾಗುತ್ತಾರಾ? ಅಥವಾ ಕಾಂಗ್ರೆಸ್ಸಿನ ಹಳೆಯ ವಿಚಾರಧಾರೆಗೇ ಜೋತುಬೀಳುತ್ತಾರಾ? ಲೋಕಸಭೆ ಚುನಾವಣೆಗೂ ಮುನ್ನ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಅವರಿಗೆ ಮುಖ್ಯಮಂತ್ರಿ ಜವಾಬ್ದಾರಿ ಹೊರಿಸಿದರೆ, ಇಡೀ ದೇಶದ ಜನತೆಗೆ ತಮ್ಮ ವಿಚಾರಧಾರೆ ಎತ್ತ ಸಾಗುತ್ತಿದೆ ಎಂದು ಹೇಳಲು ಅನುವಾಗುತ್ತದೆ.