West Bengal violence: ಬುಡಕಟ್ಟು ಬಾಲಕಿ ಸಾವು ಪ್ರಕರಣ: ಕಲಿಯಗಂಜ್ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ
ಪಶ್ಚಿಮ ಬಂಗಾಳದ ಕಲಿಯಾಗಂಜ್ನಲ್ಲಿ ಶನಿವಾರ ಅಪ್ರಾಪ್ತ ಬುಡಕಟ್ಟು ಬಾಲಕಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಾಲಕಿಯ ಸಾವನ್ನು ಪ್ರತಿಭಟಿಸಿದ ಜನರು ಪಶ್ಚಿಮ ಬಂಗಾಳದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಪೊಲೀಸ್ ಸಿಬ್ಬಂದಿ ಸಂತ್ರಸ್ತೆಯ ಮೃತದೇಹವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ಜನ ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಕಲಿಯಾಗಂಜ್ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಇಂದು ಮತ್ತೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ವೈರಲ್ ವಿಡಿಯೋ ನಿಜವಾಗಿಯೋ ಬಾಲಕಿಯದ್ದಾ ಎನ್ನುವುದು ಖಚಿತವಾಗಿಲ್ಲ.

ಬಾಲಕಿ ಸಾವನ್ನಪ್ಪಿ ಕೆಲವೇ ದಿನಗಳ ನಂತರ ಆ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಉತ್ತರ ದಿನಾಜ್ಪುರ ಜಿಲ್ಲೆಯ ರಾಯಗಂಜ್ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಘೇರಾವ್ ಹಾಕಲು ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಲ್ಲು ತೂರಾಟವನ್ನು ಎದುರಿಸಿದ ಪೊಲೀಸರು ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಶ್ರುವಾಯು ಶೆಲ್ ಮತ್ತು ಲಾಠಿ ಚಾರ್ಜ್ ಮಾಡಬೇಕಾಯಿತು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕೆ ಬಿಜೆಪಿಯನ್ನು ದೂಷಿಸಿದೆ. ಬಿಜೆಪಿ ಬಾಲಕಿಯ ಸಾವನ್ನು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವೆಂದು ಹೇಳುವ ಮೂಲಕ ಕೋಪವನ್ನು ಪ್ರಚೋದಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದರಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಉತ್ತರ ದಿನಾಜ್ಪುರ ಜಿಲ್ಲೆಯ ಕಲಿಯಗಂಜ್ ಪಟ್ಟಣದ ಕೊಳದ ದಡದಲ್ಲಿ ಹದಿಹರೆಯದ ಬಾಲಕಿಯ ಶವ ಪತ್ತೆಯಾಗಿದೆ. ಹತ್ತನೇ ತರಗತಿಯ ವಿದ್ಯಾರ್ಥಿಯ ಮೃತದೇಹ ಉತ್ತರ ದಿನಾಜ್ಪುರದಿಂದ ರಾಜ್ಬೊಂಗ್ಶಿ ಸಮುದಾಯಕ್ಕೆ ಸೇರಿದ ಬಾಲಕಿಯದ್ದು ಎಂದು ನಂತರ ತಿಳಿದು ಬಂದಿದೆ. ಅಪ್ರಾಪ್ತ ಬಾಲಕಿಯ ಸಾವನ್ನು ಅತ್ಯಾಚಾರ ಹಾಗೂ ಕೊಲೆ ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲಿ ಕಿಡಿ ಹಚ್ಚುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಲೇ ಇದೆ. ಇದಕ್ಕೆ ಜನ ಕಿವಿಕೊಡಬಾರದು. ಅಪ್ರಾಪ್ತ ಬಾಲಕಿಯ ಸಾವನ್ನು ಅತ್ಯಾಚಾರ ಹಾಗೂ ಕೊಲೆ ಎಂದು ಹೇಳುವ ಮೂಲಕ ಕಿಡಿ ಹಚ್ಚುವಂತ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications