ಬಿಜೆಪಿಗೆ ಮತ, ಉತ್ತರಾಖಾಂಡ್ ಗೆ ಹಿತ: ಪ್ರಧಾನಿ ಮೋದಿ
ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿದ್ದರೂ ರಾಜ್ಯದ ಉನ್ನತಿಗೆ ಕ್ರಮ ಕೈಗೊಳ್ಳದ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕೆಂದ ಪ್ರಧಾನಿ ಮೋದಿ.
ಡೆಹ್ರಾಡೂನ್, ಫೆಬ್ರವರಿ 12: ಉತ್ತರಾಖಾಂಡ್ ನ ಭವಿಷ್ಯ ಬದಲಾಗಬೇಕೆಂದರೆ ಬಿಜೆಪಿಗೆ ಅಲ್ಲಿ ಅಧಿಕಾರ ಸಿಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಮತದಾರರಿಗೆ ಕರೆ ಕೊಟ್ಟಿದ್ದಾರೆ.
ಇದೇ ತಿಂಗಳ 15ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಾರ್ಘ್ ವಾಲ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಉತ್ತರಾಖಾಂಡ ರಾಜ್ಯ ಉದಯಿಸಿ 16 ವರ್ಷಗಳು ಸಂದಿವೆ. ಆದರೆ, ರಾಜ್ಯವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಭವಿಷ್ಯವನ್ನು ಉನ್ನತಿಯತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.[ನಾಲಿಗೆ ಬಿಗಿ ಹಿಡಿದು ಮಾತಾಡಿ, ಜನ್ಮ ಜಾಲಾಡಿಸುತ್ತೇನೆ: ಮೋದಿ ಎಚ್ಚರಿಕೆ]
ಉತ್ತರಾಖಾಂಡ್ ನಲ್ಲಿ 1.8 ಕೋಟಿ ಗ್ರಾಹಕರಿಗೆ ಮಾತ್ರ ಎಲ್ ಪಿಜಿ ಸೌಲಭ್ಯವಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಮನೆಗೂ ಎಲ್ ಪಿಜಿ ಸಂಪರ್ಕ ಸಿಗುವಂತ ಯೋಜನೆಯನ್ನು ರೂಪಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು.[ಉತ್ತರಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ]
ಇದಲ್ಲದೆ, ಕಳೆದೈದು ವರ್ಷಗಳಿಂದ ಅಧಿಕಾರದಲ್ಲಿದ್ದರೂ ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಮತದಾರರನ್ನು ಅವರು ಆಗ್ರಹಿಸಿದರು.[ಉಪ್ರ ಚುನಾವಣೆ ಮೊದಲ ಹಂತ: ಮೋದಿಗೆ ಅಗ್ನಿ ಪರೀಕ್ಷೆ ಮತ್ತು 10 ಅಂಶಗಳು]
ಅಪನಗದೀಕರಣದ ನಂತರ, ನನ್ನನ್ನು ಬೈದಾಡಿಕೊಂಡವರಿದ್ದಾರೆ. ನನ್ನನ್ನು ಗೇಲಿ ಮಾಡಿದವರಿದ್ದಾರೆ. ಆದರೆ, ಇಂಥ ಕುಹಕಗಳ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ನಾನು ಬಡವರ ಹಾಗೂ ದೀನದಲಿತರ ಹಿತರಕ್ಷಣೆಗಾಗಿ ಸದಾ ದುಡಿಯುತ್ತೇನೆ ಎಂದು ಅವರು ತಿಳಿಸಿದರು.
ಇದೇ ವೇಳೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಅವರು, ''ಕಾಲ ಬದಲಾಗಿದೆ. ದೆಹಲಿಯಲ್ಲಿ ಸರ್ಕಾರವೂ ಬದಲಾಗಿದೆ. ಅಲ್ಲಿ ಗಡಿ ಕಾಯುವ ಯೋಧ, ವೈರಿಗಳ ಹಾವಳಿಗಳ ನಡುವೆಯೂ ಕೈ ಕಟ್ಟಿ ಕೂರುವುದಿಲ್ಲ. ಆತ ತಿರುಗೇಟು ನೀಡುತ್ತಿದ್ದಾನೆ. ಇಂಥ ಸ್ಥೈರ್ಯವನ್ನು ನಾವು ಸೈನಿಕರಲ್ಲಿ ತುಂಬಿದ್ದೇವೆ'' ಎಂದು ಹೇಳಿದರು.