ಉಗ್ರರ ಪೈಶಾಚಿಕ ಕೃತ್ಯಕ್ಕೆ ಭಾರತದ ಪ್ರತಿಕಾರ ಯಾವಾಗ?
ಬೆಂಗಳೂರು, ಏಪ್ರಿಲ್ 23: ಪ್ರವಾಸಿಗರ ಸ್ವರ್ಗ, ಭಾರತಾಂಭೆಯ ಶಿರ ಭಾಗವಾದ ಕಾಶ್ಮೀರದಲ್ಲಿ ಯಾರೂ ನಿರೀಕ್ಷಿಸದ ನರಮೇಧವೊಂದು ನಡೆದು ಹೋಗಿದೆ. ದೂರದೂರಗಳಿಂದ ನೂರಾರು ಕನಸುಗಳನ್ನು ಹೊತ್ತು ಬಂದವರು ಪ್ರಕೃತಿ ಮಡಿಲಲ್ಲಿ ವಿಹರಿಸುವಾಗಲೇ ಆಧುನಿಕ ನರರಾಕ್ಷಸರೆನಿಸಿಕೊಂಡ ಉಗ್ರರು ಹಠಾತ್ ದಾಳಿ ಮಾಡಿ ಗಂಡಸರನ್ನು ಹುಡುಕಿ ಅವರ ಧರ್ಮ ಕೇಳಿ ಹಿಂದೂ ಎಂಬ ಕಾರಣಕ್ಕಾಗಿ ಹತ್ಯೆಗೈದಿದ್ದಾರೆ. ಈ ಕೃತ್ಯವನ್ನು ಅವರ ಹೆಂಡತಿ, ಮಕ್ಕಳ ಎದುರಲ್ಲೇ ನಡೆಸಿದ್ದಾರೆ. ಹೀಗಾಗಿ ಇದಕ್ಕೊಂದು ಪ್ರತಿಕಾರ ಯಾವಾಗ ಎಂದು ಜನ ಕೇಳುತ್ತಿದ್ದಾರೆ.
ಈ ಕೃತ್ಯದ ಬಳಿಕ ಇಡೀ ದೇಶದ ಜನರ ರಕ್ತ ಕುದಿಯುತ್ತಿದೆ. ಸುಮಾರು ಇಪ್ಪತ್ತೆಂಟು ಮಂದಿ ಪ್ರವಾಸಿಗರು ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಕಾಶ್ಮೀರದ ಚೆಲುವನ್ನು ನೋಡಲೆಂದು ಖುಷಿ, ಖುಷಿಯಾಗಿ ತಮ್ಮ ಸಂಸಾರದೊಂದಿಗೆ ಹೋದವರು ಇದೀಗ ಹೆಣವಾಗಿ ಬರುತ್ತಿದ್ದಾರೆ. ಆದರೆ ಈ ಕೃತ್ಯವನ್ನು ಕಣ್ಣಾರೆ ಕಂಡ ಹೆಂಡತಿ ಮಕ್ಕಳ ಪರಿಸ್ಥಿತಿ ಹೇಗಿರಬಹುದು? ಮನೆಯ ಯಜಮಾನನನ್ನು ಕಳೆದುಕೊಂಡು ಕುಟುಂಬದ ಪರಿಸ್ಥಿತಿ ಹೇಗಿರಬಹುದು? ಖಂಡಿತಾ ಊಹಿಸಲು ಸಾಧ್ಯವಿಲ್ಲ. ಆದರೆ ಅಟ್ಟಹಾಸ ಮೆರೆದ ಉಗ್ರರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರು ತಾವು ಗೆದ್ದ ಸಂತೋಷದಲ್ಲಿ ಕೇಕೆ ಹಾಕುತ್ತಿರಬಹುದೇನೋ? ಆದರೆ ಅವರಿಗೊಂದು ಗತಿ ಕಾಣಿಸಲೇ ಬೇಕೆಂದು ಇಡೀ ದೇಶ ಒಕ್ಕೊರಲಿನ ಆಗ್ರಹ ಮಾಡುತ್ತಿದೆ.

ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಯೋತ್ಪಾದನೆಯ ಬೀಜವನ್ನು ಬಿತ್ತಿ ಅದನ್ನು ಹೆಮ್ಮರವಾಗಿ ಬೆಳೆಸಿ ದುರ್ಬಲ ದೇಶವನ್ನಾಗಿ ಮಾಡಬೇಕೆನ್ನುವ ಪಾಕಿಸ್ತಾನದ ಕನಸು ಇವತ್ತಿಗೂ ಮುಂದುವರೆಯುತ್ತಲೇ ಇದೆ. ಭಾರತದಲ್ಲಿ ಭಯೋತ್ಪಾದಕರ ಗುಂಡಿಗೆ ಸಹಸ್ರಾರು ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಕಾಶ್ಮೀರ ನಮ್ಮದು ಎನ್ನುತ್ತಲೇ ಬರುತ್ತಿರುವ ಪಾಕಿಸ್ತಾನ ಅಲ್ಲಿ ಏನೆಲ್ಲ ಕೃತ್ಯಗಳನ್ನು ನಡೆಸಿತು? ಕಾಶ್ಮೀರಿ ಪಂಡಿತರ ನರಮೇಧವನ್ನು ಮಾಡಿ ಅವರು ಅಲ್ಲಿಂದಲೇ ಓಡಿಸುವ ಪ್ರಯತ್ನ ಮಾಡಿತು.
ಉಗ್ರರ ಕೃತ್ಯದ ಹಿಂದೆ ಪಾಕ್ ಕುತಂತ್ರ
ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಅಲ್ಲಿ ಸೇನಾ ಬಂದೋಬಸ್ತ್ ಮಾಡಿದ್ದಲ್ಲದೆ, ಉಗ್ರರನ್ನು ಹುಡುಕಿ ಹೊಡೆಯುವ ಪೂರ್ಣ ಜವಬ್ದಾರಿಯನ್ನು ಸೇನೆಗೆ ನೀಡಲಾಯಿತು. ಕಾಶ್ಮೀರ ಸಂಪೂರ್ಣ ತಹಬದಿಗೆ ಬಂದಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಪ್ರವಾಸಿಗರು, ಉದ್ಯಮಿಗಳು ಕಾಶ್ಮೀರದತ್ತ ಮುಖ ಮಾಡಿದರು. ವಿಧಾನಸಭಾ ಚುನಾವಣೆ ನಡೆದು ಸರ್ಕಾರವೂ ಅಸ್ತಿತ್ವಕ್ಕೆ ಬಂತು. ಎಲ್ಲವೂ ಸರಿಹೋಗುತ್ತಿದೆ ಎನ್ನುವಾಗಲೇ ಪಾಕಿಸ್ತಾನಕ್ಕೆ ಆತಂಕ ಶುರುವಾಗಿತ್ತು. ಏಕೆಂದರೆ ಪಾಕಿಸ್ತಾನ ನೀಡುತ್ತಿದ್ದ ಹಣಕ್ಕಾಗಿ ಕಲ್ಲು ಹೊಡೆಯುವವರು ಹಿಂದೆ ಇದ್ದರು. ಆದರೆ ಅವರೆಲ್ಲರ ಹುಟ್ಟು ಅಡಗಿಸುವ ಕೆಲಸವಾಗಿತ್ತು. ಇದೆಲ್ಲವೂ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹೀಗಾಗಿಯೇ ಇಂತಹದೊಂದು ಕೃತ್ಯಕ್ಕೆ ಉಗ್ರರು ಕೈಹಾಕಿದ್ದು, ಇದರ ಹಿಂದೆ ಪಾಕಿಸ್ತಾನ ಇರುವುದು ಬಹಿರಂಗವಾಗುತ್ತಿದೆ.
ಪೆಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿ ಮತ್ತು ಹತ್ಯೆ ದಿಢೀರ್ ಆಗಿ ನಡೆದ ಕೃತ್ಯವಂತು ಅಲ್ಲವೇ ಅಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಬಹುಶಃ ಇದಕ್ಕೆ ಬಹುದಿನಗಳ ತಯಾರಿಯಂತು ಆಗಿದೆ. ಅದಕ್ಕಿಂತ ಹೆಚ್ಚಾಗಿ ಸ್ಥಳೀಯರ ಸಹಕಾರವಂತು ಇದ್ದೇ ಇದೆ. ಎಲ್ಲವನ್ನು ನೋಡಿಕೊಂಡೇ ಈ ಕೃತ್ಯವನ್ನು ಎಸಗಿದ್ದಾರೆ. ಈಗಾಗಲೇ 26/11ರ ಸೂತ್ರಧಾರಿ ತಹವೂರ್ ಹುಸೇನ್ ರಾಣಾನನ್ನು ಕರೆತರಲಾಗಿದೆ. ಇದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಇದರ ಜತೆಗೆ ದೇಶದಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿಯೇ ಇಂತಹದೊಂದು ಕೃತ್ಯ ಎಸಗಿ ಭಾರತಕ್ಕೆ ಎಚ್ಚರಿಕೆ ನೀಡುವ ಪ್ರಯತ್ನವನ್ನು ಉಗ್ರಸಂಘಟನೆಗಳು ಮಾಡಿವೆ.

ಭಾರತದ ಮಗ್ಗುಲಲ್ಲಿದ್ದಾರೆ ವಿರೋಧಿಗಳು
ಭಾರತದ ಮಗ್ಗುಲ ದೇಶಗಳೆಲ್ಲವೂ ವಿರೋಧಿಗಳಾಗಿದ್ದಾರೆ. ಅದರಲ್ಲೂ ಬಾಂಗ್ಲಾ ಮತ್ತು ಪಾಕಿಸ್ತಾನ ನೇರವಾಗಿ ಎದುರಿಸಲು ಸಾಧ್ಯವಾಗದ ಕಾರಣದಿಂದಾಗಿ ಒಳನುಸುಳಿ ದೇಶವಿರೋಧಿ ಶಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ಮೊದಲಿನಿಂದಲೂ ನಿರತವಾಗಿವೆ. ಇಂತಹ ಶಕ್ತಿಗಳಿಗೆ ರಾಜಕೀಯ ಕಾರಣಕ್ಕಾಗಿ ಕೆಲವು ನಾಯಕರು ನೀರೆರೆದು ಪೋಷಣೆ ಮಾಡುತ್ತಿದ್ದಾರೆ. ಅವರ ಸ್ವಾರ್ಥದ ಮತ್ತು ದೇಶವಿರೋಧಿ ನಿಲುವುಗಳು ದೇಶದಲ್ಲಿ ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿವೆ. ಉಗ್ರಗಾಮಿಗೆ ಕೊಲ್ಲುವುದಷ್ಟೆ ಗೊತ್ತು. ಇವತ್ತು ಸಾಮಾನ್ಯ ನಾಗರಿಕರನ್ನು ಕೊಂದವರು ನಾಳೆ ತಮ್ಮನ್ನು ಪೋಷಿಸಿ ಬೆಳೆಸಿದವರನ್ನು ಕೊಂದೇ ಕೊಲ್ಲುತ್ತಾರೆ. ಅದು ನಿರೀಕ್ಷಿತ.
ಇಂತಹ ಕೃತ್ಯಗಳು ನಡೆದಾಗ ರಾಜಕೀಯ ಬಿಟ್ಟು ದೇಶದ ಒಳಿತಿಗಾಗಿ ಒಗ್ಗಟ್ಟಾಗ ಬೇಕಾಗಿದೆ. ಅದನ್ನು ಹೊರತು ಪಡಿಸಿ ಮತ್ಯಾರದ್ದೋ ಓಲೈಕೆಗೆ ಮುಂದಾದರೆ ನಾಳೆ ನಿಮ್ಮ ಮನೆಯ ದೀಪವೂ ಆರುವುದರಲ್ಲಿ ಸಂಶಯವಿಲ್ಲ. ಇವತ್ತು ಇಡೀ ದೇಶದ ಜನರ ರಕ್ತ ಕುದಿಯುತ್ತಿದೆ. ಎಲ್ಲರೂ ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಉಗ್ರರು ಕೇವಲ ಕಾಶ್ಮೀರದಲ್ಲಿ ಮಾತ್ರ ಇದ್ದಾರೆ ಎಂದರೆ ಅದು ತಪ್ಪಾಗುತ್ತದೆ. ಕಾರಣ ಈಗಾಗಲೇ ವೇಷ ಬದಲಿಸಿಕೊಂಡು ನಮ್ಮ ನಡುವೆಯೇ ಇದ್ದವರನ್ನು ಎನ್ ಎಐ ಬಂಧಿಸಿದ ಪ್ರಕರಣಗಳನ್ನು ನೋಡಿದ್ದೇವೆ. ಹೀಗಾಗಿ ಎಚ್ಚರಿಕೆ ವಹಿಸುವುದು ಎಲ್ಲರ ಅಗತ್ಯತೆಯಾಗಿದೆ.

ಲಷ್ಕರ್ ಇ ತೊಯ್ಬಾ ಕೈವಾಡ
ಇದೀಗ ಕೃತ್ಯ ನಡೆದು ಹೋಗಿದೆ. ಅಮಾಯಕ 28 ಪ್ರವಾಸಿಗರು ಉಸಿರು ಚೆಲ್ಲಿದ್ದಾರೆ. ಮೃತದೇಹವನ್ನು ಅವರ ಕುಟುಂಬಕ್ಕೆ ಒಪ್ಪಿಸಿ ಮುಂದಿನ ವಿಧಿವಿಧಾನಗಳನ್ನು ನೆರವೇರಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಕೃತ್ಯಕ್ಕೆ ಪ್ರತಿಕಾರ ಮಾಡಲೇ ಬೇಕಾಗಿದೆ. ಇಲ್ಲದೆ ಹೋದರೆ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಾರದು. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಈ ಕೃತ್ಯದ ಹಿಂದೆ ಲಷ್ಕರ್ ಇ ತೊಯ್ಬಾ ಸಂಘಟನೆಯ ಕೈವಾಡವಿದೆ ಎಂಬುದನ್ನು ಎನ್ ಐಎ ಹೇಳಿದ್ದು ಉಗ್ರರ ಫೋಟೋವನ್ನು ರಿಲೀಸ್ ಮಾಡಿದೆ. ಈಗ ಭಾರತ ಏನು ಮಾಡುತ್ತದೆ? ಹೇಗೆ ಪ್ರತಿಕಾರ ತೀರಿಸುತ್ತದೆ? ಎಂದು ಬರೀ ಭಾರತದ ಜನ ಮಾತ್ರವಲ್ಲ ವಿಶ್ವ ಎದುರು ನೋಡುತ್ತಿದೆ.












Click it and Unblock the Notifications