ಇಷ್ಟು ಗಂಭೀರ ವಿಷಯ ನಿಮಗೆ ಉತ್ಸವದಂತೆ ಕಾಣುತ್ತಿದೆಯಾ?; ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 9: ಕೊರೊನಾ ಸೋಂಕಿನ ಲಸಿಕೆ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಬೇಕಿದೆ. ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೂ ಲಸಿಕೆ ಉತ್ಸವವನ್ನು ನಡೆಸಲಾಗುತ್ತದೆ ಎಂದು ಪ್ರಧಾನಿ ಮೋದಿ ಗುರುವಾರ ಘೋಷಣೆ ಮಾಡಿದ್ದು, ಈ ಪದಬಳಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ.
ಲಸಿಕೆ ಕೊರತೆ ಎಂಬುದು ಗಂಭೀರ ವಿಚಾರ ಇದು ಉತ್ಸವವಲ್ಲ ಎಂದು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದೆ. ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ತೀವ್ರ ಅಭಾವ ಉಂಟಾಗಿದೆ. ಇಂಥ ಸಮಯದಲ್ಲಿ ಮೋದಿಯವರು ಲಸಿಕೆ ಉತ್ಸವ ನಡೆಸುವ ಹುಮ್ಮಸ್ಸು ತೋರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಮುಂದೆ ಓದಿ...

"ಕೇಂದ್ರ ನಿಷ್ಪಕ್ಷಪಾತವಾಗಿ ಲಸಿಕೆ ನೀಡಬೇಕು"
ಕೊರೊನಾ ಲಸಿಕೆ ವಿತರಣೆಯಲ್ಲಿ ಪಕ್ಷಪಾತ ನಡೆಯುತ್ತಿದೆ. ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಕೊರೊನಾ ಲಸಿಕೆಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಕೇಂದ್ರದ ವಿರುದ್ಧ ಆರೋಪಿಸಿದೆ. ಇದರ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ನಿಷ್ಪಕ್ಷಪಾತವಾಗಿ ಲಸಿಕೆಗಳನ್ನು ನೀಡಬೇಕು. ಈ ಸೋಂಕನ್ನು ಸೋಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ಅಭಾವ ನಿಮಗೆ ಉತ್ಸವವೇ?
ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವ ಎದುರಾಗಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ದೇಶಕ್ಕೇ ಗಂಭೀರ ಪರಿಸ್ಥಿತಿ. ಆದರೆ ಇಂಥ ಸಮಯದಲ್ಲಿಯೂ ಮೋದಿ ಅವರು ಲಸಿಕೆಯನ್ನು ಉತ್ಸವ ಎನ್ನುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಏಪ್ರಿಲ್ 11-14ರವರೆಗೂ ಲಸಿಕೆ ಉತ್ಸವ ಎಂದಿದ್ದ ಮೋದಿ
ಕೊರೊನಾ ವೈರಸ್ ಲಸಿಕೆ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಬೇಕಿದೆ. ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೂ ಲಸಿಕೆ ಉತ್ಸವವನ್ನು ನಡೆಸಲಾಗುತ್ತದೆ. ನಾಲ್ಕು ದಿನಗಳಲ್ಲಿ ಅತಿಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಬೇಕಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು. ಆ ಮೂಲಕ ಲಸಿಕೆಯು ವ್ಯರ್ಥವಾಗುವುದನ್ನು ತಡೆಯೋಣ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು.

ನಾಲ್ಕನೇ ಬಾರಿ ಲಕ್ಷದ ಗಡಿ ದಾಟಿದ ಕೊರೊನಾ
ನಿರಂತರ ಮೂರನೇ ದಿನ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1,31,968 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ 61,899 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 1,19,13,292 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 780 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಸೋಂಕಿನಿಂದ 1,67,642 ಮರಣ ಪ್ರಕರಣ ದಾಖಲಾಗಿದೆ.












Click it and Unblock the Notifications