ಅಮೆರಿಕನ್ನರದ್ದು ರಕ್ತ, ಭಾರತೀಯರದ್ದು ಟೊಮ್ಯಾಟೋ ಸಾಸಾ?
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾದ ದ್ವಂದ್ವ ನಿಲುವು ಎಷ್ಟೋ ಬಾರಿ ಸಾಬೀತಾಗಿ ಹೋಗಿದೆ, ರುಜುವಾತೂ ಆಗಿದೆ.
ಶಾಂತಿ ಮಂತ್ರ ಭೋದಿಸುವ ಅಮೆರಿಕ ಉಗ್ರರಿಗೆ ಪರೋಕ್ಷವಾಗಿ ನೀರೆರೆಯುತ್ತಿರುವ ಪಾಕಿಸ್ತಾನಕ್ಕೆ ಆರ್ಥಿಕ, ಶಸ್ತ್ರಾಸ್ತ್ರ ಪೂರೈಕೆ ಒದಗಿಸುತ್ತಲೇ ಬಂದಿವೆ. ಆ ಮೂಲಕ ತನ್ನ ಖಜಾನೆಯನ್ನು ತುಂಬಿಸಿಕೊಂಡು ಬರುತ್ತಲೇ ಇದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೀಡಲಾಗುತ್ತಿರುವ ಭದ್ರತೆಯ ಪರಿಕಂಡು ಇಡೀ ದೇಶವೇ 'ಅಯ್ಯೋ ಶಿವನೇ' ಎನ್ನುವಂತೆ ಮಾಡಿದೆ.
ತನ್ನ ಅಧ್ಯಕ್ಷರ ಭದ್ರತೆಗಾಗಿ ಅಮೆರಿಕಾ ಮುಂದಿಡುತ್ತಿರುವ ಒಂದೊಂದು ಡಿಮಾಂಡುಗಳ ಪಟ್ಟಿಗೆ ಭಾರತದ ಗೃಹಸಚಿವಾಲಯವೇ ಹೈರಾಣವಾಗಿ ಹೋಗಿದೆ.

ಈ ನಡುವೆ ಒಬಾಮ ಭಾರತ ಭೇಟಿಯ ವೇಳೆ ಅಮೆರಿಕ, ಉಗ್ರರಿಗೆ ನೀಡಿರುವ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ಮತ್ತೆ ತನ್ನ ಡಬಲ್ ಸ್ಟ್ಯಾಂಡರ್ಡನ್ನು ಎತ್ತಿ ತೋರಿಸುವಂತೆ ಮಾಡಿದೆ.
ಅಲ್ಲದೇ, ಉಗ್ರರ ಸಂಹಾರದ ವಿಚಾರದಲ್ಲಿ ತನ್ನ ಕಠಿಣ ನಿಲುವು ಸ್ಪಷ್ಟ ಪಡಿಸುವುದರಲ್ಲಿ ಮತ್ತೆ ಮತ್ತೆ ಎಡವುತ್ತಿರುವುದು ಸಾಬೀತಾಗುತ್ತಿದೆ. (ಒಬಾಮಾರಿಂದ ಭಾರತದ ನಿರೀಕ್ಷೆಗಳು)
ಭಾರತಕ್ಕೆ ಭೇಟಿ ನೀಡುತ್ತಿರುವ ನಮ್ಮ ಅಧ್ಯಕ್ಷರಿಗೆ ಮತ್ತು ನಮ್ಮ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ನಿಮ್ಮ ದೇಶದ ಮೂಲಕ ತೊಂದರೆಯಾಗದಂತೆ ನೋಡಿಕೊಳ್ಳಿ. ಜೊತೆಗೆ, ಈ ವೇಳೆ ಗಡಿ ಉಲ್ಲಂಘನೆಯಾಗದಂತೆ ಎಚ್ಚರವಹಿಸಿ.
ಈ ಎಚ್ಚರಿಕೆಯ ನಡುವೆಯೂ ಭಯೋತ್ಪಾದನಾ ಕೃತ್ಯ ನಡೆದೇ ಆದಲ್ಲಿ ಉಗ್ರ ಚಟುವಟಿಕೆಗಳನ್ನು ಬುಡಸಮೇತ ಮಟ್ಟಹಾಕುತ್ತೇವೆ ಎಂದು ಅಮೆರಿಕ, ಪಾಕಿಸ್ತಾನದ ಮೂಲಕ ಉಗ್ರರಿಗೆ ಎಚ್ಚರಿಕೆ ನೀಡಿದೆ.
ಅಮೆರಿಕಾದ ಈ ಎಚ್ಚರಿಕೆ, ಒಬಾಮ ಭೇಟಿಯ ನಂತರ ಪಾಕಿಸ್ತಾನ, ಭಾರತದ ವಿರುದ್ದ ಉಗ್ರ ಚಟುವಟಿಕೆ ಮುಂದುವರಿಸಿದರೆ ಅದಕ್ಕೆ ತನ್ನ ತಕರಾರು ಏನೂ ಇಲ್ಲವೇ? ಎನ್ನುವ ಪ್ರಶ್ನೆ ಇದರಿಂದ ಉದ್ಭವಿಸಿದೆ. ತಮ್ಮ ಅಧ್ಯಕ್ಷರು, ಅಧಿಕಾರಿಗಳು ಮಾತ್ರ ಮಾತ್ರ ಸೇಫ್ ಆಗಿದ್ದರೆ ಸಾಕು, ಇತರರು ಏನಾದರೂ ಆಗಲಿ ಎನ್ನುವ ಅಮೆರಿಕಾದ ಧೋರಣೆಯೇ? ಎನ್ನುವ ಚರ್ಚೆಗೂ ನಾಂದಿ ಹಾಡಿದೆ.
ವಿಶ್ವದ ದೊಡ್ಡಣ್ಣ ಎನ್ನುವ ಸ್ಥಾನದಲ್ಲಿರುವ ಇವರ ಸ್ವಾರ್ಥ ಹೇಳಿಕೆ ' ದೊಡ್ಡಣ್ಣ 'ಎನ್ನುವ ಪದಕ್ಕೇ ಅಪವಾದ ಎನ್ನುವುದು ಅಲ್ಲಲ್ಲಿ ಕೇಳಿಬರುತ್ತಿರುವ ಮಾತು. ಅಮೆರಿಕ ಅಧ್ಯಕ್ಷದ್ದು ಮತ್ತು ಅಲ್ಲಿನ ಅಧಿಕಾರಿಗಳದ್ದು ರಕ್ತ, ಮಿಕ್ಕವರದ್ದು ಟೊಮ್ಯಾಟೊ ಸಾಸಾ ಎನ್ನುವಂತಾಗಿದೆ.
ಭಾರತದಲ್ಲೊಂದು, ಪಾಕಿಸ್ತಾನದಲ್ಲೊಂದು ಹೇಳಿಕೆ ನೀಡುವ ಅಮೆರಿಕಾ, ಪಾಕಿಸ್ತಾನಕ್ಕೆ 280 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾಗಿರುವುದು ಆ ದೇಶದ ಇಬ್ಬಗೆಯ ನಿಲುವಿಗೆ ಕೊಡಬಹುದಾದ ಉದಾಹರಣೆ. ಪಾಕಿಸ್ತಾನ ಕೂಡಾ ಒಬಾಮ ಭೇಟಿಯ ವೇಳೆ ಯಾವುದೇ ಉಗ್ರ ಚಟುವಟಿಕೆ ಸಂಭವಿಸದಂತೆ ತಾತ್ಕಾಲಿಕವಾಗಿ ಭಾರೀ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಈ ಹಿಂದೆ ಕೂಡಾ ಅಮೆರಿಕಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕಾ ಇದೇ ರೀತಿಯ ಖಡಕ್ ಹೇಳಿಕೆಯನ್ನು ನೀಡಿತ್ತು. ಐಎಸ್ಐ ಪ್ರಾಯೋಜಿತ ಉಗ್ರ ಚಟುವಟಿಕೆಗಳು ನಡೆದರೂ ಖಡಕ್ ಹೇಳಿಕೆ ಮಾತ್ರ ನೀಡುತ್ತಿರುವ ಅಮೆರಿಕ, ಅದನ್ನು ಕಾರ್ಯಗತಗೊಳಿಸಲು ಮೀನಮೇಷ ಎಣಿಸುತ್ತಿದೆ. (ಒಬಾಮಾ ಭೇಟಿ, ಹತ್ತು ಸಂಗತಿಗಳು)
ಒಬಾಮ ಭದ್ರತೆಗೆ ದೆಹಲಿಯ ವಿವಿದೆಡೆ ಕೇಂದ್ರ ಸರಕಾರ ಸುಮಾರು 15ಸಾವಿರ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದೆ. ಅಮೆರಿಕಾದ ಅಧ್ಯಕ್ಷರ ಭದ್ರತೆಗೆ ನೀವು ತೋರಿಸುತ್ತಿರುವ ಕಾಳಜಿ ಜನಸಾಮಾನ್ಯರ ಮೇಲೆ ಯಾಕಿಲ್ಲ ಎಂದು ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿಯೂ ಆಗಿದೆ.
ತಮ್ಮವರನ್ನು ಹೊರತು ಇನ್ನೊಬರನ್ನು ಹೆಚ್ಚಾಗಿ ನಂಬದ ಅಮೆರಿಕನ್ನರು, ಒಬಾಮಾ ಅವರ ಊಟೋಪಾಚಾರಕ್ಕೂ ಅಮೆರಿಕಾದಿಂದಲೇ ಬಾಣಸಿಗರನ್ನು ಕರೆತರುತ್ತಿದ್ದಾರೆ. ಆದರೆ ಒಬಾಮ ಅವರಿಗೆ ಭಾರತದ ಡಿಶ್ ತಯಾರಿಸಲಾಗುತ್ತದೆ, ಜೊತೆಗೆ ನಮ್ಮ ಬಾಣಸಿಗರೂ ಜೊತೆಯಲ್ಲಿ ಇರುತ್ತಾರೆ.
ಭಾರತದ ಭೇಟಿಯ ವೇಳೆ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಲಿರುವ ಒಬಾಮಾ ಭದ್ರತೆಗಾಗಿ ದೆಹಲಿ - ಆಗ್ರಾ ರಾಷ್ಟೀಯ ಹೆದ್ದಾರಿಯನ್ನೇ ಎರಡು ದಿನ ಬಂದ್ ಮಾಡಲು ಸರಕಾರ ನಿರ್ಧರಿಸಿದೆ. ದೆಹಲಿ ಈಗಾಗಲೇ ಏಳು ಸುತ್ತಿನ ಕೋಟೆಯಂತಾಗಿದೆ.
ಗಣರಾಜ್ಯೋತ್ಸವಕ್ಕೆ ವಿದೇಶಿ ನಾಯಕರನ್ನು ಕರೆಯುವುದು ಪದ್ದತಿ. ಆದರೂ, ದೆಹಲಿ ಜನತೆಗೆ ನಿದ್ದೆ ಇಲ್ಲದಂತೆ ಮಾಡಿ, ಇಷ್ಟೆಲ್ಲಾ ತೊಂದರೆ, ರಿಸ್ಕ್ ತೆಗೆದುಕೊಂಡು, ಒಬಾಮ ಸಾಹೇಬ್ರನ್ನ ಆಹ್ವಾನಿಸುವ ಅವಶ್ಯಕತೆ ಇತ್ತೇ?












Click it and Unblock the Notifications