ದೆಹಲಿ ಮಹಾನಗರ ಪಾಲಿಕೆ ಚುನಾವಣೆ, ಮತದಾನ ಆರಂಭ
ನವದೆಹಲಿ, ಡಿಸೆಂಬರ್ 04; ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಚುನಾವಣೆಗೆ ಮತದಾನ ಆರಂಭವಾಗಿದೆ. 250 ವಾರ್ಡ್ಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ನಡುವೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನೇರ ಪೈಪೋಟಿ ನಡೆಯುತ್ತಿದೆ. ಆದ್ದರಿಂದ ಈ ಚುನಾವಣೆ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ಎಂಸಿಡಿ ಚುನಾವಣೆ: ಮೋದಿಯಂತೆ ಕೇಜ್ರಿವಾಲ್ 'ಚಾಯ್ ಪೇ ಚರ್ಚಾ'
ಭಾನುವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಮತದಾನಕ್ಕಾಗಿ 13,638 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಚುನಾವಣಾ ಫಲಿತಾಂಶ ಡಿಸೆಂಬರ್ 7ರಂದು ಪ್ರಕಟವಾಗಲಿದೆ.
ಎಂಸಿಡಿ ಚುನಾವಣೆ: ಬಿಜೆಪಿಯಿಂದ 7 ಲಕ್ಷ ಮನೆಗಳು, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಭರವಸೆ
ಒಟ್ಟು 1,45,05,322 ಮತದಾರರು ಸುಮಾರು 1349 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ರಾಜ್ಯ ಚುನಾವಣಾ ಆಯೋಗ 68 ಮಾದರಿ ಮತಗಟ್ಟೆ ಮತ್ತು 68 ಪಿಂಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡಿದೆ. ದೆಹಲಿ ಪೊಲೀಸರು ಚುನಾವಣೆಯ ಭದ್ರತೆಗಾಗಿ 40 ಸಾವಿರ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ.
ಎಂಸಿಡಿ ಚುನಾವಣಾ ಫಲಿತಾಂಶ: ಬಿಜೆಪಿಗೆ ದೊಡ್ಡ ಗೆಲವು
ದೆಹಲಿ ಗಲಭೆ ಬಳಿಕ ಚುನಾವಣೆ; 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಬಳಿಕ ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. 493 ಪ್ರದೇಶಗಳಲ್ಲಿನ 3,360 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
2012 ರಿಂದ 2022ರ ತನಕ ದೆಹಲಿ ಪಾಲಿಕೆಯನ್ನು ಮೂರು ಭಾಗವಾಗಿ ವಿಂಗಡಿಸಲಾಗಿತ್ತು. ಈಗ ಎಲ್ಲಾ ಪಾಲಿಕೆ ಸೇರಿಸಿ ದೆಹಲಿ ಮಹಾನಗರ ಪಾಲಿಕೆಯಾಗಿ ಮಾಡಲಾಗಿದೆ. ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
2017ರಲ್ಲಿ 270 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 181 ವಾರ್ಡ್ಗಳಲ್ಲಿ ಗೆಲುವು ಸಾಧಿಸಿತ್ತು. ಎಎಪಿ 48 ಮತ್ತು ಕಾಂಗ್ರೆಸ್ 27 ವಾರ್ಡ್ಗಳಲ್ಲಿ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಶೇ 53ರಷ್ಟು ಮತದಾನವಾಗಿತ್ತು.
ಪ್ರಸ್ತುತ ಇರುವ 250 ವಾರ್ಡ್ಗಳ ಪೈಕಿ 42 ಸೀಟು ಎಸ್ಸಿಗೆ, 104 ಸೀಟುಗಳು ಮಹಿಳೆಯರಿಗೆ ಮತ್ತು 104 ಸೀಟುಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಒಟ್ಟು 1,46,73,847 ಮತದಾರರಲ್ಲಿ 79,86,705 ಪುರುಷ, 66,86,081 ಮಹಿಳಾ ಮತದಾರರು ಮತ್ತು 1061 ತೃತೀಯ ಲಿಂಗಿ ಮತದಾರರು ಇದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ; ಮತದಾನದ ದಿನವೇ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಪಕ್ಷ ಕಳೆದ 15 ವರ್ಷಗಳಲ್ಲಿ ದೆಹಲಿಗಾಗಿ ಏನೂ ಮಾಡಿಲ್ಲ. ಜನರಿಗಾಗಿ ಕೆಲಸ ಮಾಡುವಲ್ಲಿ ಪಕ್ಷ ಸೋತಿದೆ" ಎಂದು ಟೀಕಿಸಿದ್ದಾರೆ.
"1.5 ಕೋಟಿ ಜನರು ಮತದಾನ ಮಾಡಲಿದ್ದಾರೆ. ಮಹಾನಗರ ಪಾಲಿಕೆಯ ಧ್ಯೇಯ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಇದನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿ ಎಂದು" ಮನೀಶ್ ಸಿಸೋಡಿಯಾ ಮತದಾರರಲ್ಲಿ ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರರಹಿತಾದ ಆಡಳಿತಕ್ಕಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ದೆಹಲಿಯ ಜನರಿಗೆ ಕರೆ ನೀಡಿದರು.
"ದೆಹಲಿಯನ್ನು ಸ್ವಚ್ಛ ಮತ್ತು ಸುಂದರಗೊಳಿಸಲು ಇಂದು ಮತದಾನ ನಡೆಯುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಲು ಇಂದು ಮತದಾನವಾಗುತ್ತಿದೆ. ದೆಹಲಿ ಜನರು ಮತಗಟ್ಟೆಗೆ ಹೋಗಿ ಪಾರದರ್ಶಕವಾಗಿ ಆಡಳಿತ ನಡೆಸುವ ಪಕ್ಷಕ್ಕೆ ಮತ ನೀಡಿ" ಎಂದು ಮನವಿ ಮಾಡಿದರು.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಮತ್ತು ಎಎಪಿ ಬಿರುಸಿನ ಪ್ರಚಾರ ನಡೆಸಿದೆ. ಬಿಜೆಪಿ ಕೇಂದ್ರ ಸಚಿವರನ್ನು ಸಹ ಪ್ರಚಾರ ಕಾರ್ಯಕ್ಕೆ ನಿಯೋಜನೆ ಮಾಡಿತ್ತು.