Breaking: ಉಪರಾಷ್ಟ್ರಪತಿ ಚುನಾವಣೆ, ಮಾರ್ಗರೇಟ್ ಆಳ್ವಾ ನಾಮಪತ್ರ
ನವದೆಹಲಿ, ಜುಲೈ 19: ವಿರೋಧ ಪಕ್ಷದ ನಾಯಕರ ಸಮ್ಮುಖದಲ್ಲಿ ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್ ಇತರರು ಉಪಸ್ಥಿತರಿದ್ದರು.
ಆಗಸ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ.
ರಾಜಕೀಯ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮಾರ್ಗರೇಟ್ ಆಳ್ವಾ ರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ಮಹಿಳೆ ಎನಿಸಿದ್ದರು. ಇಂದಿರಾ ಗಾಂಧಿಯ ನಂಬಿಕಸ್ಥೆ ಮಹಿಳೆಯರಲ್ಲಿ ಒಬ್ಬರು. ಕೇಂದ್ರ ಸಚಿವರಾಗಿ, ರಾಜಸ್ಥಾನದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.
ಮಾರ್ಗರೇಟ್ ಆಳ್ವ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರು. 1942, ಏಪ್ರಿಲ್ 14ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ಜನ್ಮ ಹೆಸರು ಮಾರ್ಗರೇಟ್ ನಜರೆತ್. ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ. ಬೆಂಗಳೂರು ವಿವಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇವರ ಸಾಮಾಜಿಕ ಕೈಂಕರ್ಯಗಳಿಗೆ ವಕೀಲಿಕೆ ವೃತ್ತಿ ಪೂರಕವಾಗಿ ನಿಂತಿತು.
ವಕೀಲಿಕೆ ಓದಿದ ಮಾರ್ಗರೇಟ್ ಆಳ್ವ ರಾಜಕೀಯಕ್ಕೆ ಬಂದದ್ದು ಮದುವೆ ಬಳಿಕ. ಇವರ ಪತಿ ನಿರಂಜನ್ ಆಳ್ವ ರಾಜಕೀಯ ಕುಟುಂಬಕ್ಕೆ ಸೇರಿದವರು. ನಿರಂಜನ್ ತಂದೆ ಜೋಚಿಮ್ ಆಳ್ವ ಮತ್ತು ತಾಯಿ ವಯಲೆಟ್ ಆಳ್ವ ಇಬ್ಬರೂ ಕಾಂಗ್ರೆಸ್ ಸಂಸದರಾಗಿದ್ದವರು. ವಯಲೆಟ್ ಆಳ್ವ ರಾಜ್ಯಸಭಾ ಸ್ಪೀಕರ್ ಕೂಡ ಆಗಿದ್ದರು. ಜೋಚಿಮ್ ಆಳ್ವ ಪ್ರಭಾವದಿಂದ 1969ರಲ್ಲಿ ಮಾರ್ಗರೆಟ್ ಆಳ್ವ ರಾಜಕೀಯ ಪ್ರವೇಶಿಸಿದರು.
Recommended Video
ಉಪ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಜಗದೀಪ್ ಧನ್ಕರ್. ಸೋಮವಾರ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು.