ರಫೇಲ್ ಯುದ್ಧವಿಮಾನಕ್ಕೆ ಪೂಜೆ ಮಾಡಿದ್ದರಲ್ಲಿ ತಪ್ಪೇನಿದೆ: ಅಮಿತ್ ಶಾ
ಚಂಡೀಘಡ, ಅಕ್ಟೋಬರ್ 09: ರಫೇಲ್ ಯುದ್ಧ ವಿಮಾನಕ್ಕೆ ರಾಜನಾಥ್ ಸಿಂಗ್ ಅವರು ಪೂಜೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.
ಹರಿಯಾಣದ ಕೈತಾಲ್ನಲ್ಲಿ ಇಂದು ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, 'ವಿಜಯದಶಮಿಯಂದು ಶಸ್ತ್ರ ಪೂಜೆ ಮಾಡುವುದಿಲ್ಲವೇ, ಕಾಂಗ್ರೆಸ್ ಪಕ್ಷ ಟೀಕೆ ಮಾಡುವ ಮುನ್ನಾ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ಕಾಂಗ್ರೆಸ್ಗೆ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ನಂಬಿಕೆ ಇಲ್ಲ, ಕಾಂಗ್ರೆಸ್ ಪಕ್ಷಕ್ಕೆ ಭಾರತೀಯ ವಾಯುಸೇನೆ ಶಕ್ತಿ ವೃದ್ಧಿಯಾಗುವುದೂ ಇಷ್ಟವಿಲ್ಲ, ಕ್ವಟ್ರೋಚಿಯನ್ನು ಆರಾಧಿಸುವ ಪಕ್ಷಕ್ಕೆ ಶಸ್ತ್ರಪೂಜೆ ಸಹಜವಾಗಿಯೇ ಸಮಸ್ಯೆ ಆಗಿರುತ್ತದೆ ಎಂದು ಅವರು ಹೇಳಿದರು.

ಪಾಕಿಸ್ತಾನದ ವಿರುದ್ಧ ಯುದ್ಧವಾದಾಗ, ಬಾಂಗ್ಲಾದೇಶ ಸ್ವತಂತ್ರ್ಯವಾದಾಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಬಿಜೆಪಿ ವಿರೋಧ ಪಕ್ಷದಲ್ಲಿತ್ತು, ಆಗೆಲ್ಲಾ ನಾವು ಕಾಂಗ್ರೆಸ್ ಸರ್ಕಾರವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದೆವು. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷವಾಗಿ ಬಿಜೆಪಿಯಿಂದ ಕಲಿಯುವುದು ಸಾಕಷ್ಟಿದೆ ಎಂದು ಅಮಿತ್ ಶಾ ಹೇಳಿದರು.
ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 21 ಕ್ಕೆ ಮತದಾನ ನಡೆಯಲಿದೆ. ಅಮಿತ್ ಶಾ ಅವರು ಬಿಜೆಪಿ ಪರ ಹರಿಯಾಣದಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸುತ್ತಿದ್ದಾರೆ.












Click it and Unblock the Notifications