ರಾಹುಲ್ ಪ್ರಧಾನಿಯಾಗುವುದು ಮೈತ್ರಿಕೂಟದ 'ಕೈ'ಯಲ್ಲಿದೆ!
ನವದೆಹಲಿ, ಅಕ್ಟೋಬರ್ 05: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಮುಂದಿನ ಮಾತನಾಡುತ್ತಾ, ಪ್ರಧಾನಿಯಾಗುವ ಅವಕಾಶ ಸಿಕ್ಕರೆ, ಯಾಕೆ ತಪ್ಪಿಸಿಕೊಳ್ಳಲಿ ಎಂಬರ್ಥದಲ್ಲಿ ಹೇಳಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗ ಬೇರೆಯದ್ದೇ ರಾಗ ಹಾಡುತ್ತಿದ್ದಾರೆ. ನಾನು ಪ್ರಧಾನಿಯಾಗುವುದು ಬಿಡುವುದು ಮೈತ್ರಿಕೂಟದ ಕೈಲಿದೆ. ಮಿತ್ರಪಕ್ಷಗಳು ಬಯಸಿದರೆ ನಾನೇ ಪ್ರಧಾನಿ ಅಭ್ಯರ್ಥಿ ಎಂದಿದ್ದಾರೆ.
ಎನ್ಡಿಎಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಯಾರು ಪ್ರತಿಸ್ಪರ್ಧಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ, ಬಿಎಸ್ಪಿಯ ಮಾಯಾವತಿ, ಎಸ್ಪಿಯ ಮುಲಾಯಂ, ತೃಣಮೂಲದ ಮಮತಾ ಹೀಗೆ ಎಲ್ಲರೂ ಸಿದ್ಧರಾಗುತ್ತಿದ್ದಾರೆ.
ಆದರೆ, ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿ ನೇತೃತ್ವ ಕೂಟವನ್ನು ಸೋಲಿಸುವುದು ನಮ್ಮ ಗುರಿ ಎಂದು ರಾಹುಲ್ ಗಾಂಧಿ ಅವರು 16ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮೀಟ್ ನಲ್ಲಿ ಮಾತನಾಡುತ್ತಾ ಹೇಳಿದರು.

ಪ್ರಧಾನಿ ಯಾರಾಗಬೇಕು ಎಂಬುದನ್ನು ಎನ್ಡಿಎ ಸೋಲಿನ ಬಳಿಕ ನಿರ್ಧರಿಸಲಾಗುತ್ತದೆ. ಮಿತ್ರಪಕ್ಷಗಳು ಬಯಸಿದರೆ ನಾನೇ ಪ್ರಧಾನಿ ಅಭ್ಯರ್ಥಿಯಾಗುವೆ ಎಂದರು.
ವಿಪಕ್ಷಗಳ ಮಹಾಮೈತ್ರಿಯಾಗಿ ಆದಷ್ಟು ಬೇಗ ಯುಪಿಎ 3 ರೂಪುಗೊಳ್ಳುವುದು ಮುಖ್ಯವಾಗಿದೆ. ರಾಜ್ಯಗಳ ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಯ ಸಂದರ್ಭದ ಮೈತ್ರಿಗೂ ವ್ಯತ್ಯಾಸವಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಹಾಗೂ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ನೀಡುವ ವಿಶ್ವಾಸವಿದೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
2014ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹಾಗೂ ನಂತರ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ಸಿಗೆ ಮಿತ್ರಪಕ್ಷಗಳ ಜತೆ ಹೊಂದಾಣಿಕೆ ಅನಿವಾರ್ಯವಾಗಿದೆ. ಇದೇ ರೀತಿ ಬಿಜೆಪಿ ಕೂಡಾ ಕೆಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೇಡಿಕೆಗಳಿಗೆ ಮಣಿಯಲೇ ಬೇಕಿದೆ.












Click it and Unblock the Notifications