ವೈಶಾಲಿ ಟಕ್ಕರ್ ಪ್ರಕರಣ; ಮಾಜಿ ಪ್ರಿಯಕರನ ಮೊಬೈಲ್ ಚಾಟ್ ಡಿಲೀಟ್
ಇಂದೋರ್, ಅಕ್ಟೋಬರ್ 28: ಇಂದೋರ್ನಲ್ಲಿ ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಪ್ರಿಯಕರ ರಾಹುಲ್ ನವಲಾನಿ 8 ದಿನಗಳ ಪೊಲೀಸ್ ಕಸ್ಟಡಿಯ ಅವಧಿಯು ಶುಕ್ರವಾರ ಕೊನೆಗೊಂಡಿದೆ. ಆದರೆ, ಇದಾದ ನಂತರ ಸ್ಥಳೀಯ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿತು. ಪ್ರಾಸಿಕ್ಯೂಷನ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ.
ವೈಶಾಲಿ ಠಕ್ಕರ್ಗೆ ಕಿರುಕುಳ ನೀಡುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನವಲಾನಿ ವಿರುದ್ಧ "ಸಾಕಷ್ಟು ಪುರಾವೆಗಳು" ತಮ್ಮ ಬಳಿ ಇವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ಪ್ರಮುಖ ಆರೋಪಿಯ ಮೊಬೈಲ್ನಿಂದ ಅಳಿಸಲಾದ ಡೇಟಾವನ್ನು ಹಿಂಪಡೆಯಲು ತನಿಖಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಮೋತಿ-ಉರ್-ರೆಹಮಾನ್, "ನವಲಾನಿ ವಿರುದ್ಧ ವೈಶಾಲಿ ಆತ್ಮಹತ್ಯೆ ಡೇತ್ನೋಟ್, ಅವರ ಕುಟುಂಬ ಸದಸ್ಯರ ಹೇಳಿಕೆಗಳು ಮತ್ತು ಇತರ ಮೂಲಗಳಿಂದ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಆದಷ್ಟು ಬೇಗ ಅವರ ವಿರುದ್ಧದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ಚಾಟಿಂಗ್ ಡೇಟಾ; ಎಸಿಪಿ ಪ್ರಕಾರ, ಅಕ್ಟೋಬರ್ 19ರಂದು ಬಂಧಿಸುವ ಮೊದಲು, ಸಾಕ್ಷ್ಯವನ್ನು ನಾಶಮಾಡಲು ನವಲಾನಿ ತನ್ನ ಮೊಬೈಲ್ ಫೋನ್ನಲ್ಲಿದ್ದ ಚಾಟಿಂಗ್ ಡೇಟಾವನ್ನು ಅಳಿಸಿ ಹಾಕಿದ್ದನು. "ತಾಂತ್ರಿಕ ತಜ್ಞರ ಸಹಾಯದಿಂದ ನಾವು ಈ ಡೇಟಾವನ್ನು ಪಡೆಯುತ್ತಿದ್ದೇವೆ. ಹೆಚ್ಚುವರಿ ಪುರಾವೆಗಳಿಗಾಗಿ ನಾವು ವಿವಿಧ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ಗಳಿಂದ ಡೇಟಾವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ." ಟಕ್ಕರ್ ಮತ್ತು ನವಲಾನಿ ಇಂದೋರ್ನಲ್ಲಿ ನೆರೆಹೊರೆಯವರು ಎಂದು ಅಧಿಕಾರಿ ಹೇಳಿದರು.
"ಟಕ್ಕರ್ ಒಬ್ಬ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಸಂತೋಷದ ಜೀವನಕ್ಕೆ ಕಾಲಿಡಲಿದ್ದರು. ಈಗಾಗಲೇ ಮದುವೆಯಾಗಿರುವ ನವಲಾನಿ ಕಿರುತೆರೆ ನಟಿಯ ಮದುವೆ ನಿಲ್ಲಿಸುವಂತೆ ಕಿರುಕುಳ ನೀಡುತ್ತಿದ್ದನು,'' ಎಂದು ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
"ಸಸುರಲ್ ಸಿಮಾರ್ ಕಾ" ದಂತಹ ಟಿವಿ ಧಾರಾವಾಹಿಗಳಲ್ಲಿನ ಅಭಿನಯಕ್ಕಾಗಿ ವೈಶಾಲಿ ಟಕ್ಕರ್ ಅಕ್ಟೋಬರ್ 15ರಂದು ಇಂದೋರ್ನಲ್ಲಿರುವ ತಮ್ಮ ಮನೆಯ ಫ್ಯಾನ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನವಲಾನಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಟಕ್ಕರ್ ಆರೋಪಿಸಿರುವ ಐದು ಪುಟಗಳ ಆತ್ಮಹತ್ಯೆ ಪತ್ರವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಕಿರುತೆರೆ ನಟಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ನವಲಾನಿ ಪತ್ನಿ ದಿಶಾಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.