ಪತ್ರಕರ್ತರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ ಸಚಿವ
ಪತ್ರಕರ್ತರಿಗೆ ಬೆಂಕಿ ಹಚ್ಚುವುದಾಗಿ ಉತ್ತರಪ್ರದೇಶದ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ.
ಖುಷಿನಗರ (ಉ.ಪ್ರ), ಫೆ 12: ತನ್ನನ್ನು ಬೆಂಬಲಿಸದ ಪತ್ರಕರ್ತರಿಗೆ ಬೆಂಕಿ ಹಚ್ಚುವುದಾಗಿ ಉತ್ತರಪ್ರದೇಶದ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ. ಆದರೆ, ನಾನು ಆ ರೀತಿ ಹೇಳೇ ಇಲ್ಲ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ, ಸಚಿವ ರಾಧೇ ಶ್ಯಾಮ್ ಸಿಂಗ್, ಪ್ರಸಕ್ತ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸದ ಸ್ಥಳೀಯ ಪತ್ರಕರ್ತರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ, ಸಚಿವರು ಬೆದರಿಕೆ ಹಾಕಿರುವ ಮೊಬೈಲ್ ಆಡಿಯೋ ತುಣುಕನ್ನು ಸ್ಥಳೀಯ ಪತ್ರಕರ್ತರು ಜಿಲ್ಲಾ ಸೂಪರಿಡೆಂಟ್ ಆಫ್ ಪೊಲೀಸರಿಗೆ ದೂರಿನೊಂದಿಗೆ ಸಲ್ಲಿಸಿದ್ದಾರೆ.
ಸಚಿವರ ಈ ರೀತಿಯ ಗೂಂಡಾಗಿರಿಯ ವರ್ತನೆ ಇದೇನು ಹೊಸದೇನಲ್ಲ, ಈ ಹಿಂದೆ ಕೂಡಾ ಸರಕಾರೀ ಅಧಿಕಾರಿಗಳನ್ನು ಅವಮಾನಿಸಿದ ಮತ್ತು ಬೆದರಿಕೆ ಹಾಕಿದ ಪ್ರಕರಣಗಳು ಸಚಿವ ರಾಧೇ ಶ್ಯಾಮ್ ಮೇಲೆ ದಾಖಲಾಗಿದ್ದವು.
ಜೂನ್ 2015ರಲ್ಲಿ ಪತ್ರಕರ್ತನೊಬ್ಬನನ್ನು ಬೆಂಕಿ ಹಚ್ಚಿ ಸಾಯಿಸಿದ್ದಕ್ಕಾಗಿ ಸಚಿವ ರಾಮಮೂರ್ತಿ ಸಿಂಗ್ ವರ್ಮಾ ಮತ್ತು ಅವರ ಐವರು ಸಹಚರರ ಮೇಲೆ ಕೇಸ್ ದಾಖಲಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಖುಷಿನಗರದಲ್ಲಿ ಮಾರ್ಚ್ ನಾಲ್ಕರಂದು ಅಸೆಂಬ್ಲಿ ಚುನಾವಣೆ ನಡೆಯಲಿದೆ. (ಚಿತ್ರ: ಎನ್ಡಿಟಿವಿ)