Vande Bharat Express Accident: ವಂದೇ ಭಾರತ್ ರೈಲು ಡಿಕ್ಕಿಗೆ ತಾಯಿ ಇಬ್ಬರು ಮಕ್ಕಳು ಸಾವು
Vande Bharat Express Accident: ಮೀರತ್, ಅಕ್ಟೋಬರ್ 30: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹರಿದು 40 ವರ್ಷದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಈ ಕುರಿತು ಪೊಲೀಸರು ಅಧಿಕೃತ ಮಾಹಿತಿ ತಿಳಿಸಿದ್ದಾರೆ.
ಮೃತ ದುರ್ದೈವಿಗಳು ಕಾಸಂಪುರ್ ಬಳಿಯ ಮಾನವಸಹಿತ ಲೆವೆಲ್ ಕ್ರಾಸಿಂಗ್ನ ಗೇಟ್ಗಳನ್ನು ದಾಟುವ ವೇಳೆ ಈ ರೈಲ್ವೆ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ಈ ಮೂವರು ವಂದೇ ಭಾರತ್ ರೈಲಿಗೆ ಸಿಲುಕಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಕುಮಾರ್ ಸಿಂಗ್ ತಿಳಿಸಿದರು.

ಇಲ್ಲಿನ ಕಂಕರಖೇರಾ ನಿವಾಸಿ ನರೇಶ್ ಅವರು ಬಂಡಿಯನ್ನು ಎಳೆದುಕೊಂಡು (ಕೈಯಿಂದ ಎಳೆಯುಬಹುದಾದ ಮೂರು ಚಕ್ರದ ಬಂಡಿ-ಸೈಕಲ್) ಹೊರಟಿದ್ದರು. ಈ ವೇಳೆ ಅವರ ಪತ್ನಿ ಮೃತರಾದ 40 ವರ್ಷ ಮೋನಾ ಎಂಬುವವರು ಮತ್ತವರ ಪುತ್ರಿಯರಾದ ಮನೀಶಾ (14) ಮತ್ತು ಚಾರು (7) ಕುಳಿತಿದ್ದರು. ಇವರೆಲ್ಲಿ ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಬಡ ಕುಟುಂಬ ಎಂದು ತಿಳಿದು ಬಂದಿದೆ.
ರೈಲ್ವೆ ಕ್ರಾಸಿಂಗ್ ದಾಟುವಾಗ ಘಟನೆ
ಕಾಸಂಪುರದಲ್ಲಿ ಮಾನವಸಹಿತ ರೈಲ್ವೇ ಕ್ರಾಸಿಂಗ್ ಇದ್ದು, ಅದನ್ನು ಈ ಕುಟುಂಬ ದಾಟಬೇಕಿತ್ತು. ಆಗ ಪತಿ ನರೇಶ್ ರೈಲ್ವೇ ಗೇಟ್ ಕೆಳಗೆ ಚಲಿಸಿ ರೈಲು ಹಳಿ ದಾಟುತ್ತಿದ್ದರು. ಅರೆಕ್ಷಣದಲ್ಲೇ ಬಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಂಡಿಯಲ್ಲಿ ಹಿಂದೆ ಕುಳಿತಿದ್ದ ಮೋನಾ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.
ಘಟನೆಯ ವೇಳೆ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಅಂತಲೂ ಹೇಳಲಾಗುತ್ತಿದೆ. ಇದು ಕೇವಲ ಒಂದು ಸೆಕೆಂಡಿನಲ್ಲಿ ನಡೆದ ಅಪಘಾತವಾಗಿದೆ. ಇಂತಹ ಭಯಾನಕ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಈ ವಂದೇ ಭಾರತ್ ರೈಲು ದೆಹಲಿಯಿಂದ ಡೆಹ್ರಾಡೂನ್ಗೆ ಹೋಗುತ್ತಿತ್ತು. ಗೇಟ್ ಮುಚ್ಚಿರುವುದನ್ನು ಕಂಡರೂ ಸಹಿತ ರೈಲ್ವೆ ಹಳಿ ದಾಟಲು ಯತ್ನಿಸಿದ್ದರಿಂದ ಘಟನೆ ನಡೆದಿದೆ ಎಂದು ಮೀರತ್ನ ಜಿಆರ್ಪಿ ಪೊಲೀಸ್ ಠಾಣೆಯ ವಿನೋದ್ ಕುಮಾರ್ ವಿವರಿಸಿದ್ದಾರೆ.












Click it and Unblock the Notifications