ಯುಪಿ: ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಮಂದಿ ಸಾವು; 1300 ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ತತ್ತರ
ಲಕ್ನೋ ಅಕ್ಟೋಬರ್ 12: ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ತಿಳಿದು ಬಂದಿದೆ. 18 ಜಿಲ್ಲೆಗಳಲ್ಲಿ 1,300 ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ಅತಿವೃಷ್ಟಿಯಿಂದ ಮೂವರು ಮೃತಪಟ್ಟರೆ, ಸಿಡಿಲು ಬಡಿದು, ಹಾವು ಕಚ್ಚಿ, ನೀರಿನಲ್ಲಿ ಮುಳುಗಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ವರದಿ ತಿಳಿಸಿದೆ.
ಬಲರಾಂಪುರ ಜಿಲ್ಲೆಯಲ್ಲಿ ಒಟ್ಟು 287 ಗ್ರಾಮಗಳು, ಸಿದ್ಧಾರ್ಥನಗರದಲ್ಲಿ 129 ಗ್ರಾಮಗಳು, ಗೋರಖ್ಪುರದಲ್ಲಿ 120, ಶ್ರಾವಸ್ತಿಯಲ್ಲಿ 114, ಗೊಂಡಾದಲ್ಲಿ 110, ಬಹ್ರೈಚ್ನಲ್ಲಿ 102, ಲಖಿಂಪುರ ಖೇರಿಯಲ್ಲಿ 86 ಮತ್ತು ಬಾರಾಬಂಕಿ ಜಿಲ್ಲೆಯಲ್ಲಿ 82 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾಣಹಾನಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ತಕ್ಷಣವೇ ವಿತರಿಸಲು ಸೂಚಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿ ತಂಡಗಳನ್ನು ನಿಯೋಜಿಸಲು ಸಿಎಂ ಯೋಗಿ ಅವರು ನಿರ್ದೇಶನ ನೀಡಿದರು.

ಯುಪಿಯಲ್ಲಿ ಬಹುತೇಕ ನದಿಗಳು ಭರ್ತಿ
ನಿರಂತರ ಮಳೆಯಿಂದಾಗಿ ಗಂಗಾ ನದಿ ಬದೌನ್ನಲ್ಲಿ (ಕ್ಯಾಚ್ಬ್ರಿಡ್ಜ್) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಲಖಿಂಪುರ ಖೇರಿಯಲ್ಲಿ ಶಾರದಾ ನದಿ (ಪಾಲಿಯಾಕಲನ್ ಮತ್ತು ಶಾರದಾನಗರ), ಬಾರಾಬಂಕಿಯ ಘಘರಾ ನದಿ (ಎಲ್ಜಿನ್ಬ್ರಿಡ್ಜ್), ಅಯೋಧ್ಯೆ ಮತ್ತು ಬಲ್ಲಿಯಾ (ತುರ್ತಿಪಾರ್), ಶ್ರಾವಸ್ತಿ (ಭಿಂಗಾ), ಬಲರಾಮ್ಪುರ, ಸಿದ್ಧಾರ್ಥನಗರ (ಬನ್ಸಿ) ಮತ್ತು ಗೋರಖ್ಪುರ (ಬರ್ದ್ಘಾಟ್) ನಲ್ಲಿರುವ ರಾಪ್ತಿ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.
ಸಿದ್ಧಾರ್ಥನಗರ (ಕಾಕ್ರಾಹಿ) ನಲ್ಲಿರುವ ಬುಧಿ ರಾಪ್ತಿ ನದಿ, ಮಹಾರಾಜ್ಗಂಜ್ನಲ್ಲಿ (ತ್ರಿಮೋಹಿಂಗ್ಹಾಟ್) ರೋಹಿನ್ ನದಿ ಮತ್ತು ಗೊಂಡಾ (ಚಂದ್ರದೀಪ್ಘಾಟ್) ನಲ್ಲಿ ಕುವಾನೋ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ನೋ ಜಿಲ್ಲಾಡಳಿತ ಸೋಮವಾರ ಮತ್ತು ಮಂಗಳವಾರ ಎಲ್ಲಾ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

ಶಾಲೆಗಳಿಗೆ ರಜೆ ಘೋಷಣೆ
ರಾಜ್ಯದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ವಿಶೇಷ ಕಾರ್ಯದರ್ಶಿ ಮನೋಜ್ ಕುಮಾರ್ ಅವರು ಉನ್ನತ ಶಿಕ್ಷಣ ನಿರ್ದೇಶಕರು ಹಾಗೂ ಎಲ್ಲ ಪ್ರಾದೇಶಿಕ ಉನ್ನತ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಮತ್ತು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳು ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತವೆ.
ಇದಕ್ಕೂ ಮುನ್ನ ಭಾನುವಾರ ಲಕ್ನೋ, ನೋಯ್ಡಾ, ಗಾಜಿಯಾಬಾದ್, ಆಗ್ರಾ, ಮೀರತ್, ಅಲಿಗಢ್, ಮಥುರಾ, ಕಾನ್ಪುರ್, ಇಟಾಹ್, ಮೈನ್ಪುರಿ ಮತ್ತು ಫಿರೋಜಾಬಾದ್ನ ಜಿಲ್ಲಾ ಅಧಿಕಾರಿಗಳು ಸೋಮವಾರ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮಂಗಳವಾರವೂ ಅಧಿಕ ಮಳೆಯಾಗಿದೆ.

ಸಿಡಿಲು ಬಡಿದು ಏಳು ಮಂದಿ ಸಾವು
ಯುಪಿಉ ಝಾನ್ಸಿಯಲ್ಲಿ ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಇಟೇಲ್ ಗ್ರಾಮದ ಕ್ರಾಂತಿ (28), ಅವರ ಪುತ್ರಿ ನಿಕಿತಾ (15) ಮತ್ತು ಪಿಂಕಿ (25) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಮೌರಾನಿಪುರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮೃತ್ಯುಂಜಯ್ ಮಿಶ್ರಾ ತಿಳಿಸಿದ್ದಾರೆ. ಜೊತೆಗೆ ಸಿಡಿಲು ಬಡಿದು ಭದರ್ವಾರ ಗ್ರಾಮದ ಕುಂಜನ್ (25), ಬಸರಿ ಗ್ರಾಮದ ನಿವಾಸಿ ಚರಣ್ ಸಿಂಗ್ (36) ಮತ್ತು ಲರೌನ್ ಕಾಟೇರಾ ಗ್ರಾಮದ ಕಾಳಿಚರಣ್ ಕುಶ್ವಾಹ (55) ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ಇನ್ನು ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಲಖನ್ಪುರ ರಾಕ್ಸಾ ನಿವಾಸಿ ಗೋವಿಂದ್ ಸಿಂಗ್ (49) ಅವರು ತಮ್ಮ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಎರಡು ಡಜನ್ ರೈಲುಗಳ ಸಂಚಾರ ತಡ
ಪ್ರವಾಹದ ನೀರು ಬಲರಾಮ್ಪುರದ ಗೊಂಡಾ-ಬರ್ಹ್ನಿ-ಗೋರಖ್ಪುರ ರೈಲ್ವೆ ಸೇತುವೆಯನ್ನು ಮುಳುಗಿಸಿದೆ. ಇದು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಬಲರಾಂಪುರ್ ಸ್ಟೇಷನ್ ಸೂಪರಿಂಟೆಂಡೆಂಟ್ ಪಿಆರ್ ಸೋಮವಂಶಿ ಪ್ರಕಾರ, ಪ್ರವಾಹದ ನೀರು ರೈಲ್ವೆ ಸೇತುವೆಯನ್ನು ಮುಳುಗಿಸಿದ್ದರಿಂದ ಸುಮಾರು ಎರಡು ಡಜನ್ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಮುಂದಿನ ಆದೇಶದವರೆಗೆ ರೈಲುಗಳ ಸಂಚಾರವನ್ನು ಹಲವೆಡೆ ನಿಲ್ಲಿಸಲಾಗಿದೆ. ಇನ್ನೂ ಕೆಲವೆಡೆ ರೈಲು ಸಂಚಾರ ತಡ ಮಾಡಲಾಗಿದೆ.












Click it and Unblock the Notifications