ಮಳೆ ಹೊಡೆತಕ್ಕೆ ಸಿಲುಕಿದ ಬಾಬಾ ರಾಮದೇವ್
ಡೆಡ್ರಾಡೂನ್, ಜು. 16 : ಉತ್ತರಾಖಂಡನಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು, ಚಾರ್ ಧಾಮ್ ಯಾತ್ರಾರ್ಥಿಯಾಗಿರುವ ಯೋಗ ಗುರು ಬಾಬಾ ರಾಮದೇವ್ ಸೇರಿದಂತೆ ಅನೇಕ ಭಕ್ತಾದಿಗಳು ಅಪಾಯಕ್ಕೆ ಸಿಲುಕಿರುವ ಸುದ್ದಿ ಬಂದಿದೆ.
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಯಾತ್ರೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಉತ್ತರಾಖಂಡ್ ಸರ್ಕಾರ ಘೋಷಿಸಿದೆ. ಮಳೆ ಅಬ್ಬರ ಕಡಿಮೆಯಾಗುವವರೆಗೂ ಯಾತ್ರೆ ಕೈಗೊಳ್ಳದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಇದೇ ವೇಳೆ ಋಷಿಕೇಶ್ ಮತ್ತು ಕೇದಾರನಾಥ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು, ಭೂಕುಸಿತವಾದ ಬಗ್ಗೆ ವರದಿಯಾಗಿದೆ.ಎಚ್ಚರಿಕೆ ನೀಡಿದರೂ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಅವರ ಶಿಷ್ಯಂದಿರು ಗಂಗೋತ್ರಿ ನದಿ ತಟದಲ್ಲಿ ಸಿಲುಕಿರುವ ಸುದ್ದಿಯಿದೆ.

ಬಾಬಾ ರಾಮದೇವ್ ಅವರ ಜತೆಯಲ್ಲಿ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತರಕಾಶಿ ಭಾಗದ ಆಚಾರ್ಯ ಕುಲಂ ಎಂಬಲ್ಲಿಗೆ ತೆರಳುತ್ತಿದ್ದಾಗ ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಿದ್ದ ಪಕ್ಷದಲ್ಲಿ ಬಾಬಾ ರಾಮದೇವ್ ಅವರಿಗೂ ಪೊಲೀಸರಿಂದ ರಿಲೀಫ್ ಸಿಗಲಿದೆ ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉತ್ತರಾಖಂಡ್ ನ ಡಿಜಿಪಿ ಬಿ.ಎಸ್. ಸಿದ್ದು ಹೇಳಿದ್ದಾರೆ.
ಇನ್ನೂ 300ಕ್ಕೂ ಅಧಿಕ ಯಾತ್ರಾರ್ಥಿಗಳು ಜೋಶಿ ಮಠದ ಬಳಿ ಸಿಲುಕಿದ್ದು ಬದರಿನಾಥ್ ಅಥವಾ ಇನ್ಯಾವುದೇ ಸುರಕ್ಷಿತ ಸ್ಥಳಕ್ಕೆ ತೆರಳು ಆಗದಂತೆ ಮಳೆ ತಡೆಯೊಡ್ಡಿದೆ.
ಈಗಾಗಲೇ ಮಳೆಯಲ್ಲಿ ಸಿಲುಕಿರುವ ಹಲವಾರು ಭಕ್ತರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ. ಸರಸ್ವತಿ ನದಿಗೆ ಕಟ್ಟಲಾಗಿದ್ದ ಸೇತುವೆಯೊಂದು ಮಳೆಯಲ್ಲಿ ಕೊಚ್ಚಿಹೋಗಿದ್ದು ಸಂಕಷ್ಟದಲ್ಲಿ ಸಿಲುಕಿದ್ದ 164 ಭಕ್ತರನ್ನು ರಕ್ಷಿಸಲಾಗಿದೆ. ಉತ್ತರಖಂಡ ಸರಕಾರ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.












Click it and Unblock the Notifications