ತಿರುಗುಬಾಣವಾಯ್ತು ಆರ್ ಜೆಡಿ ಹೂಡಿದ್ದ ನಯವಂಚನೆಯ ಸಂಚು!
ಪಾಟ್ನಾ, ಜುಲೈ 27: ಬಿಹಾರ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾವುದೂ ಸರಿಯಿಲ್ಲ ಎಂಬುದು ಗೊತ್ತಿದ್ದರೂ, ಮಹಾಮೈತ್ರಿಗಂತೂ ಭಂಗವಿಲ್ಲ ಎಂದು ಆರ್ ಜೆಡಿ ನಾಯಕರು ಊರೆಲ್ಲ ಹೇಳಿಕೊಂಡು ಓಡಾಡಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆರ್ ಜೆಡಿ ನಾಯಕರ ವರ್ತನೆ, ಅವರ ಮೇಲಿನ ಭ್ರಷ್ಟಾಚಾರ ಆರೋಪಗಳು ಪ್ರತಿಕ್ಷಣ ಇರಿಸುಮುರಿಸುಂಟುಮಾಡುತ್ತಿದ್ದರೂ ಮೈತ್ರಿ ಮಾಡಿಕೊಂಡ ತಪ್ಪಿಗೆ ಎಲ್ಲವನ್ನೂ ಅದುಮಿಟ್ಟುಕೊಟ್ಟು ಸುಮ್ಮನಿದ್ದರು. ಆದರೂ ತಾಳ್ಮೆಗೂ ಒಂದು ಮಿತಿ ಎಂಬುದಿದೆಯಲ್ಲ! ಆ ಮಿತಿ ಇಷ್ಟು ಬೇಗನೇ ಮೀರುತ್ತೆ ಎಂಬ ಅರಿವು ಮಾತ್ರ ಯಾರಿಗೂ ಇರಲಿಲ್ಲವಷ್ಟೆ!
ಇದೀಗ ಬಿಹಾರದ ರಾಜಕೀಯದಲ್ಲಾದ ಕ್ಷಿಪ್ರ ಬೆಳವಣಿಗೆ, ಬದಲಾವಣೆ ಇಡೀ ದೇಶವನ್ನೂ ಅಚ್ಚರಿಯಲ್ಲಿ ಮುಳುಗಿಸಿದೆ. ನಿತೀಶ್ ಒಂದಲ್ಲಾ ಒಂದು ದಿನ ಆರ್ ಜೆಡಿ ಮೈತ್ರಿಯಿಂದ ಹೊರಬರುತ್ತಾರೆಂಬುದು ಗೊತ್ತಿದ್ದರೂ, ಆ ದಿನ ಇಷ್ಟು ಬೇಗನೆ ಬರುತ್ತದೆ ಎಂಬುದು ಗೊತ್ತಿರಲಿಲ್ಲ. ಇದೀಗ ಜೆಡಿಯು-ಬಿಜೆಪಿ ಮೈತ್ರಿಪಕ್ಷ ಮತ್ತೊಮ್ಮೆ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ.
ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ, ಸುಶೀಲ್ ಕುಮಾರ್ ಮೋದಿ ಉಪಮುಖ್ಯಮಂತ್ರಿಯಾಗಿ ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ನಿತೀಶ್ ರ ಈ ಏಕಾಏಕಿ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಕೆದಕಿದರೆ, ನಯವಂಚನೆಯ ಉದ್ದೇಶ ಇಟ್ಟುಕೊಂಡಿದ್ದ ಆರ್ ಜೆಡಿಯ ಮತ್ತೊಂದು ಮುಖ ಬಯಲಾಗುತ್ತದೆ! ಆರ್ ಜೆಡಿ-ಜೆಡಿಯು ಮೈತ್ರಿ ಆರಂಭವಾದಾಗಿನಿಂದಲೂ ನಿತೀಶ್ ಕುಮಾರ್ ನೆಮ್ಮದಿಯಿಂದಿರಲಿಲ್ಲ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮನೆ ಮೇಲೆ ಸಿಬಿಐ ದಾಳಿಯಾಗುತ್ತಿದ್ದಂತೆಯೇ ಮೈತ್ರಿಕೂಟದಿಂದ ಹೊರಬರುವುದಕ್ಕೆ ಅವಕಾಶ ಸಿಕ್ಕಿತು ಎಂದೇ ನಿತೀಶ್ ಯೋಚಿಸಿದ್ದರು.

ಸಂಚು ರೂಪಿಸಿತ್ತು ಆರ್ ಜೆಡಿ
ನಿತೀಶ್ ರನ್ನು ಮಟ್ಟಹಾಕುವುದಕ್ಕಾಗಿ ಆರ್ ಜೆಡಿ ಬಹಳ ಪ್ರಮುಖವಾದ ಸಂಚೊಂದನ್ನು ರೂಪಿಸಿತ್ತು. ಆ ಸಂಚಿನ ಪ್ರಕಾರ ತನ್ನ ನಾಯಕರಾದ ಲಾಲೂ ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಮೇಲಿರುವ ಆರೋಪಗಳನ್ನು ಮುಚ್ಚಿಹಾಕಲು ಕೇಂದ್ರದ ಕೆಲ ನಾಯಕರ ಸಹಾಯ ಕೋರಿತ್ತು. ಅದಕ್ಕೆ ಪ್ರತಿಯಾಗಿ ನಿತೀಶ್ ಅವರನ್ನು ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ಉಪಾಯವಾಗಿ ಕೆಳಗಿಳಿಸುವ ಬಗ್ಗೆಯೂ ಮಾತುಕತೆ ನಡೆದಿತ್ತು!

ಉಲ್ಟಾ ಹೊಡೆಯಿತು ಸಂಚು!
ನಿತೀಶ್ ರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದಕ್ಕಾಗಿ ಆರ್ ಜೆಡಿ ರೂಪಿಸಿದ್ದ ಸಂಚು, ತಾನೇ ತೋಡಿದ ಬಾವಿಗೆ ತಾನೇ ಬೀಳಬೇಕಾದ ಪರಿಸ್ಥಿತಿಯನ್ನು ಆರ್ ಜೆಡಿಗೆ ತಂದಿಟ್ಟಿದೆ! ಆರ್ ಜೆಡಿ ತನ್ನ್ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ನಿತೀಶ್, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಲಾಲೂ ಪ್ರಸಾದ್ ಪುತ್ರ, ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ಬಳಿ ರಾಜೀನಾಮೆ ನೀಡುವಂತೆ ಕೇಳಿದ್ದಾರೆ. ಅದಕ್ಕೆ ತೇಜಸ್ವಿ ಯಾದವ್ ಒಪ್ಪದಿದ್ದಾಗ ತಾವೇ ರಾಜೀನಾಮೆ ನೀಡಿದ್ದಾರೆ.

ಕೋವಿಂದ್ ಗೆ ಬೆಂಬಲ ನೀಡಿದ್ದು ಮೊದಲ ಸೂಚನೆ!
ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ನೇರ ಬೆಂಬಲ ನೀಡುವುದಾಗಿ ಘೋಷಿಸುವ ಮೂಲಕ ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಸಾಧಿಸುವ ಸೂಚನೆಯನ್ನು ಅಂದೇ ನಿತೀಶ್ ಕುಮಾರ್ ನೀಡಿದ್ದರು. ಈ ಸಂಬಂಧ ಆರ್ ಜೆಡಿ ಮತ್ತು ಜೆಡಿಯು ನಾಯಕರ ನಡುವೆ ಹಲವು ವಾದ-ವಿವಾದಗಳು ಎದ್ದಿದ್ದವು.

ನೋಟು ನಿಷೇಧಕ್ಕೂ ಬೆಂಬಲ
2016 ನವೆಂಬರ್ ನಲ್ಲಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವನ್ನೂ ಬೆಂಬಲಿಸುವ ಮೂಲಕ, ಆಗಲೇ ಆರ್ ಜೆಡಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು ನಿತೀಶ್. ಒಂದೊಮ್ಮೆ ಬಿಹಾರದಲ್ಲಿ ಅತಂತ್ರ ಪರಿಸ್ಥಿತಿ ತಲೆದೋರಿದರೆ ಬಿಜೆಪಿ ತಾನಾಗಿಯೇ ಸಹಾಯಕ್ಕೆ ಬರುತ್ತೇನೆಂದು ಹೇಳುವುದಕ್ಕೆ ಏನೆಲ್ಲ ಅಗತ್ಯವಿದೆಯೋ ಅದನ್ನೆಲ್ಲ ಆಗಿನಿಂದಲೇ ಮಾಡುತ್ತ ಬಂದವರು ನಿತೀಶ್!

ಭ್ರಷ್ಟಾಚಾರದಿಂದ ರೋಸಿಹೋಗಿದ್ದ ನಿತೀಶ್
ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಅವರ ಪುತ್ರಿ ಮಿಸಾ ಭಾರತಿ, ಪುತ್ರ ತೇಜಸ್ವಿ ಯಾದವ್ ಇವರೆಲ್ಲ ಭ್ರಷ್ಟಾಚಾರದಿಂದ ರೋಸಿಹೋಗಿದ್ದ ನಿತೀಶ್ ಗೆ ಒಮ್ಮೆ ಅಲ್ಲಿಂದ ಹೊರಬಂದರೆ ಸಾಕೆನ್ನಿಸಿತ್ತು. ಇದರೊಂದಿಗೆ ತಮ್ಮ ವಿರುದ್ಧ ಸಂಚು ರೂಪಿಸುತ್ತಿರುವ ಆರ್ ಜೆಡಿ ನಾಯಕರಿಗೂ ಪಾಠ ಕಲಿಸಬೇಕಿತ್ತು. ಅದಕ್ಕೆ ಸರಿಯಾಗಿ ಬಿಜೆಪಿಯೂ ಜೆಡಿಯು ಗೆ ಬೆಂಬಲ ನೀಡುವುದಕ್ಕೆ ಸಿದ್ಧವಾಗಿತ್ತು. ಎಲ್ಲವೂ ನಿತೀಶ್ ಕುಮಾರ್ ಎಣಿಸಿಸದಂತೆ ಆಯಿತು, ಆರ್ ಜೆಡಿ ಮಾತ್ರ ತಾನೇ ತೋಡಿದ ಬಾವಿಗೆ ತಾನೇ ಬಿತ್ತು!












Click it and Unblock the Notifications