ಕಾಶ್ಮೀರ ಸಮಸ್ಯೆ ಬಗ್ಗೆ ಇಮ್ರಾನ್ ಖಾನ್ ಗೆ ವಾಜಪೇಯಿ ಏನು ಹೇಳಿದ್ದರು?
2004ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋಲದೆ ಇದ್ದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರ ಆಗಿರುತ್ತಿತ್ತು ಎಂದು ಮಾಜಿ ಪ್ರಧಾನಿಯೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನನ್ನ ಬಳಿ ಹೇಳಿದ್ದರು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮಾಜಿ ವಿದೇಶಾಂಗ ಸಚಿವ- ಕಾಂಗ್ರೆಸ್ ನಾಯಕ ನಟವರ್ ಸಿಂಗ್ ಅವರ ದೃಷ್ಟಿಕೋನವೂ ಇದೇ ಆಗಿತ್ತು. ಕಾಶ್ಮೀರ ಸಮಸ್ಯೆಗೊಂದು ಪರಿಹಾರ ಇದೆ ಹಾಗೂ ಎರಡೂ ದೇಶಗಳು ಸಮಸ್ಯೆ ಪರಿಷ್ಕಾರಕ್ಕೆ ಯತ್ನಿಸಿವೆ ಎಂಬುದನ್ನೇ ಇವು ಸೂಚಿಸುತ್ತವೆ ಎಂದು ಇಮ್ರಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ಮಾತುಕತೆ ಆಡದಿದ್ದರೆ ಕಾಶ್ಮೀರ ಸಮಸ್ಯೆ ಪರಿಹರಿಸುವುದಕ್ಕೆ ಇರುವ ವಿವಿಧ ಆಯ್ಕೆಗಳ ಬಗ್ಗೆ ಚರ್ಚೆಯೇ ಸಾಧ್ಯವಾಗುವುದಿಲ್ಲ ಎಂದಿದ್ದಾರೆ ಇಮ್ರಾನ್. ಹಾಗಿದ್ದರೆ ಸಮಸ್ಯೆ ಪರಿಹಾರದ ಸೂತ್ರ ಯಾವ್ಯಾವು ಇವೆ ಎಂಬುದಕ್ಕೆ, ಎರಡು-ಮೂರು ಸೂತ್ರ ಇವೆ. ಅವುಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದು, ಆ ಬಗ್ಗೆ ಈ ಹಂತದಲ್ಲೇ ಮಾಹಿತಿ ಹಂಚಿಕೊಳ್ಳುವುದು ಅಥವಾ ಮಾತನಾಡುವುದು ತುಂಬ ಬೇಗ ಎನಿಸಿಕೊಳ್ಳುತ್ತದೆ ಎಂದು ಇಮ್ರಾನ್ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಎರಡೂ ಅಣ್ವಸ್ತ್ರ ಹೊಂದಿದ ರಾಷ್ಟ್ರಗಳು. ಆದ್ದರಿಂದ ಯುದ್ಧ ಸಾಧ್ಯವಿಲ್ಲ. ಏಕೆಂದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಭಾರತವು ಯಾವುದೇ ಶಾಂತಿ ಮಾತುಕತೆ ನಡೆಸಲು ಸಿದ್ಧವಿಲ್ಲ. ಆದರೆ ಪಾಕಿಸ್ತಾನವು ಶಾಂತಿ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನದಲ್ಲಿದೆ ಎಂದು ಖಾನ್ ಹೇಳಿದ್ದಾರೆ.
ಯವುದೇ ದೇಶದ ವಿದೇಶಾಂಗ ನೀತಿ ರೂಪಿಸುವಲ್ಲಿ ಅಮೆರಿಕ ಸೇರಿದಂತೆ ಇನ್ಯಾವುದೇ ದೇಶದ ಸೈನ್ಯದ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಖಾನ್, ಭದ್ರತಾ ವಿಚಾರಗಳು ಒಳಗೊಂಡ ಯಾವುದೇ ವಿಷಯದಲ್ಲಿ ಸರಕಾರವು ಸೈನ್ಯದ ಸಲಹೆ ಪಡೆಯುತ್ತದೆ ಎಂದ ಅವರು, ಪಾಕಿಸ್ತಾನ ಸೇನೆ ಹಾಗೂ ಸರಕಾರ ಒಂದೇ ದಿಸೆಯಲ್ಲಿವೆ. ನನ್ನ ನಿರ್ಧಾರವನ್ನು ಸೇನೆ ಬೆಂಬಲಿಸುತ್ತದೆ ಎಂಬ ಮಾತನ್ನು ಹೇಳಿದ್ದಾರೆ.












Click it and Unblock the Notifications