Mumbai: ವಿಶಾಖಪಟ್ಟಣಂ- ಮುಂಬೈ ವಿಮಾನ ಲ್ಯಾಂಡಿಂಗ್ ವೇಳೆ ಸ್ಕಿಡ್, ಅಪಘಾತ
ಬೆಂಗಳೂರು, ಸೆಪ್ಟಂಬರ್ 14: ಮಹಾರಾಷ್ಟ್ರ ರಾಜ್ಯದ ಮುಂಬೈ ಮಹಾನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಿಂದ ಖಾಸಗಿ ಜೆಟ್ನೊಂದು ಪಲ್ಟಿಯಾದ ಘಟನೆ ಗುರುವಾರ ಸಂಜೆ ಜರುಗಿದೆ.
ಘಟನೆ ನಡೆದ ಬಳಿಕ ವಿಮಾನ ನಿಲ್ದಾಣದ ಇನ್ನಿತರ ವಿಮಾನಗಳ ಕಾರ್ಯಾಚರಣೆಗೆ ಧಕ್ಕೆ ಉಂಟಾಯಿತು. ಲ್ಯಾಂಡಿಂಗ್ ವೇಳೆ ವಿಮಾನ ಸುಸೂತ್ರವಾಗಿ ಇಳಿಯದೇ ಸ್ಕಿಡ್ ಆದ ಹಿನ್ನೆಲೆಯಲ್ಲಿ ಕೂಡಲೇ ವಿಮಾನ ನಿಲ್ದಾಣದಲ್ಲಿ ತುರ್ತು ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಯಿತು. ಪ್ರಯಾಣಿಕರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸದ್ಯಕ್ಕೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಎಎನ್ಐ ವರದಿ ಮಾಡಿದೆ.

ಮುಂಬೈ ಅಗ್ನಿಶಾಮಕ ದಳ ಮತ್ತು ಏರ್ಪೋರ್ಟ್ ಡೂಡಿ ಆಫೀಸರ್ ನೀಡಿದ ಮಾಹಿತಿ ಪ್ರಕಾರ, ದೇಶಿಯ ಸಣ್ಣ ಖಾಸಗಿ ಜೆಟ್ (VT-DBL) ಇದಾಗಿದ್ದು, ಪ್ಲೇನ್ ನಲ್ಲಿ ಆರು ಮಂದಿ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮಾತ್ರ ಇದ್ದರು. ಆಗಸದಿಂದ ಹಾರಿ ಬಂದ ಈ ವಿಮಾನ ರನ್ವೇಗೆ ಇಳಿಯುತ್ತಿದ್ದಂತೆ ಸ್ಕಿಡ್ ಆಗಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು ಎಂದು ಮುಂಬೈನ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.
ವಿಮಾನದಲ್ಲಿ 6 ಪ್ರಯಾಣಿಕರು ಮತ್ತು 2 ಸಿಬ್ಬಂದಿ ಇದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಸಾವು ನೋವುಗಳು ವರದಿ ಆಗಿಲ್ಲ. ಪ್ರತಿಕೂಲ ಹವಾಮಾನ ಮತ್ತು ಕಳಪೆ ಗೋಚರತೆಯಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೀಡಾದ ಈ ವಿಮಾನವು ವಿಶಾಖಪಟ್ಟಣದಿಂದ ಮುಂಬೈಗೆ ಬಂದು ಲ್ಯಾಂಡ್ ಆಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.












Click it and Unblock the Notifications