ಆಕ್ರಮಣಕಾರಿ ಆಟ ಬಿಟ್ಟು, ರಕ್ಷಣಾತ್ಮಕ ಆಟಕ್ಕೆ ಏಕೆ ರಾಹುಲ್ ಇಳಿದಿದ್ದಾರೆ?

ಬೆಂಗಳೂರು, ಆಗಸ್ಟ್ 04 : "ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ನಾನು ಪ್ರಧಾನಿಯಾಗಲು ಸಿದ್ಧನಿದ್ದೇನೆ" ಎಂದು ಕರ್ನಾಟಕದ ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ಘಂಟಾಘೋಷವಾಗಿ ಸಾರಿದ್ದ ರಾಹುಲ್ ಗಾಂಧಿಯವರು ಏಕೆ ಹಿಂದೇಟು ಹಾಕುತ್ತಿದ್ದಾರೆ?

ಇದು ಮಾಧ್ಯಮದವರನ್ನು ಮಾತ್ರ ಕಾಡುತ್ತಿರುವ ಪ್ರಶ್ನೆಯಲ್ಲ, ಇದು ಇತ್ತೀಚಿನ ತಿಂಗಳುಗಳಲ್ಲಿ ಹೊಸಬಗೆಯ ರಾಹುಲ್ ಗಾಂಧಿಯವರನ್ನು ನೋಡಿರುವ ಅಸಂಖ್ಯಾತ ಅಭಿಮಾನಿಗಳನ್ನು ಮತ್ತು ಅವರ ಪಕ್ಷದ ನಾಯಕರನ್ನೇ ಕಾಡುತ್ತಿರುವ ಉತ್ತರ ಸಿಗದ ಪ್ರಶ್ನೆ.

ಏಕೆಂದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ (2019) ಭಾರತೀಯ ಜನತಾ ಪಕ್ಷ ಧೂಳಿಪಟವಾಗಲಿದೆ, ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಅವರ ಪಕ್ಷದ ಸೋಷಿಯಲ್ ಮೀಡಿಯಾದ ಬೆನ್ನೆಲುಬುಗಳೆಲ್ಲ ಡಂಗುರ ಸಾರಿದ್ದೇ ಸಾರಿದ್ದು.

ಅವರೆಲ್ಲರಿಗೆ ನಿರಾಶೆ ಮೂಡಿಸುವಂತೆ, ರಾಹುಲ್ ಗಾಂಧಿ ಒಂದು ದಿನ ಇದ್ದಕ್ಕಿದ್ದಂತೆ, "ಸಂಯುಕ್ತ ರಂಗದ ನಾಯಕ ಅಥವಾ ನಾಯಕಿ ಯಾರೇ ಪ್ರಧಾನಿಯಾದರೂ ನನಗೇನೂ ಅಭ್ಯಂತರವಿಲ್ಲ" ಎಂದು ಹೇಳಿ ದಂಗುಬಡಿಸಿದ್ದಾರೆ ಮತ್ತು ಭಾರತದ ಭವಿತವ್ಯದ ನಾಯಕ ಎಂದೇ ಪರಿಗಣಿಸಲಾಗಿರುವ ರಾಹುಲ್ ಪ್ರಶ್ನೆಯಾಗಿಯೇ ಉಳಿಸಿದ್ದಾರೆ.

ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸರಿಸಾಟಿಯಲ್ಲದಿದ್ದರೂ, ಅವರಿಗೆ ತಿರುಗೇಟು ನೀಡಬಲ್ಲ ಏಕೈಕ ನಾಯಕ ಎಂದು ಗುರುತಿಸಲಾಗಿದ್ದೇ ನಲವತ್ತೆಂಟರ ಹರೆಯದ ರಾಹುಲ್ ಗಾಂಧಿ ಅವರನ್ನು. ಕರ್ನಾಟಕ ಚುನಾವಣೆ ಮುಗಿಯುವವರೆಗೂ ಅವರು ಕೂಡ ಹಾಗೇ ಅಂದುಕೊಂಡಿದ್ದರು.

ಬೌಂಡರಿಯೂ ಇಲ್ಲ, ಸಿಕ್ಸರ್ ಗಳೂ ಸಿಡಿಯುತ್ತಿಲ್ಲ

ಬೌಂಡರಿಯೂ ಇಲ್ಲ, ಸಿಕ್ಸರ್ ಗಳೂ ಸಿಡಿಯುತ್ತಿಲ್ಲ

ಕರ್ನಾಟಕ ಚುನಾವಣೆ ಮುಗಿದು ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಘಡ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ, ಇಷ್ಟು ದಿನಗಳ ಕಾಲ ಆಕ್ರಮಣಕಾರಿ ಆಟವಾಡುತ್ತಿದ್ದ ರಾಹುಲ್ ಗಾಂಧಿ ಅವರು ಇದ್ದಕ್ಕಿದ್ದಂತೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದಂತೆ ಕಂಡುಬರುತ್ತಿದ್ದಾರೆ. ರಾಹುಲ್ ಬ್ಯಾಟಿನಿಂದ ಬೌಂಡಿರಿಗಳೂ ಸಿಡಿಯುತ್ತಿಲ್ಲ, ಸಿಕ್ಸರ್ ಗಳೂ ಸಿಡಿಯುತ್ತಿಲ್ಲ, ಔಟಾಗುತ್ತಲೂ ಇಲ್ಲ! ಕೆಲಬಾರಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಇರುವುದೇ ಸುರಕ್ಷಿತ ಎಂಬಂತೆ ರಾಹುಲ್ ಆಟವಾಡುತ್ತಿದ್ದಾರೆ.

ಲೋಕಸಭೆಯಲ್ಲಿ ಮಾಡಿದ ಭಾಷಣವೇ ಸಾಕ್ಷಿ

ಲೋಕಸಭೆಯಲ್ಲಿ ಮಾಡಿದ ಭಾಷಣವೇ ಸಾಕ್ಷಿ

ರಾಹುಲ್ ಗಾಂಧಿ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಕಾಣಿಸುತ್ತಿದೆಯೆ? ಈ ಪ್ರಶ್ನೆಗೆ ಉತ್ತರ ಸಿಗಲಾರದು. ಏಕೆಂದರೆ, ರಾಫೇಲ್ ಹಗರಣ, ನೀರವ್ ಮೋದಿ ಪಲಾಯನ, ಮೆಹುಲ್ ಚೋಕ್ಸಿ ವಂಚನೆ ಪ್ರಕರಣಗಳನ್ನು ಇಟ್ಟುಕೊಂಡು ನರೇಂದ್ರ ಮೋದಿ ಸರಕಾರವನ್ನು ಸದೆಬಡಿಯಲು ಮತ್ತು ಜನರಲ್ಲಿ ಮೋದಿ ಸರಕಾರ ಬಗ್ಗೆ ಜನರಲ್ಲಿ ಇರುವ ದೃಷ್ಟಿಕೋನವನ್ನು ಬದಲಾಯಿಸಲು ಅವರು ಯತ್ನಿಸುತ್ತಲೇ ಇದ್ದಾರೆ. ಲೋಕಸಭೆಯಲ್ಲಿ ಅವರು ಇತ್ತೀಚೆಗೆ ಮಾಡಿದ ನಲವತ್ತೈದು ನಿಮಿಷಗಳ ಭಾಷಣದಲ್ಲಿ ಆಕರ್ಷಕ ಕವರ್ ಡ್ರೈವ್, ಸ್ಕ್ವೇರ್ ಕಟ್ಗಳನ್ನು ಬಾರಿಸಿದ್ದರು. ಆದರೆ, ಅವರು ಕಡೆಗೆ ಕಣ್ಣು ಹೊಡೆದು ನೋಬಾಲ್ ನಲ್ಲೂ ರನೌಟ್ ಆದರು.

ಏಕಾಂಗಿಯಾಗಿ ಗೆಲುವು ಸಾಧಿಸುವುದು ಅಸಾಧ್ಯ

ಏಕಾಂಗಿಯಾಗಿ ಗೆಲುವು ಸಾಧಿಸುವುದು ಅಸಾಧ್ಯ

ಆದರೆ, ಯಾವಾಗ ಇತರ ಪಕ್ಷಗಳ ಬೆಂಬಲವಿಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಾಗಲಿ, ರಾಜಸ್ತಾನದಲ್ಲಾಗಲಿ, ಮುಂದೆ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಾಗಲಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂಬುದು ಅರಿವಾಯಿತೋ, ಪ್ರಧಾನಿ ಹುದ್ದೆಗೆ ಸ್ಪರ್ಧೆ ಮತ್ತು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಡಿಫೆನ್ಸಿವ್ ಆಗಿ ಆಡಲು ಆರಂಭಿಸಿದರು. ಇದಕ್ಕೆಲ್ಲ ಕಾರಣ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಉರಿಉರಿ ರಾಜಕಾರಣಿ ಕುಮಾರಿ ಮಾಯಾವತಿ ಅವರು ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಮಾಯಾವತಿ ಎಸೆಯುತ್ತಿರುವ ಮೈತ್ರಿಯ ಬೌನ್ಸರ್ ಗಳಿಗೆ ತಗ್ಗಿಬಗ್ಗಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ದೌರ್ಬಲ್ಯ ಅರಿತಿರುವ ಮಾಯಾವತಿ

ಕಾಂಗ್ರೆಸ್ ದೌರ್ಬಲ್ಯ ಅರಿತಿರುವ ಮಾಯಾವತಿ

ರಾಹುಲ್ ಗಾಂಧಿಯವರನ್ನು ಹೊರತುಪಡಿಸಿ ನೋಡಿದರೆ ಸಂಯುಕ್ತ ರಂಗದಲ್ಲಿ ಪ್ರಧಾನಿ ಹುದ್ದೆಗೆ ಹಲವರ ಹೆಸರುಗಳು ಪ್ರಸ್ತಾಪವಾಗುತ್ತಿವೆಯಾದರೂ, ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಕುಮಾರಿ ಮಾಯಾವತಿ ಅವರದು. ಅವರು ಕೂಡ ರಾಷ್ಟ್ರಮಟ್ಟದಲ್ಲಿ ರಾಜಕೀಯ ಚದುರಂಗದಾಟದಲ್ಲಿ ರಾಣಿಯ ಸ್ಥಾನದಲ್ಲಿ ಕುಳಿತಿದ್ದಾರೆ. ಕಾಂಗ್ರೆಸ್ ನ ದೌರ್ಬಲ್ಯವನ್ನು ಅರಿತಿರುವ ಅವರು ಕಾಂಗ್ರೆಸ್ ನಾಯಕರಿಗೆ ಮುನ್ನುಗ್ಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುತ್ತಿಲ್ಲ. ಮಾಯಾವತಿ ಸಾಂಗತ್ಯ ಇದ್ದರೂ ಕಷ್ಟ ಬಿಟ್ಟರೂ ಕಷ್ಟ ಎನ್ನುವಂತಾಗಿದೆ ಕಾಂಗ್ರೆಸ್ಸಿಗೆ.

ಬೇರೆ ಲೆಕ್ಕಾಚಾರದಲ್ಲಿ ಮುಳುಗಿರುವ ಗೌಡರು

ಬೇರೆ ಲೆಕ್ಕಾಚಾರದಲ್ಲಿ ಮುಳುಗಿರುವ ಗೌಡರು

ಈ ಎಲ್ಲ ಬೆಳವಣಿಗೆಗಳನ್ನು ದೂರದಿಂದಲೇ ಗಮನಿಸುತ್ತಿರುವ ಹಿರಿಯ ನಾಯಕ, ಮಾಜಿ ಪ್ರಧಾನಿ ದೇವೇಗೌಡರು ಬೇರೆಯದೇ ಆದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕರ್ನಾಟಕದಲ್ಲಿ ಸದ್ಯಕ್ಕೆ ತಮ್ಮದೇ ಆಟವಾಡುತ್ತಿರುವ ಅವರು, ರಾಷ್ಟ್ರಮಟ್ಟದಲ್ಲಿಯೂ ಪ್ರಧಾನಿ ಆಯ್ಕೆ ವಿಷಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ ಅಚ್ಚರಿಯಿಲ್ಲ. ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದು ಹೇಳಿರುವ ಅವರು, ಸಂಯುಕ್ತ ರಂಗದ ಎಲ್ಲ ನಾಯಕರು ಕಕ್ಕಾಬಿಕ್ಕಿಯಾಗುವಂಥ ಲೆಕ್ಕಾಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ಅದೆಲ್ಲ ಹೊರಬೀಳಲಿದೆ. ಅಂತಿಮವಾಗಿ ಆಯ್ಕೆಯ ವಿಷಯ ಬಂದಾಗ, ನಾನೂ ಬೇಡ, ನೀವೂ ಬೇಡ ಎಂದು ಮತ್ತೊಬ್ಬರನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.

ಇದರಿಂದ ಬಿಜೆಪಿಗೆ ಅಡ್ವಾಂಟೇಜ್

ಇದರಿಂದ ಬಿಜೆಪಿಗೆ ಅಡ್ವಾಂಟೇಜ್

ಸಂಯುಕ್ತ ರಂಗದಲ್ಲಿ ರಾಹುಲ್ ಗಾಂಧಿಯವರು ಸರ್ವಮಾನ್ಯ ನಾಯಕರಲ್ಲ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ, ಭಾರತದ ರಾಜಕೀಯದಲ್ಲಿ ಭವ್ಯ ಇತಿಹಾಸ ಇರುವ ಅತೀದೊಡ್ಡ ಪಕ್ಷದ ರಾಷ್ಟ್ರ ನಾಯಕರು, ಪ್ರಾದೇಶಿಕ ಪಕ್ಷಗಳ 'ಬ್ಲಾಕ್ ಮೇಲ್' ತಂತ್ರಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ಅಲ್ಲದೆ, ಇಂಥ ಬೆಳವಣಿಗೆ ಸರ್ವಸನ್ನದ್ಧವಾಗುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಅಡ್ವಾಂಟೇಜ್ ಸ್ಥಿತಿಯಲ್ಲಿ ಇಡಲಿದೆ. ಇದು ರಾಹುಲ್ ಅವರಿಗೆ ತಿಳಿದಿರದ ಸಂಗತಿಯೇನೂ ಅಲ್ಲ. ಸದ್ಯಕ್ಕೆ ಅವರು ವಿರೋಧಿಗಳ ಎಲ್ಲ ಆಟಗಳ ಅಧ್ಯಯನದಲ್ಲಿ ತೊಡಗಿದ್ದಾರೆ.

ರಾಹುಲ್ ಅವರೇ ಸಂಯುಕ್ತ ರಂಗದ ಚುಕ್ಕಾಣಿ ಹಿಡಿಯಬೇಕು

ರಾಹುಲ್ ಅವರೇ ಸಂಯುಕ್ತ ರಂಗದ ಚುಕ್ಕಾಣಿ ಹಿಡಿಯಬೇಕು

ಬಿಜೆಪಿ ಆಡಳಿತ ನಡೆಸುತ್ತಿದೆಯಾದರೂ, ಅದಕ್ಕೆ ಕೂಡ ಅಂಗಪಕ್ಷಗಳ ಮೈತ್ರಿ ಬೇಕೇಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡ ಇದಕ್ಕೆ ಹೊರತಲ್ಲ. ಹೀಗಾಗಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆಯನ್ನೂ ಮಾಡುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ ಅದು ಧೂಳಿಪಟವಾಗುವುದರಲ್ಲಿ ಸಂಶಯವೂ ಇಲ್ಲ. ಪರಿಸ್ಥಿತಿ ಹೀಗಿರುವಾಗ, ಕಂಡಿಷನ್ ಗಳನ್ನು ಹಾಕುತ್ತಿರುವ ಇತರ ಪ್ರಾದೇಶಿಕ ಪಕ್ಷಗಳಿಗಿಂತ ರಾಹುಲ್ ಗಾಂಧಿಯವರೇ ಸಂಯುಕ್ತ ರಂಗದ ಚುಕ್ಕಾಣಿ ಹಿಡಿದು, ನಾನೇ ಪ್ರಧಾನಿ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಹೇಳಬೇಕು. ಆಗ ದೇಶದ ಜನರೇ ಭಪ್ಪರೆ ಅನ್ನುತ್ತಾರೆ. ಅಲ್ಲದೆ, ರಾಹುಲ್ ಗಾಂಧಿಯವರ ನಾಯಕತ್ವವನ್ನು ಒರೆಗೆ ಹಚ್ಚಲು ಲೋಕಸಭೆ ಚುನಾವಣೆ ಅತ್ಯದ್ಭುತ ಅವಕಾಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+