ಕುಂಭಮೇಳ: ಉತ್ತರಾಖಂಡದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ?
ಹರಿದ್ವಾರ, ಏಪ್ರಿಲ್ 27: ಉತ್ತರಾಖಂಡದಲ್ಲಿ ಕಳೆದ 25 ದಿನಗಳಿಂದ ಕುಂಭಮೇಳದಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿದೆ.
ಮಾ.31 ರಿಂದ ಏ.24 ವರೆಗೆ ಕುಂಭಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಪರಿಣಾಮವಾಗಿ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆಯಲ್ಲಿಯೂ ಭಾರಿ ಏರಿಕೆ ಕಂಡಿದೆ.
ಕುಂಭಮೇಳಕ್ಕೂ ಮುನ್ನ ಅಥವಾ ಪ್ರಾರಂಭದ ದಿನಗಳಲ್ಲಿ (ಮಾ.31 ರ ವೇಳೆಗೆ) ರಾಜ್ಯದಲ್ಲಿ 1,863 ಸಕ್ರಿಯ ಪ್ರಕರಣಗಳಿತ್ತು. ಆದರೆ ಏ.1 ರಿಂದ ಪ್ರಾರಂಭವಾದ ನಂತರದಲ್ಲಿ, ಏ.24 ರ ವೇಳೆಗೆ ಸಕ್ರಿಯ ಪ್ರಕರಣಗಳು 33,330 ಕ್ಕೆ ಏರಿಕೆಯಾಗಿತ್ತು.

25 ದಿನಗಳಲ್ಲಿ ರಾಜ್ಯದ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇ.1,800 ನಷ್ಟು ಏರಿಕೆ ಕಂಡಿದೆ. ಮುಂದಿನ ತಿಂಗಳು ಚಾರ್ ಧಾಮ್ ಯಾತ್ರೆ ನಿಗದಿಯಾಗಿದ್ದು, ಇದು ಮತ್ತೊಂದು ಕುಂಭಮೇಳವಾಗದಂತೆ ಎಚ್ಚರಿಕೆ ವಹಿಸಿ ಯಾತ್ರೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ.
ಏ.12 ರಂದು 35 ಲಕ್ಷ ಮಂದಿ ಹಾಗೂ ಏ.14 ರಂದು 13.51 ಲಕ್ಷ ಮಂದಿ ಹರಿದ್ವಾರದಲ್ಲಿ ಸೇರಿದ್ದರು. ಸರ್ಕಾರದ ವಕ್ತಾರ ಹಾಗೂ ಸಚಿವ ಸುಬೋಧ್ ಉನಿಯಾಲ್ ಮಾತನಾಡಿ, ಕೋವಿಡ್-19 ಪ್ರಕರಣಗಳು ಹೆಚ್ಚಾಗುವುದಕ್ಕೆ ಪ್ರವಾಸಿಗರೇ ಕಾರಣ, ಕೋವಿಡ್-19 ಸಮಸ್ಯೆ ಶೀಘ್ರವೇ ಬಗೆಹರಿಯುವ ನಿಟ್ಟಿನಲ್ಲಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಂಗಳವಾರದಂದು (ಏ.27 ರಂದು) ಕೊನೆಯ ಶಾಹಿ ಸ್ನಾನ ನಿಗದಿಯಾಗಿದೆ. ಈ ಬಗ್ಗೆ ನಿರಂಜನಿ ಅಖಾಡದ ಮಹಾಂತ್ ರವೀಂದ್ರ ಪುರಿ ಅವರು ಮಾತನಾಡಿದ್ದು, ಶಾಹಿ ಸ್ನಾನ ಕೇವಲ ಸಾಂಕೇತಿಕವಾಗಿ ನಡೆಯಬೇಕೆಂದು ನಾವು ಈಗಾಗಲೇ ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications