ರಸ್ತೆ ಸಾರಿಗೆ ಸುರಕ್ಷತಾ ಮಸೂದೆ 2014 : ಏನು, ಏಕೆ?
ನವದೆಹಲಿ ಏ. 28 : ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2014'ಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏ.30ರ ಗುರುವಾರ ರಾಷ್ಟ್ರವ್ಯಾಪಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿವೆ.
ಬಂದ್ ಗೆ ಸಾರ್ವಜನಿಕ ಸಾರಿಗೆ ನೌಕರರು, ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು ಮತ್ತು ಮಾಲೀಕರು, ಲಾರಿ ಮತ್ತು ಟ್ರಕ್ ಮಾಲೀಕರು, ಸ್ಪೇರ್ ಪಾರ್ಟ್ ಶಾಪ್ ಮಾಲೀಕರು ಸೇರಿದಂತೆ ಸಾರಿಗೆಗೆ ಸಂಬಂಧಿಸಿದ ಅನೇಕರು ಬೆಂಬಲ ಸೂಚಿಸಿದ್ದಾರೆ.

ಆಲ್ ಇಂಡಿಯಾ ರೋಡ್ ಟ್ರಾನ್ಸಪೋರ್ಟ್ ವರ್ಕರ್ಸ್ ಯುನಿಯನ್ ಗೆ ಸಿಐಟಿಯು, ಎಐಟಿಯುಸಿ, ಐಎನ್ ಟಿಯುಸಿ, ಬಿಎಂಎಸ್, ಎಚ್ ಎಂಎಎಸ್, ಎಐಸಿಸಿಟಿಯು ಮತ್ತು ತಮಿಳು ನಾಡು, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಾಂಡ್ ನ ರಸ್ತೆ ಸಾರಿಗೆಗೆ ಸಂಬಂಧಿಸಿದ ಸ್ವತಂತ್ರ ಸಂಸ್ಥೆಗಳು ಒಳಪಡುತ್ತವೆ. ಆಟೋ ಯುನಿಯನ್ ಗಳು ಬೆಂಗಳೂರು, ಕೋಲ್ಕತ್ತಾ, ಮುಂಬೈ ಸೇರಿದಂತೆ ಅನೇಕ ಮಹಾ ನಗರದಲ್ಲಿ ಬೆಂಬಲ ಸೂಚಿಸಿವೆ.[ಏ.30ರ ಸಾರಿಗೆ ಮುಷ್ಕರಕ್ಕೆ ಆಟೋ ಚಾಲಕರ ಬೆಂಬಲ]
ಹಾಗಾದರೆ ಮಸೂದೆಯಲ್ಲಿ ಏನಿದೆ? ಮಸೂದೆ ಅಂಗೀಕಾರವಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ನಿಜಕ್ಕೂ ಇದನ್ನು ವಿರೋಧಿಸಲು ಕಾರಣಗಳಿವೆಯೇ? ಎಂಬುದರ ಮೇಲೆ ಒಂದು ನೋಟ ಇಲ್ಲಿದೆ...
'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2014' ಬಗ್ಗೆ ಒಂದಿಷ್ಟು
* ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ 'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2014' ನ್ನು ಜಾರಿಗೆ ತರಲು ಯೋಜಿಸಿದೆ.
* ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಮರಣದ ನಂತರ ಈ ಬಿಲ್ ಜಾರಿಗೆ ಕೇಂದ್ರ ಮುಂದಾಗಿತ್ತು.
* ಮುಂಡೆ 2014ರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.
* ಸಂಸತ್ತಿನ ಸ್ಟಾಂಡಿಂಗ್ ಕಮೀಟಿ ಇದೆ ಬಗೆಯ ಬಿಲ್ ನ್ನು 2012 ರಲ್ಲಿ ತಿರಸ್ಕರಿಸಿತ್ತು.
* ಈ ಬಿಲ್ ರಸ್ತೆ ಸುರಕ್ಷತೆ ಮತ್ತು ವಾಹನ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುತ್ತದೆ.
* ವಾಹನಗಳು ಹೊಂದಿರಬೇಕಾದ ಕನಿಷ್ಠ ಸುರಕ್ಷತಾ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಅಧಿಕಾರವನ್ನು ಸಾರಿಗೆ ಇಲಾಖೆಗೆ ನೀಡುತ್ತದೆ.
* ಆಡಳಿತ ಮಂಡಳಿ ದೇಶದೆಲ್ಲೆಡೆ ಏಕರೂಪದ ವ್ಯವಸ್ಥೆ ಪಾಲಿಸಲು ಸಾಧ್ಯ ಮಾಡುತ್ತದೆ.
* ಹೊಸ ವ್ಯವಸ್ಥೆ ಜಾರಿಯಾದರೆ ಸಂಪೂರ್ಣ ಮಾಹಿತಿ ಒಂದೆಡೆ ಲಭ್ಯವಾಗುತ್ತದೆ. ಅಂದರೆ ವಾಹನ ನೋಂದಣಿ, ಚಾಲನಾ ಪರವಾನಗಿ, ವಿಮೆ, ದಂಡ ತುಂಬಿದ ಲೆಕ್ಕ, ಅಪಘಾತ ಸೇರಿದಂತೆ ಸಮಗ್ರ ಮಾಹಿತಿ ಒಂದೆಡೆ ಲಭ್ಯವಾಗುತ್ತದೆ.
* ನಕಲಿ ಚಾಲನಾ ಪರವಾನಗಿ, ಸಮಯ ಮೀರಿದ ದಾಖಲಾತಿಗಳಿಗೆ ಈ ಕಾನೂನು ಅಂತ್ಯ ಹಾಡುತ್ತದೆ.
* ವ್ಯಕ್ತಿ ಕೇವಲ ಒಂದೇ ಒಂದು ಚಾಲನಾ ಪರವಾನಗಿ ಹೊಂದಿರುವಂತೆ ನೋಡಿಕೊಳ್ಳುವುದು.
* ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ಪ್ರತಿ ಅಂಶಗಳು ದಾಖಲಾಗುತ್ತಿರುತ್ತವೆ.
* ದಂಡ ಕಟ್ಟಿದ್ದರೆ ಮೂರು ವರ್ಷಗಳ ಕಾಲ ದಾಖಲಾತಿ ಇರುವುದು. ಅಲ್ಲದೇ ವ್ಯಕ್ತಿಯ ಚಾಲನಾ ಪರವಾನಗಿ ಸಂಖ್ಯೆಯ ಆಧಾರದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
* 12 ಅಂಶಗಳ ಆಧಾರದಲ್ಲಿ ಚಾಲನಾ ಪರವಾನಗಿಯನ್ನು ರದ್ದು ಮಾಡಬಹುದು.
* ಕಾನೂನು ಉಲ್ಲಂಘನೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಬಹುದು. ಇಲ್ಲವೇ ಜೈಲು ಶಿಕ್ಷೆಗೂ ಗುರಿಪಡಿಸಬಹುದು.
ಇಷ್ಟಕ್ಕೂ ಬಸ್ ಮತ್ತು ಆಟೋ ಮಾಲೀಕರ ವಿರೋಧ ಯಾಕೆ?
* ಬಿಲ್ ಪಾಸ್ ಆದರೆ ಸಾವಿರಾರು ಚಾಲಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಮೂಡಿದೆ. [ಯಾಕೆಂದರೆ ಅರ್ಧ ಜನರ ಹತ್ತಿರ ಸರಿಯಾದ ಲೈಸನ್ಸ್ ಇಲ್ಲ, ಕೆಲವೊಂದು ಪ್ರಕರಣಗಳು ನ್ಯಾಯಾಲಯದಲ್ಲಿವೆ. 15 ವರ್ಷಕ್ಕೂ ಹಳೆಯದಾದ ಗಾಡಿಗಳನ್ನು ಓಡುಸುತ್ತಿದ್ದಾರೆ. ಹೊಗೆ ಉಗುಳುವ ಪ್ರಮಾಣ ಜಾಸ್ತಿಯಾಗಿದೆ]
* ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಕೆಲವೊಂದು ಟ್ರಾನ್ಸ್ ಪೋರ್ಟ್ ಸಂಸ್ಥೆಗಳು ಬಾಗಿಲು ಹಾಕಬೇಕಾಗುತ್ತದೆ.
* ಈಗ ಸಿಗುತ್ತಿರುವ ಅನೇಕ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಂಭವವಿದೆ.
* ಚಾಲನೆ ಪರವಾನಗಿ, ವಿಮೆ, ಫಿಟ್ನೆಸ್ ಪ್ರಮಾಣ ಪತ್ರ ಸೇರಿದಂತೆ ವಿವಿಧ ಕಾರ್ಯಗಳು ಖಾಸಗಿಯವರ ಪಾಲಾಗುವ ಅಪಾಯವಿದೆ.
* ಸಾರಿಗೆ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ.
* ಕೇಂದ್ರ ಸರ್ಕಾರ ಸಾರಿಗೆ ಸಂಸ್ಥೆಗಳ ಮೇಲೆ ಬಿಗಿಯಾದ ನಿಯಂತ್ರಣ ಸಾಧಿಸಲು ಹೊರಟಿದೆ ಎಂಬ ಆರೋಪ.
* ಸರ್ಕಾರಿ ಸಾರಿಗೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಇಂಥ ಕಾನೂನು ಜಾರಿ ಮಾಡಲು ಮುಂದಾಗಿದೆ ಎಂಬ ಗಂಭೀರ ಆರೋಪವೂ ಇದೆ.












Click it and Unblock the Notifications