ಆರ್ಎಸ್ಎಸ್ ಕಾರ್ಯಕ್ರಮದಿಂದ ಅನಪೇಕ್ಷಿತ ಅಂತರ: ಮೊಯಿಲಿ
ನವದೆಹಲಿ, ಜೂನ್ 4: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾಗವಹಿಸುವುದರಿಂದ ದೇಶದಲ್ಲಿ ಅನಪೇಕ್ಷಿತ ಅಂತರ ಉಂಟಾಗಲಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಸೋಮವಾರ ಹೇಳಿದರು.
ಆರ್ಎಸ್ಎಸ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ದೇಶಕ್ಕೆ ಅಪೇಕ್ಷಿತವಲ್ಲದ ಅಂತರವನ್ನು ಸೃಷ್ಟಿಸಲಿದೆ ಎಂದು ಮೊಯಿಲಿ ಅಭಿಪ್ರಾಯಪಟ್ಟರು.
ಆರ್ಎಸ್ಎಸ್ನ ಕೇಂದ್ರ ಕಚೇರಿ ನಾಗಪುರದಲ್ಲಿ ಜೂನ್ 7ರಂದು ಸಂಘಟನೆಯ ಕಾರ್ಯಕರ್ತರ ತರಬೇತಿಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಸಮಾರಂಭಕ್ಕೆ ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ಸಿಗ ಪ್ರಣವ್ ಮುಖರ್ಜಿ ಅವರನ್ನು ಆರ್ಎಸ್ಎಸ್ ಆಹ್ವಾನಿಸಿತ್ತು. ಆರ್ಎಸ್ಎಸ್ ಆಮಂತ್ರಣವನ್ನು ಒಪ್ಪಿಕೊಂಡಿರುವ ಪ್ರಣವ್, ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ.
ಆದರೆ, ಇದು ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟುಮಾಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕಾಂಗ್ರೆಸ್ನ ಅನೇಕ ಮುಖಂಡರು ಪ್ರಣವ್ ಮುಖರ್ಜಿ ಅವರಿಗೆ ಒತ್ತಾಯಿಸಿದ್ದಾರೆ.
ಮಹಾತ್ಮ ಗಾಂಧಿ, ಮಾಜಿ ರಾಷ್ಟ್ರಪತಿ ಝಾಕಿರ್ ಹುಸೇನ್, ಜಯಪ್ರಕಾಶ್ ನಾರಾಯಣ್, ಸೇನಾ ಮುಖ್ಯಸ್ಥರಾಗಿದ್ದ ಕೆ.ಎಂ. ಕಾರಿಯಪ್ಪ ಅವರು ಈ ಹಿಂದೆ ಆರ್ಎಸ್ಎಸ್ ಆಯೋಜಿಸಿದ್ದ ವಿವಿಧ ಸಮಾರಂಭಗಳಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.












Click it and Unblock the Notifications