ಉತ್ತರಾಖಂಡ ಹಿಮನದಿ ಸ್ಫೋಟ; ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿದ್ದರ ಫಲ...
ಡೆಹ್ರಾಡೂನ್, ಫೆಬ್ರುವರಿ 08: ಮಾನವನ ಪರಿಸರ ವಿರೋಧಿ ಚಟುವಟಿಕೆಗಳಿಗೆ ಪ್ರಕೃತಿ ಆಗಾಗ್ಗೆ ಉತ್ತರಗಳನ್ನು ಕೊಡುತ್ತಲೇ ಬಂದಿದೆ. ಭಾನುವಾರ ಸಂಭವಿಸಿದ ಉತ್ತರಾಖಂಡ ಹಿಮನದಿ ಸ್ಫೋಟಕ್ಕೂ ಮಾನವನ ಇಂಥ ಕೆಲ ಕೆಲಸಗಳೇ ಕಾರಣ ಎನ್ನಲಾಗಿದ್ದು, ಮತ್ತೊಮ್ಮೆ ಪ್ರಕೃತಿಯ ರುದ್ರ ರೂಪವನ್ನು ತೋರುವಂತೆ ಮಾಡಿದೆ.
ಉತ್ತರಾಖಂಡ ಚಮೋಲಿ ಜಿಲ್ಲೆಯ ಜೋಶಿಮಠ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಹಿಮನದಿ ಸ್ಫೋಟದಿಂದ ಅಲಕ್ ನಂದ್, ದೌಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದುವರೆಗೂ 14 ಮಂದಿ ಮೃತಪಟ್ಟಿದ್ದಾರೆ. 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ತಂಡವು ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಇದು ಕೇವಲ ಪ್ರಾಕೃತಿಕ ವಿಕೋಪವಲ್ಲ. ಈ ಅನಾಹುತದ ಹಿಂದೆ ಮಾನವನ ಪ್ರೇರೇಪಣೆಯೂ ಇದೆ ಎನ್ನಲಾಗುತ್ತಿದೆ. ಮುಂದೆ ಓದಿ...

ಪರ್ವತಗಳನ್ನು ಕೊರೆಯುವ ಕೆಲಸ ತಂದ ಆಪತ್ತು
ಹಿಮ ಪರ್ವತಗಳ ಸಮೀಪ ಕಲ್ಲು ಕ್ವಾರಿ ಕೈಗೊಳ್ಳುವುದು, ಪರ್ವತಗಳನ್ನು ಕೊರೆಯುವುದು ಹಾಗೂ ಪರ್ವತಗಳ ಬುಡದಲ್ಲಿ ಸುರಂಗಗಳನ್ನು ಕೊರೆಯುವುದು ಇನ್ನೂ ನಿಂತಿಲ್ಲ. ಈ ಕಾರ್ಯಗಳೇ ಪ್ರಕೃತಿ ವಿಕೋಪ ಸಂಭವಿಸಲು ಪರೋಕ್ಷವಾಗಿ ಕಾರಣವಾಗಿದೆ. ರಿಷಿ ಗಂಗಾ ಹಾಗೂ ದೌಲಿ ಗಂಗಾ ನದಿಗೆ ಎರಡು ಅಣೆಕಟ್ಟುಗಳನ್ನು ಕಟ್ಟಿರುವುದು ಸ್ಥಳೀಯ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎನ್ನಲಾಗಿದೆ.

ತಜ್ಞರು ಎಚ್ಚರಿಕೆ ಕೊಟ್ಟಿದ್ದರೂ ನಿರ್ಮಾಣವಾದ ಅಣೆಕಟ್ಟುಗಳು
ಪರಿಸರ ನಾಶ ಮಾಡಿದರೆ ಪ್ರಕೃತಿಯೂ ಯಾವ ರೂಪದಲ್ಲಿಯಾದರೂ ಅದನ್ನು ತಿರುಗಿ ನೀಡುತ್ತದೆ ಎಂಬುದಕ್ಕೆ ಇದು ಒಳ್ಳೆ ಉದಾಹರಣೆ. ರಿಷಿ ಗಂಗಾ ಹಾಗೂ ದೌಲಿ ಗಂಗಾ ನದಿಗೆ ಅಣೆಕಟ್ಟು ನಿರ್ಮಿಸಿದರೆ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ಈ ಹಿಂದೆ ತಜ್ಞರು ಎಚ್ಚರಿಕೆ ಕೊಟ್ಟಿದ್ದರೂ ಈ ಯೋಜನೆಗಳನ್ನು ಕೈಗೊಂಡಿದ್ದು ಈ ಅವಘಡ ನಡೆಯಲು ಕಾರಣವಿರಬಹುದು ಎನ್ನಲಾಗಿದೆ.

ಕಠ್ಮಂಡು ಪರ್ವತ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರದ ವರದಿ
ಪರಿಸರದಲ್ಲಿನ ಬದಲಾವಣೆ ಹಿಮನದಿಗಳು ಸ್ಫೋಟಿಸಲು ಕಾರಣ ಎನ್ನಲಾಗಿದೆ. ಆದರೆ ಪರಿಸರ ಬದಲಾವಣೆಗೆ ಮಾನವನ ಇಂಥ ಅಭಿವೃದ್ಧಿ ಚಟುವಟಿಕೆಗಳು ಕಾರಣವಾಗಿವೆ. ಕಠ್ಮಂಡು ಮೂಲದ ಪರ್ವತ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರದ ಹೊಸ ವರದಿಯ ಪ್ರಕಾರ, ಪ್ಯಾರಿಸ್ ಹವಾಮಾನ ಮಾಹಿತಿಯಂತೆ, ವಿಶ್ವವು 1.5 ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ಕಾಯ್ದುಕೊಂಡಿದ್ದೇ ಆದರೆ, 2100ರ ಕೊನೆಗೆ ಹಿಂದೂ ಕುಷ್ ಹಿಮಾಲಯನ್ ಪ್ರದೇಶದ 36% ಹಿಮಪರ್ವತಗಳು ಕರಗುತ್ತವೆ ಎನ್ನಲಾಗಿದೆ. ಸದ್ಯಕ್ಕೆ ಅವಘಡ ಸಂಭವಿಸಿರುವ ಪ್ರದೇಶವು ಹಿಂದೂ ಕುಷ್ ಹಿಮಾಲಯನ್ ಪ್ರದೇಶದ ವ್ಯಾಪ್ತಿಗೆ ಒಳಪಡದೇ ಇದ್ದರೂ, ಉತ್ತರಾಖಂಡ ಹಾಗೂ ಚೀನಾದ ಮೇಲ್ಭಾಗದಿಂದ ಹಿಮಪರ್ವತಗಳು ಭವಿಷ್ಯದಲ್ಲಿ ಕರಗುವ ಕುರಿತು ವಿವಿಧ ಅಧ್ಯಯನಗಳು ಎಚ್ಚರಿಕೆ ನೀಡಿವೆ.

ಹಿಮಪರ್ವತಗಳು ಕರಗುತ್ತಿರುವ ಪ್ರಮಾಣ ಹೆಚ್ಚಾಗಿದೆ
ಈ ಶತಮಾನದ ಮೊದಲ 20 ವರ್ಷಗಳಲ್ಲಿ ಚಾಮೋಲಿ ನದಿಯಿರುವ ಮಧ್ಯ ಹಿಮಾಲಯ ಪ್ರದೇಶದಲ್ಲಿನ ಹಿಮಪರ್ವತಗಳು ಕರಗಿ ಹರಿಯುವ ಪ್ರಮಾಣ ಹೆಚ್ಚಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. 1975ರಿಂದ 2000ರವರೆಗೆ ಹೋಲಿಸಿದರೆ 2000ನೇ ಇಸವಿ ನಂತರ ಹಿಮಪರ್ವತಗಳ ಕರಗುವಿಕೆ ಪ್ರಮಾಣ ಹೆಚ್ಚಿದೆ ಎಂದು 2019ರಲ್ಲಿ ಸೈನ್ಸ್ ಅಡ್ವಾನ್ಸಸ್ ನಲ್ಲಿನ ಅಧ್ಯಯನವೊಂದು ತಿಳಿಸಿದೆ. ಇದರಿಂದ ಗಂಗಾ ನದಿ ತಟದಲ್ಲಿ ವಾಸಿಸುತ್ತಿರುವ, ಉತ್ತರಾಖಂಡದಿಂದ ಬಾಂಗ್ಲಾದೇಶದವರೆಗಿನ ಸುಮಾರು 600 ಮಿಲಿಯನ್ ಮಂದಿಯ ಜೀವನಕ್ಕೆ ಸಂಕಷ್ಟ ಬರಲಿದೆ ಎಂದು ಎಚ್ಚರಿಕೆಯನ್ನೂ ಅಧ್ಯಯನದಲ್ಲಿ ನೀಡಲಾಗಿದೆ.

ಎಚ್ಚರಿಕೆ ನೀಡಿದ್ದರೂ ಯೋಜನೆಗಳು ನಿಲ್ಲಲಿಲ್ಲ
ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳ ಕುರಿತು ಎಚ್ಚರಿಕೆ ನೀಡಿದ್ದರೂ ಪರಿಸರದ ನೀತಿ ನಿಯಮಗಳನ್ನು ನಿರ್ಲಕ್ಷ್ಯ ಮಾಡಿ ಜಲ ಯೋಜನೆಯ ಅಣೆಕಟ್ಟುಗಳನ್ನು ಹಾಗೂ ಚಾರ್ ಧಾಮ್ ರಸ್ತೆ ಯೋಜನೆಗಳಂಥ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಪರಿಸರದ ಮೇಲಿನ ಪರಿಣಾಮವನ್ನು ಕಡೆಗಣಿಸಿದ್ದು ದೊಡ್ಡ ಮಟ್ಟದಲ್ಲಿ ಅವಘಡ ಸಂಭವಿಸಲು ಕಾರಣ ಎನ್ನಲಾಗಿದೆ. ರಿಷಿ ಗಂಗಾ ತಟದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ವಿರುದ್ಧ ಮೇ 2019ರಲ್ಲಿಯೇ ಉತ್ತರಾಖಂಡ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿನ ಕೆಲವು ಆಪಾದನೆಗಳು ನಿಜವೂ ಆಗಿತ್ತು. ಆದರೆ ಇದರೆಡೆಗೆ ಲಕ್ಷ್ಯ ವಹಿಸಿದ್ದು ಮಾತ್ರ ಕಾಣಲಿಲ್ಲ.

54 ಅಣೆಕಟ್ಟುಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ
ಗಂಗಾ ನದಿ ಪೋಷಿಸುವ ಹಲವು ಉಪನದಿಗಳ ಮೂಲವಾದ ಉತ್ತರಾಖಂಡದ ಮೇಲ್ಭಾಗದಲ್ಲಿ ಈಗಾಗಲೇ 16 ಅಣೆಕಟ್ಟುಗಳಿವೆ ಹಾಗೂ ಇನ್ನೂ 13 ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ. ಅಷ್ಟೆ ಅಲ್ಲದೇ ಈ ನದಿಗಳ ಜಲ ಇಂಧನ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಇನ್ನೂ 54 ಅಣೆಕಟ್ಟುಗಳ ನಿರ್ಮಾಣಕ್ಕೆ ಪ್ರಸ್ತಾಪ ಇಟ್ಟಿದೆ. ದೌಲಿ ಗಂಗಾ ನದಿಯಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ತಪೋವನ ಯೋಜನೆಗೆ ಹೆಚ್ಚುವರಿ ಎಂಟು ಹೊಸ ಜಲಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಹಿಮಾಲಯದಂಥ ಪರ್ವತಗಳಲ್ಲಿ ಅಣೆಕಟ್ಟುಗಳಿಗಾಗಿ ಪರ್ವತಗಳ ಕೊರೆಯುವಿಕೆ ಹಸಿರು ಹೊದಿಕೆ ಮೇಲೆ ಇನ್ನೆಂದೂ ಸರಿಪಡಿಸಲಾಗದ ಹಾನಿ ಮಾಡುತ್ತಿದೆ ಎಂದು ಭೂವಿಜ್ಞಾನಿಗಳು ಹೇಳುತ್ತಿದ್ದಾರೆ.

ಇನ್ನೆಂದೂ ಸರಿಪಡಿಸದಂಥ ಹಾನಿ
ಅಭಿವೃದ್ಧಿ ಹೆಸರಿನಲ್ಲಿ ಹಿಮಾಲಯದ ಪರಿಸರ ನಾಶವಾಗುತ್ತಿದ್ದು, ಇದಕ್ಕೆ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ದೊಡ್ಡ ವಿಪತ್ತುಗಳು ಸಂಭವಿಸಿರುವುದೇ ಸಾಕ್ಷಿಯಾಗಿದೆ. ಹಿಮಪರ್ವತ ಸ್ಫೋಟದಿಂದ ಇದೇ ರೀತಿ 2013ರಲ್ಲಿ ಜೂನ್ ನಲ್ಲಿ ಕೇದಾರನಾಥ ದೇವಾಲಯಕ್ಕೆ ತೀರ್ಥಯಾತ್ರೆ ಕೈಗೊಂಡಿದ್ದ ಸುಮಾರು 3000 ಜನರು ಸಾವನ್ನಪ್ಪಿದ್ದರು ಹಾಗೂ ಸಾವಿರಾರು ಜನರು ಕಾಣೆಯಾಗಿದ್ದರು. ಚಾಮೋಲಿ ದುರಂತದಲ್ಲಿ ಸುಮಾರು 180 ಮಂದಿ ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. ಇನ್ನಷ್ಟು ದುರಾಸೆಗಳಿಗೆ ಮಾನವ ಮುದಾದರೆ, ಇನ್ನಷ್ಟು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ..
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications