ಸಂಪರ್ಕಕ್ಕೆ ಸಿಗದ ವಿಜಯ್ ಮಲ್ಯ; ಕೇಸ್ನಿಂದ ಮುಕ್ತಿ ನೀಡಿ ಎಂದ ವಕೀಲ!
ನವದೆಹಲಿ, ನ.03 : ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ಅಜ್ಞಾತವಾಗಿದ್ದಾರೆ ಎಂದು ವಿಜಯ್ ಮಲ್ಯ ಪರ ವಕೀಲರು ಗುರುವಾರ ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
ವಕೀಲರ ಜೊತೆಗೆ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸದ ಕಾರಣ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ವಿಜಯ್ ಮಲ್ಯ ಪರ ವಕೀಲರು ಗುರುವಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
Breaking: 4 ತಿಂಗಳ ಜೈಲು, 2,000 ದಂಡದ ತೀರ್ಪು, ಮಲ್ಯ ಬೇಸರ!
ಸುಪ್ರೀಂಕೋರ್ಟ್ನಲ್ಲಿ ಮಲ್ಯ ಪರ ವಕೀಲರಾದ ಇಸಿ ಅಗರ್ವಾಲಾ ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ ಪ್ರಕರಣದಿಂದ ಮುಕ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
"ನನ್ನ ಮಾಹಿತಿಯ ಪ್ರಕಾರ, ವಿಜಯ್ ಮಲ್ಯ ಯುನೈಟೆಡ್ ಕಿಂಗ್ಡಂನಲ್ಲಿ ನೆಲೆಸಿದ್ದಾರೆ. ಆದರೆ, ಅವರು ನನ್ನೊಂದಿಗೆ ಸಂವಹನ ನಡೆಸುತ್ತಿಲ್ಲ. ನನ್ನ ಬಳಿ ಅವರ ಇಮೇಲ್ ವಿಳಾಸ ಮಾತ್ರವೇ ಇದೆ. ಅವರ ಜೊತೆಗೆ ಸಂಪರ್ಕವಿಲ್ಲ ಮತ್ತು ಅವರು ಭಾರತದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ನಾನು ಅವರನ್ನು ಪ್ರತಿನಿಧಿಸುವುದರಿಂದ ಮುಕ್ತನಾಗಬೇಕು" ಎಂದು ಪೀಠಕ್ಕೆ ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಪೀಠವು ಪ್ರಕರಣದಿಂದ ಬಿಡುಗಡೆಗೆ ಪ್ರಕ್ರಿಯೆಯನ್ನು ಅನುಸರಿಸಲು ವಕೀಲರಿಗೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ವಿಜಯ್ ಮಲ್ಯ ಅವರ ಇ-ಮೇಲ್ ಐಡಿ ಮತ್ತು ಪ್ರಸ್ತುತ ನಿವಾಸದ ವಿಳಾಸದ ಬಗ್ಗೆ ನ್ಯಾಯಾಲಯದ ನೋಂದಾವಣೆಗೆ ತಿಳಿಸುವಂತೆ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷದ ಜನವರಿಗೆ ನಿಗದಿಪಡಿಸಿದೆ.
ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆಗಾಗಿ ಮಲ್ಯಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಮಲ್ಯ ಭಾರತದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದೆ.