ಗೋವಾದಲ್ಲಿ ಮನೋಹರ್ ಬದಲಿಗೆ ಹೊಸ ಸಿಎಂ ಯಾರಾಗಬಹುದು?
ಪಣಜಿ, ಅಕ್ಟೋಬರ್ 17: ಗೋವಾದಲ್ಲಿ ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿ, ಸರ್ಕಾರ ರಚನೆಗೆ ವಿಫಲ ಯತ್ನ ನಡೆಸಿದ್ದ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ಸಿನಿಂದ ಇಬ್ಬರು ಶಾಸಕರನ್ನು ಬಿಜೆಪಿಗೆ ಸೇರುವಂತೆ ಮಾಡಿದ ಸಚಿವ ವಿಶ್ವಜಿತ್ ರಾಣೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಸುದ್ದಿ ಬಂದಿದೆ.
ಮುಖ್ಯಮಂತ್ರಿ ಮನೋಹರ್ಪರಿಕ್ಕರ್ಅವರು ಅನಾರೋಗ್ಯಪೀಡಿತರಾಗಿದ್ದು, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಸಚಿವ ವಿಶ್ವಜಿತ್ ಪ್ರತಾಪ್ರಾಣೆ ಅವರನ್ನು ಆ ಸ್ಥಾನಕ್ಕೆ ಕೂರಿಸಲು ಬಿಜೆಪಿ ಹೈಕಮಾಂಡ್ ಯೋಚಿಸುತ್ತಿದೆ ಎಂದು ಹೇಳಲಾಗಿದೆ.
ಮನೋಹರ್ ಅವರ ಸಚಿವ ಸಂಪುಟದಲ್ಲಿ ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿರುವ ವಿಶ್ವಜಿತ್ ಪ್ರತಾಪ್ಸಿಂಗ್ ರಾಣೆ ಅವರನ್ನು ಸಿಎಂ ಸ್ಥಾನಕ್ಕೇರಿಸಲು ಬಿಜೆಪಿಯ ಒಂದು ಬಣ ಯತ್ನಿಸುತ್ತಿದ್ದು, ಈಗಾಗಲೇ ಹೈಕಮಾಂಡ್ ಕಿವಿಗೂ ವಿಷಯ ಮುಟ್ಟಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ವಿಶ್ವಜಿತ್ ಅವರು ಬಿಜೆಪಿ ಹೈಕಮಾಂಡ್ ಜತೆ ಮಹತ್ವದ ಮಾತುಕತೆ ನಡೆಸಿಕೊಂಡು ಬಂದಿದ್ದರು.

ಕಾಂಗ್ರೆಸ್ಸಿನಿಂದಲೇ ಈ ಬಗ್ಗೆ ಮೊದಲ ಸುಳಿವು
ಕಾಂಗ್ರೆಸ್ನ ಇಬ್ಬರು ಶಾಸಕರು ಬಿಜೆಪಿಗೆ ಸೇರಿದ ಕುರಿತು ಪ್ರತಿಕ್ರಿಯೆ ನೀಡಿದ್ದ ಗೋವಾ ಕಾಂಗ್ರೆಸ್ಮುಖಂಡ ಚೆಲ್ಲಕುಮಾರ್, 'ಮುಖ್ಯಮಂತ್ರಿ ಸ್ಥಾನವನ್ನು ಉಡುಗೊರೆಯಾಗಿ ಪಡೆಯುವ ಸಲುವಾಗಿಯೇ ವಿಶ್ವಜಿತ್ ರಾಣೆ ಅವರು ಕಾಂಗ್ರೆಸ್ನ ಇಬ್ಬರು ಶಾಸಕರನ್ನು ಖರೀದಿಸಿದ್ದಾರೆ' ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಪರ ಜನರು ಮತ ಹಾಕಿ ಗೆಲ್ಲಿಸಿದ್ದರು ಆದರೆ, ರಾಜ್ಯಪಾಲೆ ಮೃದಲಾ ಸಿನ್ಹಾ ಅವರು ಜನತೆಯ ಮಾತು ಕೇಳಿಸಿಕೊಳ್ಳಬೇಕು. ವಿಶೇಷ ಅಧಿವೇಶನಕ್ಕೆ ಕರೆ ನೀಡಿ, ಬಹುಮತ ಸಾಬೀತುಪಡಿಸಲು ನಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಹೇಳಿದರು

ಗೋವಾ ವಿಧಾನಸಭೆ ಸಂಖ್ಯಾಬಲ
ಗೋವಾ ವಿಧಾನಸಭೆಯಲ್ಲಿ 16 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ತನ್ನ ಇಬ್ಬರು ಶಾಸಕರನ್ನು ಕಳೆದುಕೊಳ್ಳುವ ಮೂಲಕ 14ಕ್ಕೆ ಕುಸಿದಿದೆ. ಈ ಮೂಲಕ ಸರ್ಕಾರ ರಚಿಸುವ ಅವಕಾಶದಿಂದ ಬಹುದೂರ ಉಳಿದಿದೆ.
40 ಮಂದಿ ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 2 ಶಾಸಕರನ್ನು ಸೇರಿಸಿಕೊಂಡು ಬಿಜೆಪಿ 16 ಮಂದಿ ಶಾಸಕರನ್ನು ಹೊಂದಿದೆ. ಗೋವಾ ಫಾರ್ವರ್ಡ್ ಪಕ್ಷ ಹಾಗೂ ಎಂಜಿಪಿಯ ತಲಾ ಮೂವರು ಹಾಗೂ 3 ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 25 ಸಂಖ್ಯಾ ಬಲ ಪಡೆದು ಮನೋಹರ್ ಪರಿಕ್ಕಾರ್ ಅವರು ಸರ್ಕಾರ ಸುಭದ್ರವಾಗಿದೆ.

ನಾಯಕತ್ವದ ಬದಲಾವಣೆ ಕೂಗು
ಮನೋಹರ್ ಪರಿಕ್ಕಾರ್ ಅವರು ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಿದ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗೋವಾದಲ್ಲಿ ನಾಯಕತ್ವ ಬದಲಿ ಮಾಡಲು ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನ ತೊರೆಯಲು ಮನೋಹರ್ ಪರಿಕ್ಕರ್ ಮುಂದಾಗಿ, ತಮ್ಮ ಇಚ್ಛೆಯನ್ನು ಹೈಕಮಾಂಡ್ ಗೆ ತಿಳಿಸಿದ್ದರು. ಆದರೆ, ಅವರ ಮನವಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಗೋವಾ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಹೇಳಿ, ಮನೋಹರ ಪರಿಕ್ಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ವತಃ ಅಮಿತ್ ಶಾ ಸ್ಪಷ್ಟಪಡಿಸಿದ್ದರು.

ಮನೋಹರ್ ಬಗ್ಗೆ ಬಿಜೆಪಿಗೆ ಭಯ
ಮನೋಹರ್ ಬಗ್ಗೆ ಬಿಜೆಪಿಗೆ ಭಯ: ಮನೋಹರ್ ಪರಿಕ್ಕಾರ್ ಅವರನ್ನು ಗೋವಾ ಸಿಎಂ ಸ್ಥಾನದಿಂದ ಕೆಳಗಿಸಿದರೆ, ಬಿಜೆಪಿಗೆ ಇಲ್ಲಿನ ಸರ್ಕಾರ ಕುಸಿಯುವ ಭೀತಿ ಇದೆ. ಅಲ್ಲದೆ, ಆನಂತರ ಮನೋಹರ್ ಅವರು ರಫೆಲ್ ಒಪ್ಪಂದ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಹೊರ ಹಾಕಬಹುದು. ಇದೆಲ್ಲವೂ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ, ಅವರೇ ಕೇಳಿಕೊಂಡರೂ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಗೋವಾ ಕಾಂಗ್ರೆಸ್ನ ಹಿರಿಯ ನಾಯಕ, ನಾಲ್ಕು ಬಾರಿ ಗೋವಾದ ಸಿಎಂ ಆಗಿದ್ದ ಪ್ರತಾಪ್ ಸಿಂಗ್ರಾವ್ ರಾಣೆ ಅವರ ಪುತ್ರ ವಿಶ್ವಜಿತ್ ರಾಣೆ. ಮನೋಹರ್ ಅವರ ಸಚಿವ ಸಂಪುಟದಲ್ಲಿ ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದಾರೆ.












Click it and Unblock the Notifications