Tamil Nadu CM: ತಮಿಳುನಾಡಿನಲ್ಲಿ ವಿಜಯ್ ಯುಗಾರಂಭ: ಮಿತ್ರಪಕ್ಷಗಳ ಬೆಂಬಲದೊಂದಿಗೆ 'ದಳಪತಿ' ಸಿಎಂ ಪಟ್ಟಕ್ಕೆ ಕ್ಷಣಗಣನೆ
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ಚೆನ್ನೈನ ರಾಜಭವನಕ್ಕೆ ಆಗಮಿಸಿದ್ದಾರೆ. ತನ್ನ ಚೊಚ್ಚಲ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್ ಅವರ ಟಿವಿಕೆಗೆ ಈಗ ಮಿತ್ರಪಕ್ಷಗಳ ಬೆಂಬಲದೊಂದಿಗೆ ಒಟ್ಟು 121 ಶಾಸಕರ ಬಲ ಲಭಿಸಿದೆ.
ಬೆಂಬಲ ನೀಡಿದ ಪಕ್ಷಗಳು
ಕಾಂಗ್ರೆಸ್ (5 ಶಾಸಕರು), ಸಿಪಿಐ (2), ಸಿಪಿಐ(ಎಂ) (2), ವಿಸಿಕೆ (2) ಮತ್ತು ಐಯುಎಂಎಲ್ (2) ಪಕ್ಷಗಳು ವಿಜಯ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿವೆ. ಇದರಿಂದ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 118 ಆಗಿದ್ದು, ಮೈತ್ರಿಕೂಟದ ಬಲ 121ಕ್ಕೆ ಏರಿರುವುದರಿಂದ ವಿಜಯ್ ಅವರು ಮುಖ್ಯಮಂತ್ರಿಯಾಗುವ ಹಾದಿ ಸ್ಪಷ್ಟವಾಗಿದೆ.

1967ರ ನಂತರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟದ ಹೊರಗಿನ ಪಕ್ಷವೊಂದು ಅಧಿಕಾರ ಹಿಡಿಯುತ್ತಿರುವುದು ಇದೇ ಮೊದಲು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭೇಟಿಗೆ ಸಮಯ ನೀಡಿದ್ದು, ಅದರಂತೆ ವಿಜಯ್ ಅವರು ಶಾಸಕರ ಬೆಂಬಲ ಪತ್ರಗಳೊಂದಿಗೆ ರಾಜಭವನಕ್ಕೆ ತಲುಪಿದ್ದಾರೆ. ಈ ಬೆಳವಣಿಗೆಯೊಂದಿಗೆ ತಮಿಳುನಾಡಿನಲ್ಲಿ ವಿಜಯ್ ಯುಗ ಆರಂಭವಾಗುತ್ತಿದ್ದು, ಶೀಘ್ರದಲ್ಲೇ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೊನೇ ಕ್ಷಣದಲ್ಲಿ ಕೈಹಿಡಿದ ವಿಸಿಕೆ
ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನ ನಡುವೆ ವಿಡುತಲೈ ಚಿರುತ್ತೈಗಳ್ ಕಚ್ಚಿ (ವಿಸಿಕೆ) ಅಧ್ಯಕ್ಷ ತೋಳ್ ತಿರುಮಾವಳವನ್ ಅವರು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ಬೆಂಬಲ ನೀಡುವ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದನ್ನು ತಪ್ಪಿಸಲು ಮತ್ತು ವಿಜಯ್ ಅವರ ಸರ್ಕಾರ ರಚನೆಯ ಹಾದಿಗೆ ತಮ್ಮ ಪಕ್ಷ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬೆಂಬಲವು ಕೇವಲ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಇತರ ಷರತ್ತುಗಳನ್ನು ಒಳಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರವು ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಜೊತೆಗಿನ ಸುದೀರ್ಘ ಚರ್ಚೆಯ ಫಲವಾಗಿದೆ ಎಂದು ತಿರುಮಾವಳವನ್ ವಿವರಿಸಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ರಾಜಕೀಯ ಹಿತದೃಷ್ಟಿಯಿಂದ ಎಡಪಕ್ಷಗಳು ಮತ್ತು ವಿಸಿಕೆ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿವೆ. ಎಡಪಕ್ಷಗಳ ರಾಜ್ಯ ಸಮಿತಿಗಳ ಒಪ್ಪಿಗೆಯ ನಂತರ, ವಿಸಿಕೆಯ ಉನ್ನತ ಮಟ್ಟದ ಸಮಿತಿಯು ಆನ್ಲೈನ್ ಸಮಾಲೋಚನೆಯ ಮೂಲಕ ಈ ಬೆಂಬಲಕ್ಕೆ ಅಧಿಕೃತ ಮುದ್ರೆ ಒತ್ತಿದೆ.
ಈ ಬೆಳವಣಿಗೆಯ ಬಗ್ಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರಿಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದ್ದು, ಅವರು ಈ ನಿರ್ಧಾರಕ್ಕೆ ಶುಭ ಹಾರೈಸಿದ್ದಾರೆ ಎಂದು ತಿರುಮಾವಳವನ್ ಹೇಳಿದ್ದಾರೆ. ವಿಜಯ್ ಅವರು ಇಂದು ತಮ್ಮನ್ನು ಭೇಟಿಯಾಗಲು ಬಯಸಿದ್ದರೂ, ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಭೇಟಿಯಾಗೋಣ ಎಂದು ಅವರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲು ಇದ್ದ ಎಲ್ಲಾ ರಾಜಕೀಯ ಅಡೆತಡೆಗಳು ನಿವಾರಣೆಯಾದಂತಾಗಿದೆ.













Click it and Unblock the Notifications